- ಮಲೇಬೆನ್ನೂರು ರೈತರಿಂದ ಡಿಸಿ ಕಚೇರಿವರೆಗೆ ಬೃಹತ್ ಬೈಕ್ ರ್ಯಾಲಿ
- - -ಮಲೇಬೆನ್ನೂರು: ರೈತರ ಭತ್ತ, ಮೆಕ್ಕೆಜೋಳ, ರಾಗಿ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಲು ತಾತ್ಸಾರ ಮಾಡುತ್ತಿದೆ ಎಂದು ಹರಿಹರ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ಆರೋಪಿಸಿ, ಬೆಳಗ್ಗೆ 11 ಗಂಟೆಗೆ ಪಟ್ಟಣದ ನೀರಾವರಿ ನಿಗಮ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿದರು.
ಮುಖಂಡ ಹಾಳೂರು ನಾಗರಾಜ್ ಮಾತನಾಡಿ, ರೈತರ ಬೆಳೆಗಳಿಗೆ ಕೇವಲ ₹೨೦೦೦, ₹೧೬೦೦ ಬೆಲೆಯನ್ನು ಸರ್ಕಾರ ಟಿಪ್ಸ್ ಎಂಬಂತೆ ನೀಡುತ್ತಿದೆ. ರಾಜ್ಯದಲ್ಲಿ ಹೆಚ್ಚು ಭತ್ತ ಬೆಳೆದು, ಅನ್ನ ನೀಡುವ ಹರಿಹರ ತಾಲೂಕಿನ ರೈತರಿಗೆ ಸೂಕ್ತ ಬೆಲೆ ದೊರಕದೇ ಅನ್ಯಾಯವಾಗುತ್ತಿದೆ. ವೀದೇಶಗಳಿಗೂ ಅಕ್ಕಿ ರಫ್ತು ಆಗುತ್ತಿದೆ. ಸರ್ಕಾರ ಅರ್ಥ ಮಾಡಿಕೊಂಡು ಬೆಂಬಲ ಬೆಲೆ ನೀಡಬೇಕು. ರೈತರ ಶವದ ಮೇಲೆ ಜಿಲ್ಲಾಧಿಕಾರಿ ಶ್ರೀಮಂತಿಕೆ ಕಟ್ಟಿಕೊಳ್ಳಬಾರದು. ಬೆಳಗಾವಿಯಂತೆ ದಾವಣಗೆರೆ ಜಿಲ್ಲೆಯಲ್ಲಿಯೂ ಬೃಹತ್ ಚಳವಳಿ ನಡೆಯುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.ಹಾವೇರಿ ರೈತ ಸಂಘದ ಜಿಲ್ಲಾಧ್ಯಕ್ಷ ವೀರಣ್ಣ ಮಾತನಾಡಿ, ರಾಜಕಾರಣಿಗಳೆಲ್ಲ ಅಡಕೆ ತೋಟ ಮಾಡಿಕೊಂಡು ಭತ್ತ ಬೆಳೆಯುವ ರೈತರನ್ನು ಕಡೆಗಣಿಸದೇ ರೈತರ ಕಷ್ಟವನ್ನರಿತು ಬೆಳೆದ ಅನ್ನಕ್ಕೆ ಸೂಕ್ತ ನ್ಯಾಯದ ಬೆಲೆ ಕೊಡಬೇಕು. ಎಲ್ಲ ಸರ್ಕಾರಗಳು ರೈತರ ಮೇಲೆ ದಬ್ಬಾಳಿಕೆ ನಡೆಸಿ, ಮೋಸ ಮಾಡುತ್ತಿವೆ ಕಿಡಿಕಾರಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ತಿಪ್ಪೇಸ್ವಾಮಿ, ರೇವಣಸಿದ್ದಪ್ಪ, ನಂದೀಶ್, ಶಂಭಣ್ಣ, ರಾಘವೇಂದ್ರ, ಪರಮೇಶ್ವರಪ್ಪ, ಆಂಜನಿ, ಮಾಲತೇಶ, ಗಂಗನಗೌಡ, ರವಿಂದ್ರ, ಬಸವರಾಜಪ್ಪ ಮತ್ತಿತರರು ಇದ್ದರು.- - -
-ಚಿತ್ರ-೧: ಭತ್ತಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ಪ್ರತಿಭಟನೆ, ಬೈಕ್ ರ್ಯಾಲಿ ನಡೆಸಿದರು.