ಕಾರವಾರ: ಚಾಲಿ ಅಡಕೆಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ ಸಂಘದ ಜಿಲ್ಲಾ ಘಟಕದ ವತಿಯಿಂದ ಪ್ರಧಾನಮಂತ್ರಿಗೆ ಬರೆದ ಮನವಿಯನ್ನು ಹೊನ್ನಾವರದಲ್ಲಿ ತಹಸೀಲ್ದಾರ್ ರವಿರಾಜ ದೀಕ್ಷಿತ ಅವರ ಮೂಲಕ ಸಲ್ಲಿಸಲಾಯಿತು.
ಅಡಕೆ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ರೈತರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಅಡಕೆ ಬೆಳೆಗೆ ಬೆಂಬಲ ಬೆಲೆ ಬೇಕೇಬೇಕು. ಸದ್ಯದ ಪರಿಸ್ಥಿತಿಯಲ್ಲಿ ಚಾಲಿ ಅಡಕೆ ಪ್ರತಿ ಕ್ವಿಂಟಲ್ಗೆ ₹೪೦ ಸಾವಿರಕ್ಕಿಂತ ಕಡಿಮೆ ಬರದಂತೆ ಬೆಂಬಲ ಬೆಲೆ ಘೋಷಿಸಬೇಕು. ಇದರೊಟ್ಟಿಗೆ ಅಡಕೆ ವಿದೇಶಿ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ರಾಜ್ಯಹಾಗೂ ಕೇಂದ್ರ ಸರ್ಕಾರಗಳು ಈವರೆಗೆ ಭತ್ತ ರಾಗಿ, ಜೋಳ ಇನ್ನಿತರ ಬೆಳೆಗಾರರನ್ನು ಮಾತ್ರ ರೈತರೆಂದು ಪರಿಗಣಿಸಿದೆ. ಅದೇ ರೀತಿ ಅಡಕೆ ಬೆಳೆಗಾರರನ್ನೂ ರೈತರೆಂದು ಪರಿಗಣಿಸಬೇಕು.ಅಡಕೆ ಸುಲಿಯುವ ಯಂತ್ರ, ಕಳೆ ಹೊಡೆಯುವ ಯಂತ್ರ, ಗುಂಡಿ ತೋಡುವ ಯಂತ್ರ, ಕೊನೆ ದೋಟಿ, ಕೊಳೆ ಪಂಪು ಹಾಗೂ ಅಡಕೆ ಕೃಷಿಗೆ ಸಂಬಂಧಿಸಿದ ಸಲಕರಣೆಗಳಿಗೆ ಶೇ. ೭೫ರಷ್ಟು ಸಬ್ಸಿಡಿ ಒದಗಿಸಬೇಕು. ಕಸಿ ಕಟ್ಟಿದ ಕಾಳುಮೆಣಿಸನ ಬಳ್ಳಿ, ವೀಳ್ಯದೆಲೆ ಬಳ್ಳಿಗಳನ್ನು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಉಚಿತವಾಗಿ ನೀಡಬೇಕು. ಹನಿ ನೀರಾವರಿ, ಐಬೆಕ್ಸ್ ತಂತಿ ಬೇಲಿ, ಸೋಲಾರ್ ಪಂಪು, ಸೋಲಾರ್ ತಾಡಪತ್ರಿಗೂ ಶೇ. ೭೫ ಸಬ್ಸಿಡಿ ಬೇಕು. ಮೈಲುತುತ್ತ- ಬಯೋಫೈಟ್ ಮುಂತಾದವನ್ನು ರೈತರು ಕೊಳ್ಳುವ ಸಮಯದಲ್ಲೇ ಶೇ. ೭೫ರಷ್ಟು ಸಬ್ಸಿಡಿ ಸಿಗಬೇಕು. ರೈತರ ಕುಟುಂಬಕ್ಕೆ ಜನರಲ್ ವಿಮೆ ಮಾಡಿಸಬೇಕು. ಭತ್ತಕ್ಕೂ ಬೆಂಬಲ ಬೆಲೆ ಹೆಚ್ಚಿಸಿ, ಬೀಜ- ರಸಗೊಬ್ಬರಕ್ಕೆ ಶೇ. ೭೫ ಸಬ್ಸಿಡಿ ಬೇಕು.
ಸಾಲ್ಕೋಡ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ನೀರಿನ ಕಟ್ಟೆಗಳು ಕಸಕಡ್ಡಿಗಳಿಂದ ಕಟ್ಟಿಕೊಂಡು ಮನೆಗಳಿಗೆ ನೀರು ನುಗ್ಗುತ್ತಿದೆ. ಅಲ್ಲಲ್ಲಿ ಹೊಳೆಯ ಒತ್ತುವರಿಯೂ ಆಗಿದ್ದು ಸಮಸ್ಯೆ ಬಗೆಹರಿಸಬೇಕು. ಸಾಕಷ್ಟು ಉದ್ಯೋಗ ಸೃಷ್ಟಿಸಿ ಸರ್ಕಾರಕ್ಕೆ ತೆರಿಗೆ ಭರಿಸುತ್ತಿರುವ ಅಡಕೆ ಬೆಳೆಯ ವಿಚಾರದಲ್ಲಿ ಭಾರತೀಯ ಕಿಸಾನ ಸಂಘದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಡಿ.ಎಂ. ನಾಯ್ಕ, ತಾಲೂಕು ಸಮಿತಿ ಅಧ್ಯಕ್ಷ ವಿಷ್ಣು ಈಶ್ವರ ಹೆಗಡೆ, ಉಪಾಧ್ಯಕ್ಷ ಗಣಪತಿ ಈಶ್ವರ ಹೆಗಡೆ ಮಾಳಕೋಡ, ಆರ್.ಜಿ. ಭಟ್, ಜಿ.ಜಿ. ಹೆಗಡೆ, ಗಣೇಶ ರಾಮ ಹೆಗಡೆ, ಹರ್ಷ ಭಟ್ಟ, ಗಜಾನನ ಹೆಗಡೆ, ಮಹಾಬಲೇಶ್ವರ ಹೆಗಡೆ, ಜೀವನ ಪಂಡಿತ ಇತರರು ಇದ್ದರು.