ಡಿಕೆಶಿಗೆ ಮನವಿ ಪತ್ರ ಸಲ್ಲಿಕೆ
ಐ.ಡಿ. ಪೀಠ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಕಾಫಿ ತೋಟ ಮತ್ತು ಕೃಷಿ ಭೂಮಿ ಇದ್ದು, ಇದನ್ನು ಖರೀದಿ ಮಾಡಲು, ಬ್ಯಾಂಕ್, ಸೊಸೈಟಿ ಸಾಲ ಪಡೆಯಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಉಪ್ಪಳ್ಳಿ ಕೆ.ಭರತ್ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದರು.
ಶೃಂಗೇರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಭರತ್ ಅವರು, ಕಳೆದ 13- 14 ವರ್ಷಗಳಿಂದ ಇಲ್ಲಿನ ಕಾಫಿ ತೋಟದ ಮಾಲೀಕರು ಮತ್ತು ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರ ಗೋಳನ್ನು ಕೇಳುವವರು ಇಲ್ಲದಂತಾಗಿದೆ. ಕಳೆದ 2009ರಲ್ಲಿ ಅಂದಿನ ಸ್ಥಳೀಯ ಶಾಸಕ ಸಿ.ಟಿ.ರವಿಯವರು ಈ ವ್ಯಾಪ್ತಿಯಲ್ಲಿ ಜಮೀನು ಮತ್ತು ಕಾಫಿ ತೋಟಗಳೆಲ್ಲ ಇನಾಂ ಭೂಮಿಯೆಂದು ಅಂದಿನ ಅವರ ಸರ್ಕಾರದಲ್ಲಿ ಯಾವುದೇ ರೀತಿಯಾದ ವಹಿವಾಟು ಮಾಡಿದರೂ ಕೂಡ ನೋಂದಾವಣೆ ಆಗದಂತೆ ತಡೆ ಹಿಡಿದಿದ್ದರು ಎಂದು ತಿಳಿಸಿದರು.ಬಿಜೆಪಿ ಸರ್ಕಾರ ರಾಜ್ಯದಲ್ಲಿ ಎರಡು ಬಾರಿ ಅಧಿಕಾರಕ್ಕೆ ಬಂದಿದ್ದರೂ ಕೂಡ ಈ ವ್ಯಾಪ್ತಿಯಲ್ಲಿ ಇನಾಂ ಭೂಮಿ ಇದೆಯೇ, ಇನಾಂ ಕೊಟ್ಟವರು ಯಾರು ಅಥವಾ ಇನಾಂ ಭೂಮಿಯನ್ನು ಪತ್ತೆ ಹಚ್ಚಲು ಸಮಿತಿಯನ್ನು ರಚಿಸಿದ್ದಾರೆಯೇ, ಇದಾವುದನ್ನು ಇಲ್ಲಿಯವರೆಗೆ ಪ್ರಶ್ನಿಸಿಲ್ಲ ಎಂದು ಹೇಳಿದರು.
ಭೂಮಿಯನ್ನು ಸಾವಿರಾರು ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ ಅಥವಾ ಮನೆ ಕಟ್ಟುವುದು ಇನ್ನಾವುದೇ ರೀತಿಯಾದ ವ್ಯವಹಾರ ವಹಿವಾಟುಗಳನ್ನು ನಡೆಸಲು ಆಗದೇ ತಮ್ಮ ಸಂಕಷ್ಟವನ್ನು ಯಾರಲ್ಲಿ ತೋಡಿಕೊಳ್ಳುವುದು ಎಂಬುದು ತಿಳಿಯದೆ ದಿಕ್ಕು ತೋಚದಂತೆ ತ್ರಿಶಂಕು ಸ್ಥಿತಿಯಲ್ಲಿ ಇಲ್ಲಿನ ನಿವಾಸಿಗಳು ಜೀವನ ನಡೆಸುತ್ತಿದ್ದಾರೆ. ಕೂಡಲೇ ಈ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.