ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಮುಸ್ಲಿಂ ಮುಖಂಡರ ಆಗ್ರಹ
ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಹಿರಿಯ ಅಲ್ಪಸಂಖ್ಯಾತ ನಾಯಕ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕು ಎಂದು ಬಾಣಾವರ ಮುಸ್ಲಿಂ ಸಮಾಜದ ಮುಖಂಡರು ಕಾಂಗ್ರೆಸ್ ಹೈಕಮಾಂಡ್ಗೆ ಆಗ್ರಹಿಸಿದರು.
ಪಟ್ಟಣದ ಪ್ರಸಿದ್ಧ ಗವಿ ಹಜರತ್ ಸೈಯದ್ ಕಲಂದರ್ ಶಾ ಹುಸೇನಿ ದರ್ಗಾದಲ್ಲಿ ವಿಶೇಷ ಫಾತೇಹಾ ನೆರವೇರಿಸಿ, ರಾಜ್ಯದ ಜನಪರ ನಾಯಕರಿಗೆ ಉನ್ನತ ಜವಾಬ್ದಾರಿ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಸಮಾಜದ ಅಧ್ಯಕ್ಷ ಸಯ್ಯದ್ ರಹೀಂ ಸಾಬ್, ಶಾಸಕ ಕೆಎಂ ಶಿವಲಿಂಗೇಗೌಡರು ಎಲ್ಲಾ ಸಮುದಾಯಗಳನ್ನು ವಿಶ್ವಾಸದಲ್ಲಿ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಡೆಸುತ್ತಿದ್ದಾರೆ. ಕ್ಷೇತ್ರದ ಜನರ ಆಶಯದಂತೆ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರ ಗೌರವಿಸಬೇಕು ಎಂದು ಹೇಳಿದರು.ಮುಸ್ಲಿಂ ಸಮಾಜದ ಮುಖಂಡ ಮೊಹಮ್ಮದ್ ಇಲಿಯಾಜ್ ಸಾಬ್ ಮಾತನಾಡಿ, ಶಿವಲಿಂಗೇಗೌಡರು ಶಾಸಕರಾದ ನಂತರ ಅರಸೀಕೆರೆ ಕ್ಷೇತ್ರವು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ನದಿ ಮೂಲದ ನೀರಿನ ಯೋಜನೆ, ವಸತಿ ಶಾಲೆಗಳ ಸ್ಥಾಪನೆ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಆರ್ಥಿಕ ಹಾಗೂ ಆಡಳಿತಾತ್ಮಕ ಅನುಭವ ಹೊಂದಿರುವ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಶಫಿ ಅಹಮದ್ ಸಾಬ್, ಮೊಹಮ್ಮದ್ ಇಬ್ರಾಹಿಂ ಸಾಹೇಬ್, ಕೆಸಿ ಕಲೀಮ್ ಸಾಬ್, ಆದಿಲ್, ಆಯುಬ್, ಅಪ್ಸರ್, ನಜೀರ್ ಸಾಬ್, ಅಬ್ರಾರ್ ಸೇರಿದಂತೆ ಹಲವು ಮುಖಂಡರು ಮತ್ತು ಯುವಕರು ಉಪಸ್ಥಿತರಿದ್ದರು.