ಕುಷ್ಟಗಿ: ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಆಧಾರ ನೊಂದಣಿ ಕೇಂದ್ರ ಮರು ಸ್ಥಾಪಿಸುವುದು ಹಾಗೂ ಸಮೀಕ್ಷೆಯಿಂದ ತೋಟದ ಮನೆಯಲ್ಲಿ ವಾಸಿಸುವ ರೈತ ಕುಟುಂಬಗಳು ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಜೀರಸಾಬ ಮೂಲಿಮನಿ ಮನವಿ ಸಲ್ಲಿಸಿದರು.
ಸುಮಾರು ಒಂದು ವರ್ಷಗಳಿಂದ ಜಿಲ್ಲೆಯಾದ್ಯಂತ ಬ್ಯಾಂಕು,ನಾಡಕಚೇರಿ, ಪೋಸ್ಟ್ ಆಫೀಸ್ ಗಳಲ್ಲಿರುವ ಬಹುತೇಕ ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳು ಸ್ಥಗಿತಗೊಂಡಿವೆ, ಶೀಘ್ರವೇ ಪುನಾರಾರಂಭಿಸಬೇಕು ಹಾಗೂ ಜೆಸ್ಕಾಂ ಅಧಿಕೃತ ಸಮೀಕ್ಷೆಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಎಂಟು ಸಾವಿರ ರೈತ ಕುಟುಂಬಗಳು ತೋಟದ ಮನೆಗಳಲ್ಲಿ ವಾಸಿಸುತ್ತಿದ್ದು ಅಲ್ಲಿ ಮೀಟರ್ ಇರುವುದಿಲ್ಲ ಸಮೀಕ್ಷೆಯ UHID ಅಂಟಿಸಿರುವುದಿಲ್ಲ ಈ ಸಮೀಕ್ಷೆಯಿಂದ ತೋಟದ ಮನೆಯಲ್ಲಿ ವಾಸಿಸುವ ರೈತ ಕುಟುಂಬಗಳು ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಶೀಘ್ರದಲ್ಲಿ ಆಧಾರ್ ಕಾರ್ಡ್ ನೋಂದಣಿ ಕ್ಯಾಂಪ್ ಪ್ರಾರಂಭಿಸಲಾಗುವುದು ಹಾಗೂ ತೋಟದ ಮನೆಗಳಲ್ಲಿ ವಾಸಿಸುವ ರೈತ ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.