ಹಾವೇರಿ: ಇತ್ತೀಚೆಗೆ ಮಲ್ಪೆಯಲ್ಲಿ ನಡೆದ ಪ್ರತಿಭಟನೆ ವೇಳೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಉಡುಪಿ ಜಿಲ್ಲಾ ಪೊಲೀಸರು ದಾಖಲಿಸಿದ ಸುಮೋಟೊ ಕೇಸನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಹಾವೇರಿ ಜಿಲ್ಲಾ ಗಂಗಾಮತಸ್ಥರ ಸಂಘದ ಮುಖಂಡರು ಶುಕ್ರವಾರ ಅಪರ ಜಿಲ್ಲಾಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಮುಖಂಡರು, ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರನ್ನು ಹಿಡಿದುಕೊಟ್ಟಂತಹ ಮೀನುಗರ ಮಹಿಳೆಯರ ಮೇಲೆ ಕೇಸು ಹಾಕಿ ಬಂಧಿಸಿರುವ ಮಹಿಳೆಯರ ಪರ ನಡೆದ ಸಮಾಲೋಚನಾ ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನ್ಯಾಯಸಮ್ಮತ ತೀರ್ಮಾನಕ್ಕೆ ಆಗ್ರಹಿಸಿದ್ದಾರೆ.
ಆದರೆ ಮಧ್ವರಾಜ್ ವಿರುದ್ಧ ಉಡುಪಿ ಜಿಲ್ಲಾ ಪೊಲೀಸರು ಸುಮೊಟೊ ಕೇಸ್ ದಾಖಲಿಸಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದ್ದು, ಸಮಸ್ತ ಮೀನುಗಾರರ ಸಮಾಜವು ಖಂಡಿಸುತ್ತದೆ. ಈ ಕೂಡಲೇ ಸರ್ಕಾರ ಮಾಜಿ ಸಚಿವರ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಮನವಿ ಸಲ್ಲಿಸುವ ಮೂಲಕ ಎಚ್ಚರಿಸಿದ್ದಾರೆ.ಈ ವೇಳೆ ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಭೋವಿ, ಮುಖಂಡರಾದ ನಿಂಗಪ್ಪ ಹೆಗ್ಗಣ್ಣವರ, ಗುಡ್ಡಪ್ಪ ಮೈಲಾರ, ಪ್ರಕಾಶ ಅಂಬಿಗೇರ, ಶಂಭುಲಿಂಗ ಪಕ್ಕಣ್ಣವರ, ಬಸವರಾಜ ಸುಣಗಾರ, ಈರಪ್ಪ ಲಿಂಗದಹಳ್ಳಿ, ಪ್ರಭಾಕರ ಪಾರಿಗಂಟಿ, ಪರಮೇಶಪ್ಪ ಚಿಕ್ಕಮ್ಮನವರ, ಸಂಜೀವಪ್ಪ ಹುಲಿಹಳ್ಳಿ, ಶಿವರಾಜ ಹಿರೇಮತ್ತೂರ, ಪರಶುರಾಮ ಹಿರೇಮತ್ತೂರ ಸೇರಿದಂತೆ ಇತರರು ಇದ್ದರು.ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು
ಹಾವೇರಿ: ಜಮೀನಿಗೆ ತೆರಳುವ ದಾರಿ ಸಂಬಂಧ ವಾಗ್ವಾದ ನಡೆದು ಅಣ್ಣನ ಮಗನಿಂದಲೇ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಶುಕ್ರವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ನಗರದ ಅಕ್ಕಿಪೇಟೆ ನಿವಾಸಿ ಉಳಿವೆಪ್ಪ ಅಕ್ಕಿ(75) ಮೃತಪಟ್ಟ ವ್ಯಕ್ತಿ. ಕಳೆದ ಮಾ. 25ರಂದು ತನ್ನ ಅಣ್ಣನ ಮಗ ಬಸವರಾಜ ಅಕ್ಕಿ ಎಂಬಾತ ಜಮೀನಿಗೆ ತೆರಳುವ ದಾರಿ ಸಂಬಂಧ ಮೃತ ಉಳಿವೆಪ್ಪ ಅಕ್ಕಿಯನ್ನು ದೇವಸ್ಥಾನ ಎದುರಿಗೆ ನಾಲ್ಕೈದು ಬಾರಿ ಮಚ್ಚಿನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆಗೈದಿದ್ದ. ಇದರಿಂದ ಉಳಿವೆಪ್ಪ ಅಕ್ಕಿಯ ಕೈ, ತಲೆ, ಭುಜಕ್ಕೆ ಬಾರಿ ಪ್ರಮಾಣದ ಹೊಡೆತ ಬಿದ್ದಿತ್ತು. ಹಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಉಳಿವೆಪ್ಪ ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.