ಹಾನಗಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಕುತಂತ್ರಿಗಳ ಪಿತೂರಿಯಾಗಿದ್ದು, ಪಕ್ಷ ಹಾಗೂ ಹಿಂದುತ್ವದ ಹಿತದೃಷ್ಟಿಯಿಂದ ಮರುಪರಿಶೀಲಿಸಿ ಉಚ್ಚಾಟನೆ ಆದೇಶ ಹಿಂಪಡೆಯಬೇಕು ಎಂದು ಪಂಚಮಸಾಲಿ ಸಮಾಜದ ತಾಲೂಕು ಕಾರ್ಯದರ್ಶಿ ಎಸ್.ಎಂ. ಕೋತಂಬರಿ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಒತ್ತಾಯಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ, ಸಾಮಾಜಿಕವಾಗಿ ದಿಟ್ಟ ಹೋರಾಟಗಾರ, ಬಿಜೆಪಿಯ ಅತ್ಯುಚ್ಛ ನಾಯಕ ಬಸನಗೌಡ ಪಾಟೀಲರ ಉಚ್ಚಾಟನೆ ಹಾಸ್ಯಾಸ್ಪದವಾಗಿದೆ. ರಾಜ್ಯದಲ್ಲಿ ಹಿಂದುಗಳಿಗೆ ಯಾವುದೇ ರೀತಿಯ ತೊಂದರೆಯಾದರೆ ಮುಂದೆ ನಿಂತು ಹೋರಾಟ ಮಾಡುವ ಧೀರ ನಡೆಯ ಯತ್ನಾಳ ಅವರು ಪಂಚಾಮಸಾಲಿ ಸಮುದಾಯದ ದಿಟ್ಟ ಹೋರಾಟಗಾರರು. 2ಎ ಮೀಸಲಾತಿಗಾಗಿ ಅವರು ನೀಡಿದ ಬೆಂಬಲವನ್ನು ಸಹಿಸದ ಕೆಲವು ಕುತ್ಸಿತ ಬುದ್ಧಿಯ ನಾಯಕರು ಕೇಂದ್ರ ನಾಯಕರಿಗೆ ಪಿತೂರಿ ಮಾಡಿ ಇಂತಹ ಪಕ್ಷ ವಿರೋಧಿ ನಿರ್ಣಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ಬಸನಗೌಡ ಪಾಟೀಲ ಯತ್ನಾಳ ಎಂದೂ ಪಕ್ಷ ವಿರೋಧಿ ಚಟುವಟಕೆ ಮಾಡಿಲ್ಲ. ಆದರೆ ಪಕ್ಷದಲ್ಲಿನ ಕೆಲವರ ಅಸಂಘಟಿತ, ದ್ರೋಹದ, ತಾರತಮ್ಯದ ರಾಜಕೀಯ ಚಟುವಟಿಕೆಗಳನ್ನು ನೇರಾ ನೇರ ವಿರೋಧಿಸಿದ್ದಾರೆ. ನಿಜವಾಗಿಯೂ ಇಂತಹ ಪಕ್ಷವಿರೋಧಿಗಳನ್ನು ಉಚ್ಚಾಟಿಸಬೇಕೆ ಹೊರತು ಬಸನಗೌಡ ಪಾಟೀಲ ಯತ್ನಾಳ ಅವರನ್ನಲ್ಲ ಎಂದರು.ಪಂಚಮಸಾಲಿ ಮುಖಂಡರಾದ ಎ.ಎಸ್. ಬಳ್ಳಾರಿ, ಮಾಲತೇಶ ಸೊಪ್ಪಿನ, ರಾಜಣ್ಣ ಬೆಟಗೇರಿ, ನಿಜಲಿಂಗಪ್ಪ ಮುದೆಪ್ಪನವರ, ಸಿ. ಮಂಜುನಾಥ, ಪ್ರಕಾಶ ಗುರುಸಿದ್ದಪ್ಪನವರ, ಕರಬಸಪ್ಪ ಶಿವೂರ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.ನಾಳೆಯಿಂದ ವೀರಭದ್ರ ದೇವರ ಜಾತ್ರಾ ಮಹೋತ್ಸವ
ರಾಣಿಬೆನ್ನೂರು: ತಾಲೂಕಿನ ಅಂತರವಳ್ಳಿ ಗ್ರಾಮದ ವೀರಭದ್ರ ದೇವರ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ. 30 ಹಾಗೂ 31ರಂದು ಜರುಗಲಿದೆ.ಮಾ. 30ರ ರಾತ್ರಿ 10ಕ್ಕೆ ವೀರಭದ್ರೇಶ್ವರ ದೇವರಿಗೆ ಕಂಕಣಧಾರಣೆ(ಪೂಜೆ) ಕಳಸದ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಇರುತ್ತದೆ.ಮಾ. 31ರ ಬೆಳಗ್ಗೆ 6ಕ್ಕೆ ವೀರಭದ್ರೇಶ್ವರ ದೇವರ ತೇರು ಹಾಗೂ ಗುಗ್ಗಳ ಕಾರ್ಯ ಜವಳ ಕಾರ್ಯ, ದೀಡ್ ನಮಸ್ಕಾರ ಹಾಕುವುದು, ಎಡೆ ಕೊಡುವುದು, ಮಧ್ಯಾಹ್ನ 2ಕ್ಕೆ ಅನ್ನಸಂತರ್ಪಣೆ ಜರುಗುವುದು. ಸಂಜೆ 5ಕ್ಕೆ ಓಕುಳಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯುವುದು.
ತಾಲೂಕಿನ ರಡೇರಯಲ್ಲಾಪುರ ಶಿವಪುತ್ರ ಶಿವಯೋಗಿಗಳು, ಹರಿಹರ ಎರೇಹೊಸಳ್ಳಿ ಯೋಗಿವೇಮನ ಮಹಾಮಠ ವೇಮನಾನಂದ ಸ್ವಾಮೀಜಿ, ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು, ರಟ್ಟೀಹಳ್ಳಿ ಮಠದ ವೀರಯ್ಯಸ್ವಾಮಿ ತಿಪ್ಪಯ್ಯ ಸಾನ್ನಿಧ್ಯ ವಹಿಸುವರು ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.