ಭ್ರಷ್ಟಾಚಾರದಿಂದ ಪ್ರಜಾಪ್ರಭುತ್ವ ಬುಡಮೇಲು: ಡಾ.ಕೆ.ಪ್ರಕಾಶ್

KannadaprabhaNewsNetwork | Published : Nov 17, 2024 1:18 AM

ಬೆಳೆಯುತ್ತಿರುವ ಅಸಮಾನತೆ ಹಾಗೂ ಚುನಾವಣಾ ಭ್ರಷ್ಟಾಚಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ ಎಂದು ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ ಪ್ರಕಾಶ್ ಅತಂಕ ವ್ಯಕ್ತಪಡಿಸಿದರು. ತುಮಕೂರಿನಲ್ಲಿ ಕಾರ್ಯಕರ್ತರ ಪ್ರೇರಣಾ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಬೆಳೆಯುತ್ತಿರುವ ಅಸಮಾನತೆ ಹಾಗೂ ಚುನಾವಣಾ ಭ್ರಷ್ಟಾಚಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ ಎಂದು ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ ಪ್ರಕಾಶ್ ಅತಂಕ ವ್ಯಕ್ತಪಡಿಸಿದರು

ನಗರದ ಜನಚಳುವಳಿ ಕೇಂದ್ರದಲ್ಲಿ ಸಿಪಿಐ(ಎಂ) ಪಕ್ಷದ ಪ್ರಮುಖ ಕಾರ್ಯಕರ್ತರ ಪ್ರೇರಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಂದು ಬಂಡವಾಳಗಾರರ ಹಿತ ಕಾಯುತ್ತಿರುವ ಹಾಗೂ ರೈತ ಕಾರ್ಮಿಕ ವಿರೋಧಿಯಾದ ನೀತಿಗಳಿಗೆ ಪರ್ಯಾಯ ನೀತಿಗಳನ್ನ ಪ್ರತಿಪಾದಿಸುವ ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸುವಂತೆ ವಿನಂತಿಸಿದರು.

ಜನರಿಂದ ಸಂಗ್ರಹವಾಗಿರುವ ತೆರಿಗೆಗೆ ನ್ಯಾಯೋಚಿತವಾದ ಪಾಲು ಕರ್ನಾಟಕಕ್ಕೆ ದಕ್ಕದೆ ಇರುವುದರಿಂದ ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದೆ ಎಂದು ಆಪಾದಿಸಿದರು. ಬಿಜೆಪಿ ತೆರಿಗೆ ಪಾಲನ್ನು ರಾಜ್ಯಗಳಿಗೆ ನೀಡುವ ವಿಚಾರದಲ್ಲಿ ರಾಜಕೀಯ ತಾರತಮ್ಯ ಎಸುಗುತ್ತಿದೆ. ಬಿಜೆಪಿಯತರ ಸರ್ಕಾರಗಳು ಇರುವ ಕಡೆಗಳಲ್ಲಿ ಹೆಚ್ಚಿನ ಅನುದಾನವನ್ನು ನೀಡುತ್ತಿದ್ದ ಬೇರೆ ರಾಜ್ಯಗಳಿಗೆ ಅನ್ಯಾಯ ಎಸಗುತ್ತಿದೆ ಎಂದು ಅರೋಪಿಸಿದರು. ಜನ ತಮ್ಮ ಬದುಕಿನ ಪ್ರಶ್ನೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಹೆಣೆಗಾಡುತ್ತಿರುವ ಸಂದರ್ಭದಲ್ಲಿ ಭಾವನಾತ್ಮಕ ಪ್ರಶ್ನೆಗಳನ್ನು ಮುಂದೆ ಮಾಡಿ ಜನತೆಯಲ್ಲಿ ಐಕ್ಯತೆಯನ್ನು ಮುರಿದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಜನ ಮನಗಣಬೇಕಾದ ತುರ್ತು ಆಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.

ಈ ಪ್ರೇರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯಬಂದು 77 ವರ್ಷ ಕಳೆದರೂ ಸಹ ಬಡತನ ಹಸಿವುಗಳಿಂದ ಮುಕ್ತವಾಗಿಲ್ಲ, ಎಲ್ಲರಿಗೂ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ, ನಿವೇಶನ-ಮನೆ, ಭೂಮಿ ಸಿಗಲೇ ಇಲ್ಲ ಇವುಗಳನ್ನು ಪಡೆಯಲು ರೈತ ಕಾರ್ಮಿಕರು, ಕೂಲಿಕಾರರು ದಲಿತರು, ಮಹಿಳೆಯರು, ವಿದ್ಯಾರ್ಥಿ ಯುವಜನರಿಂದ ನಿರಂತರವಾಗಿ ಹೋರಾಟಗಳು ಮುಂದುವರಿದಿವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅರ್ಥಿಕ ಮತ್ತು ಸಾಮಾಜಿಕ ಜನ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದರು.

ಇದಕ್ಕಾಗಿ ಜನಚಳವಳಿಗಳನ್ನು ಬಲಿಷ್ಠವಾಗಿ ಕಟ್ಟಲು ಮತ್ತು ವಿಸ್ತರಿಸಲು ಪಕ್ಷದ ಸಮ್ಮೇಳನ ಸಹಕಾರಿಯಾಗಲಿದೆ ಎಂದರು.

ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎನ್ಕೆ ಸುಬ್ರಮಣ್ಯ ಮಾತನಾಡಿ, ಡಿಸೆಂಬರ್ ಕೊನೆಯ ವಾರದಲ್ಲಿ ಸಿಪಿಐ(ಎಂ) ಪಕ್ಷದ 24 ನೇ ರಾಜ್ಯ ಸಮ್ಮೇಳನವನ್ನು ನಡೆಸುತ್ತಿದ್ದು ಕಲ್ಪತರು ನಾಡಿನ ಜನರು ಸಹಕಾರ ಮತ್ತು ಸಹಾಯವನ್ನು ಮಾಡಬೇಕೆಂದು ಮನವಿ ಮಾಡಿದರು.

ಸಿಪಿಐ(ಎಂ) ಪಕ್ಷದ ನಗರ ಕಾರ್ಯದರ್ಶಿ ಎ,ಲೋಕೇಶ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ನಗರದಲ್ಲಿ ಧ್ವನಿ ಇಲ್ಲದವರ ಧ್ವನಿಯಾಗಿ ರೈತ ಕಾರ್ಮಿಕರ ಪ್ರಶ್ನೆಗಳಲ್ಲಿ ರಾಜಿ ಇಲ್ಲದಂತೆ ಪ್ರಾಮಾಣಿಕವಾದ ಹೋರಾಟವನ್ನು ನಡೆಸುತ್ತಿರುವ ಸಿಪಿಐ(ಎಂ) ಪಕ್ಷವನ್ನು ಬೆಂಬಲಿಸುವಂತೆ ವಿನಂತಿಸಿದರು.ಈ ಪ್ರೇರಣಾ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಜಿ.ಕಮಲ, ಪ್ರಾಂತ ರೈತ ಸಂಘದ ಚನಬಸಪ್ಪ, ಅಜ್ಜಪ್ಪ, ರಾಜಮ್ಮ, ಕಾರ್ಮಿಕ ಸಂಘದ ಮುಂದಾಳು ಶಂಬಣ್ಣ, ಷಣ್ಣುಖಪ್ಪ, ಕಲೀಲ್, ಚಂದ್ರಪ್ಪ, ಸುಜಿತ್ ನಾಯಕ್, ಇಂತು, ಬಾಬು, ಕಲ್ಪನಾ ಟಿ.ಜಿ .ಶಿವಲಿಂಗಯ್ಯ, ರಾಘವೇಂದ್ರ,ಶಿವಣ್ಣ,ಶಹತಾಜ್,ಮುನಾಫ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.