ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಕುಸುಮಾ

KannadaprabhaNewsNetwork |  
Published : Mar 23, 2026, 02:15 AM IST
21ಕೆಜಿಎಫ್‌1 | Kannada Prabha

ಸಾರಾಂಶ

ಕುಸುಮಾಳದ್ದು ಒಂದು ನಿಜವಾದ ಸಾಹಸ ಗಾಥೆ ಎಂದರೆ ತಪ್ಪಾಗಲಾರದು. ಎಂದಿನಂತೆ ಶಾಲೆಗೆಂದು ತನ್ನ ಪೋಷಕರ ಜೊತೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಟ್ರ‍್ಯಾಕ್ಟರೊಂದು ಬಂದು ಈಕೆ ಕಾಲಿಗೆ ಬಡಿದ ಪರಿಣಾಮ, ಕಾಲಿಗೆ ಭಾರಿ ಪೆಟ್ಟು ಬಿದ್ದಿತು. ಕುಸುಮಾಳ ತಂದೆ ಕೃಷಿಕರಾದ ಶಂಕರಪ್ಪ ಮಗಳಿಗೆ ಚಿಕಿತ್ಸೆ ಕೊಡಿಸಲು ಸುಮಾರು ಐದಾರು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಕುಸುಮಾಗೆ ಸೂಕ್ತ ಚಿಕಿತ್ಸೆ ಸಿಗಲು ತುಂಬಾ ವಿಳಂಬವಾದ್ದರಿಂದ ಗಂಭೀರ ಗಾಯಗೊಂಡಿದ್ದ ಒಂದು ಕಾಲನ್ನು ಮಂಡಿಯ ಮೇಲು ಭಾಗದವರೆಗೂ ತೆಗೆಯಲೇಬೇಕಾದ ದುರದೃಷ್ಟ ಪ್ರಸಂಗ ಬಂದು ಒದಗಿತು.

ಕನ್ನಡಪ್ರಭವಾರ್ತೆ ಕೆಜಿಎಫ್

ಧೈರ್ಯ, ಛಾತಿ, ಸವಾಲನ್ನು ಎದುರಿಸುವ ಛಲ ಇವೆಲ್ಲ ಪದಗಳನ್ನು ಬಹಳಷ್ಟು ಸಲ ಕೇಳಿ ಬಿಟ್ಟಿದ್ದೇವೆ, ಕೇಳುತ್ತಿರುತ್ತೇವೆ. ಆದರೆ ಶುಕ್ರವಾರ ನಾನು ಭೇಟಿ ಮಾಡಿದ ಓರ್ವ ಬಾಲಕಿಯಲ್ಲಿ ಈ ಮೂರೂ ಗುಣಗಳನ್ನು ಕಂಡೆ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದರು.

ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ತಾಲೂಕಿನ ಚಿನ್ನನಾಗನಹಳ್ಳಿಯ ಕುಸಮಾ ಮನೆಗೆ ಭೇಟಿ ನೀಡಿ ಮಾತನಾಡಿದರು, ಎರಡು ದಿನಗಳ ಹಿಂದೆ ರಾಜ್ಯಾದ್ಯಂತ ಪ್ರಾರಂಭವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅನೇಕ ಸವಾಲಯಗಳನ್ನು ಎದುರಿಸಿ ಪರೀಕ್ಷೆಗೆ ಹಾಜರಾದ ಮೂರ‍್ನಾಲ್ಕು ವಿದ್ಯಾರ್ಥಿಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿ ಬೆರಗಾಗಿ ಹೋದೆ. ಅವರಲ್ಲಿ ಓರ್ವ ವಿದ್ಯಾರ್ಥಿನಿ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಚಿನ್ನಾಗನಹಳ್ಳಿ ಗ್ರಾಮದ ಕುಸುಮ. ಶುಕ್ರವಾರ ಕುಸುಮಾಳ ಭೇಟಿಗೆ ಬಂದಿರುವುದಾಗಿ ತಿಳಿಸಿದರು.

ಕುಸುಮಾಳದ್ದು ಒಂದು ನಿಜವಾದ ಸಾಹಸ ಗಾಥೆ ಎಂದರೆ ತಪ್ಪಾಗಲಾರದು. ಎಂದಿನಂತೆ ಶಾಲೆಗೆಂದು ತನ್ನ ಪೋಷಕರ ಜೊತೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಟ್ರ‍್ಯಾಕ್ಟರೊಂದು ಬಂದು ಈಕೆ ಕಾಲಿಗೆ ಬಡಿದ ಪರಿಣಾಮ, ಕಾಲಿಗೆ ಭಾರಿ ಪೆಟ್ಟು ಬಿದ್ದಿತು. ಕುಸುಮಾಳ ತಂದೆ ಕೃಷಿಕರಾದ ಶಂಕರಪ್ಪ ಮಗಳಿಗೆ ಚಿಕಿತ್ಸೆ ಕೊಡಿಸಲು ಸುಮಾರು ಐದಾರು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಕುಸುಮಾಗೆ ಸೂಕ್ತ ಚಿಕಿತ್ಸೆ ಸಿಗಲು ತುಂಬಾ ವಿಳಂಬವಾದ್ದರಿಂದ ಗಂಭೀರ ಗಾಯಗೊಂಡಿದ್ದ ಒಂದು ಕಾಲನ್ನು ಮಂಡಿಯ ಮೇಲು ಭಾಗದವರೆಗೂ ತೆಗೆಯಲೇಬೇಕಾದ ದುರದೃಷ್ಟ ಪ್ರಸಂಗ ಬಂದು ಒದಗಿತು.

ತನ್ನ ಕಾಲು ಕಳೆದುಕೊಂಡ ಕುಸುಮಾಳ ಪರಿಸ್ಥಿತಿ ಹೇಗಿದ್ದಿರಬಹುದು? ಆಕೆಯ ಅಂದಿನ ಪರಿಸ್ಥಿತಿಯಲ್ಲಿ ಯಾರೇ ಆಗಿದ್ದರೂ ಶಿಕ್ಷಣ ನಿಲ್ಲಿಸಿ ಬಿಡಬೇಕಾಗಿತ್ತು. ಅಥವಾ ಮುಂದಿನ ವರ್ಷ ಪರೀಕ್ಷೆ ಬರೆಯುತ್ತೇನೆ ಎಂದು ತೀರ್ಮಾನ ತೆಗೆದುಕೊಳ್ಳಬಹುದಿತ್ತು. ಆದರೂ ಈ ಹೆಣ್ಣು ಮಗು ಹಠ ಹಿಡಿದು ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಈ ವರ್ಷವೇ ಬರೆದೇ ತೀರುತ್ತೇನೆ ಎಂದು ತೀರ್ಮಾನಿಸಿ ಪರೀಕ್ಷೆ ಮೊದಲನೆ ದಿನ ಆಂಬುಲೆನ್ಸ್ನಲ್ಲಿ ಬಂದು ಲಿಪಿಕಾರರ ಸಹಾಯದಿಂದ ಮೊದಲ ಪತ್ರಿಕೆಗೆ ಉತ್ತರ ಬರೆದಿದ್ದಾಳೆ.

ಕುಸುಮಾಳನ್ನು ಕಂಡಾಗ ನನ್ನ ಕಣ್ಣಲ್ಲಿ ನೀರು, ಜೊತೆ ಜೊತೆಗೆ ಆಕೆಯ ಬಗ್ಗೆ ಹೆಮ್ಮೆ ಉಕ್ಕಿ ಬಂದಿತು. ಕುಸುಮಾಳ ಜೊತೆ ಕುಳಿತು ಮಾತನಾಡಿದಾಗ ಆಕೆ ತನ್ನ ಮುಂದಿನ ಕನಸು ಹೇಳಿದ್ದು ನನಗೆ ಇನ್ನಷ್ಟು ಆಕೆಯ ಬಗ್ಗೆ ಗೌರವ ಹೆಚ್ಚು ಮಾಡಿತು. ನಾನು ಐಪಿಎಸ್ ಅಧಿಕಾರಿ ಆಗಬೇಕೆಂದಿದ್ದೇನೆ ಎಂದು ಹೇಳಿದ್ದನ್ನು ಕಂಡು ಕಣ್ಣಂಚುಗಳು ತೇವವಾದವು. ಎಲ್ಲ ವಿಧವಾದ ಅನುಕೂಲಗಳು ಇದ್ದರೂ ಸಹ ಇಂದಿನ ದಿನಗಳಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸದೇ ವೃಥಾ ಕಾಲಹರಣ ಮಾಡುವವರ ಮಧ್ಯೆ ಕುಸುಮಾ ವಿಭಿನ್ನವಾಗಿ ಕಂಡಳು ಎಂದು ಭಾವುಕರಾಗಿ ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಗಳೂರಿಗೆ ಬಂತು ಎಲ್‌ಪಿಜಿ ಹಡಗು
ನತ್ತಬೆಲೆ ಡೇರಿ ಅಧ್ಯಕ್ಷರಾಗಿ ಶಾಸಕ ನಾರಾಯಣಸ್ವಾಮಿ ಅವಿರೋಧ ಆಯ್ಕೆ