ಆರಂಭದಲ್ಲೇ ಕಾನ್ಸರ್‌ ಪತ್ತೆ ಹಚ್ಚಿ

KannadaprabhaNewsNetwork | Published : Feb 5, 2025 12:35 AM

ಕ್ಯಾನ್ಸರ್ ಕಾಯಿಲೆಯ ಭೀಕರತೆ ಹಾಗೂ ಸಮಾಜದ ಮೇಲಾಗುವ ಗಂಭೀರ ಪರಿಣಾಮ ಅತ್ಯಂತ ಗಂಭೀರ

ಗದಗ: ಕ್ಯಾನ್ಸರ್ ಕಾಯಿಲೆಯನ್ನು ಮುನ್ನೆಚ್ಚರಿಕೆ ಮತ್ತು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಮುಖ್ಯವಾಗಿದೆ ಡಾ. ಗಣೇಶರಾವ್ ಕಂದಾಪೂರ ಹೇಳಿದರು.

ಗದಗ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ವಿಭಾಗ, ತಂಬಾಕು ನಿಯಂತ್ರಣಕೋಶ ಹಾಗೂ ಎಸ್.ಟಿ.ಎಸ್.ಕೆ.ಕೆ. ಪಾಲಿಟೆಕ್ನಿಕ್ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮಂಗಳವಾರ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ವರ್ಷ ಫೆ. 4 ರಂದು ಆಚರಿಸಲಾಗುತ್ತಿದ್ದು, ಕ್ಯಾನ್ಸರ್ ಕಾಯಿಲೆಯ ಭೀಕರತೆ ಹಾಗೂ ಸಮಾಜದ ಮೇಲಾಗುವ ಗಂಭೀರ ಪರಿಣಾಮ ಅತ್ಯಂತ ಗಂಭೀರವಾಗಿವೆ, ಅಸಾಂಕ್ರಾಮಿಕ ರೋಗಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಯ ನಂತರದಲ್ಲಿ 2ನೇ ಸ್ಥಾನದಲ್ಲಿ ಕ್ಯಾನ್ಸರ್‌ನಿಂದ ಅತೀ ಹೆಚ್ಚು ಸಾವು ಸಂಭವಿಸುತ್ತಿವೆ.

ಕ್ಯಾನ್ಸರ್ ಕಾಯಿಲೆಯು ಅನಿಯಂತ್ರಿತ ಜೀವಕೋಶ ವಿಭಜನೆಗಳಿಂದ ದೇಹದಲ್ಲಿ ಬೆಳವಣಿಗೆಯಾಗುವಂತಹ ಗಡ್ಡೆ.ಕ್ಯಾನ್ಸರ್ ಜೀವಕೋಶವು ಲಿಂಪ್‌ನೋಡ್ಸ್ ಮುಖಾಂತರ ದೇಹದ ಎಲ್ಲ ಭಾಗಗಳಲ್ಲಿ ಪಸರಿಸುತ್ತದೆ. ಕ್ಯಾನ್ಸರ್ ರೋಗದಲ್ಲಿ ನಾಲ್ಕು ಹಂತಗಳಿದ್ದು, ಮೊದಲನೇ ಮತ್ತು ಎರಡನೇ ಹಂತದಲ್ಲಿರುವ ಕ್ಯಾನ್ಸರ್ ರೋಗವನ್ನು ತಜ್ಞ ವೈದ್ಯರಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಪಡಿಸಬಹುದು.

ಇಂದಿನ ಆಧುನಿಕ ಜೀವನ ಶೈಲಿ ಮತ್ತು ತಂಬಾಕು ಸೇವನೆಯಿಂದ ಅತೀ ಹೆಚ್ಚು ಕ್ಯಾನ್ಸರ್ ರೋಗಗಳು ಕಂಡುಬರುತ್ತಿವೆ. ಪುರುಷರಲ್ಲಿ ಬಾಯಿ, ಅನ್ನನಾಳ, ಶ್ವಾಸಕೋಶ ಮತ್ತು ಲೀವರ್ ಕ್ಯಾನ್ಸರ್‌ಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮಹಿಳೆಯರಲ್ಲಿ ಸ್ತನ, ಗರ್ಭಕಂಠ ಮತ್ತು ಅಂಡಾಣುವಿನ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತವೆ. ಕ್ಯಾನ್ಸರ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಆರೈಕೆ ಹಾಗೂ ಮನೋಸ್ಥೈರ್ಯ ಮಾತುಗಳಿಂದ ಗುಣಪಡಿಸಬಹುದು ಎಂದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ವಿಶ್ವ ಕ್ಯಾನ್ಸರ್ ದಿನಾಚರಣೆ ಕುರಿತು ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ 1413316 ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆ ಆಗುತ್ತಿದ್ದು, ಅವುಗಳಲ್ಲಿ 30, 60 ವಯಸ್ಸಿನವರಲ್ಲಿ 916827 ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ನಿಂದ ಅತೀ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದರು.

ಎಸ್.ಎಸ್. ಪೀರಾ ನಿರೂಪಿಸಿದರು. ಮುತ್ತುನಗೌಡ ರಬ್ಬನಗೌಡ್ರ ಸ್ವಾಗತಿಸಿ ವಂದಿಸಿದರು. ಗಂಗಾ ಸಜ್ಜಗಾರ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬ್ಳೆ, ಪುಷ್ಪಾ ಪಾಟೀಲ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಡಾ. ರವಿ ಕಡಗಾವಿ, ಎನ್.ಸಿ.ಡಿ.ವಿಭಾಗ, ಡಾ.ಪ್ರವೀಣ ನಿಡಗುಂದಿ, ಗೋಪಾಲ ಸುರಪುರ, ಪ್ರತೀಕ ಹುರಕಡ್ಲಿ, ವಿರೇಶ ಮದಕಟ್ಟಿ, ಐಡಿಎಸ್‌ಪಿ ವಿಭಾಗ, ರಮೇಶ ಅರಹುಣಸಿ, ಜಿಲ್ಲಾ ಸಮೀಕ್ಷಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಹಾಗೂ ಎಸ್.ಟಿ.ಎಸ್.ಕೆ.ಕೆ. ಪಾಲಿಟೆಕ್ನಿಕ್ ಕಾಲೇಜಿನ ಎಲ್ಲ ಉಪನ್ಯಾಸಕರು, ಆಡಳಿತ ವರ್ಗದವರು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.