ದೇವನಹಳ್ಳಿ ಚಲೋ: ಹರಿದ ಬಂದ ರೈತ ಸಾಗರ

KannadaprabhaNewsNetwork | Published : Jun 25, 2025 11:47 PM

ದೇವನಹಳ್ಳಿ ಚಲೋ ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಿದ್ದರು. ಸಚಿವರ ಮನವಿಯನ್ನು ತಿರಸ್ಕರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಚನ್ನರಾಯಪಟ್ಟಣದ 13 ಹಳ್ಳಿಗಳ 1,777 ಎಕರೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ ದೇವನಹಳ್ಳಿ ಚಲೋಗೆ ಕರೆಕೊಟ್ಟಿದ್ದು ಅದಕ್ಕೆ ರಾಜ್ಯದ ವಿವಿಧ ಸಂಘಟನೆಗಳು ಸಾಹಿತಿಗಳು, ಚಿಂತಕರು ಬೆಂಬಲ ವ್ಯಕ್ತಪಡಿಸಿ ದೇವನಹಳ್ಳಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ಸಮಿತಿ ರೈತರ ಭೂಮಿ ಉಳಿವಿಗಾಗಿ ಕಳೆದ 1,180 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು, ಮಂಗಳವಾರ ಸಂಜೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಜಂಟಿ ಸುದ್ದಿಗೋಷ್ಠಿ ನಡೆಸಿ 3 ಹಳ್ಳಿಗಳ ರೈತರ ಜಮೀನು ಭೂಸ್ವಾದೀನದಿಂದ ಕೈಬಿಟ್ಟು ಉಳಿಕೆ ಜಮೀನು ಕೈಗಾಕಾ ಉದ್ದೇಶಕ್ಕೆ ವಶಪಡಿಸಿಕೊಂಡು ಜಮೀನು ವಶಕ್ಕೆ ಪಡೆದ ರೈತರಿಗೆ ಅಭಿವೃದ್ಧಿಪಡಿಸಿದ ಜಾಗದಲ್ಲಿ 10781 ಚದರ ಅಡಿ ಜಾಗ ಹಾಗೂ ಪರಿಹಾರ ನೀಡುತ್ತೇವೆ ದೇವನಹಳ್ಳಿ ಚಲೋ ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಿದ್ದರು. ಸಚಿವರ ಮನವಿಯನ್ನು ತಿರಸ್ಕರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಸಂಯುಕ್ತ ಹೋರಾಟ ಕರ್ನಾಟಕ ಸಂಯೋಜಕ ಬಡಗಲಪುರ ನಾಗೇಂದ್ರ ಮಾತನಾಡಿ, ಸರ್ಕಾರದ ಹೊಡೆದಾಳುವ ನೀತಿಯನ್ನು ನಾವು ಖಂಡಿಸುತ್ತೇವೆ. ಚನ್ನರಾಯಪಟ್ಟಣದ ಶೇ. 99ರಷ್ಟು ರೈತರು ಭೂಮಿ ನೀಡಲು ನಿರಾಕರಣೆ ಮಾಡಿದ್ದಾರೆ. ದೇಶದಲ್ಲಿ ಶೇ. 60ರಷ್ಟು ರೈತರಿದ್ದಾರೆ. ಅದನ್ನು ಶೇ.20ಕ್ಕೆ ಇಳಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿವೆ. ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ, ಸರ್ಕಾರ ರೈತರ ಬಾಳಿನ ಜೊತೆ ಚೆಲ್ಲಾಟ ಆಡುತ್ತಿದೆ. ರೈತರ ತಂಟೆಗೆ ಬಂದ ಸರ್ಕಾರಗಳು ಉಳಿಯುವುದಿಲ್ಲ, ಸಚಿವ ಎಂ.ಬಿ.ಪಾಟೀಲ್ ಕುರ್ಚಿಯನ್ನು ಮುರಿಯುತೇವೆ ಎಂದರು. ನಟ ಪ್ರಕಾಶ ರಾಜ್ ಮಾತನಾಡಿ, ನಾವು ಸೇರಿರುವುದು ಒಬ್ಬರನ್ನು ಉದ್ದೇಶಿಸಿ ಮಾತನಾಡುವುದಕ್ಕಲ್ಲ. ನಮ್ಮ ಮಾತುಗಳು ಕಾಂಗ್ರೆಸ್ ಸರ್ಕಾರಕ್ಕೆ, ಸಿಎಂ, ಎಂಬಿ ಪಾಟೀಲರೆ ಏನು ಮಾಡುತ್ತಿದ್ದೀರಿ?, ಒಬ್ಬ ಮನುಷ್ಯ ಒಂದೆರಡು ಬಾರಿ ಹೇಳಬಹುದು. ನಾವು ನಿಮ್ಮ ವಿರುದ್ಧ ಮೂರು ಬಾರಿ ಬಾಯಿ ಬಡ್ಕೊಬೇಕಾ,? ನಿಮಗೆ ಅರ್ಥ ಆಗಬೇಕು. ಭಾರತದ ರಾಜಕಾರಣದಲ್ಲಿ ನೀವು, ಪಕ್ಷದ ನಾಯಕರು ಗೆದ್ದಿಲ್ಲ. ನಿಮ್ಮನ್ನು ಜನ ಗೆಲ್ಲಿಸುತ್ತಾರೆ. ನೀವು ಆಳ್ವಿಕೆ ಮಾಡುವುದಕ್ಕೆ ಬಂದಿಲ್ಲ. ಪ್ರತಿನಿಧಿಸುವುದಕ್ಕೆ ಬಂದಿದ್ದೀರಿ. ಏನಾಗಿದೆ ನಿಮಗೆ 13 ಹಳ್ಳಿಯ ಹೆಣ್ಣು ಮಕ್ಕಳು ಅಲ್ಲಿನ ಮಣ್ಣನ್ನು ತಂದು ಗಿಡಕ್ಕೆ ಹಾಕಿ, ನಾವು ಮಣ್ಣನ್ನು ಮಾರುವುದಿಲ್ಲ ಎಂದು ಹೇಳುತ್ತಿದ್ದಾರೆ. ತುಂಬಾ ಸೂಕ್ಷ್ಮ್ಮವಾಗಿ ನಿಮಗೆ ಧಿಕ್ಕಾರ ಹಾಕುವ ಸಮಯ ತುಂಬಾ ದೂರ ಇಲ್ಲ ಇದು ನಿಮಗೆ ಬೇಕಾ ಸಿದ್ದರಾಮಯ್ಯನವರೇ? ಕರ್ನಾಟಕದ ರೈತರ ಬಾಯಿಯಿಂದ ಧಿಕ್ಕಾರ ಕೂಗಿಸಿಕೊಳ್ಳುವ ಪರಿಸ್ಥಿತಿಗೆ ಬರಬೇಕಾ. ಜನಪರ, ರೈತರ ಪರ ಅಂತೀರಿ ಇದೇ ಹೋರಾಟದ ಮಧ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ, ಬೆಂಬಲ ಸೂಚಿಸಿದ್ದಿರಿ. ಮಾತು ಕೊಟ್ಟಿದ್ದೀರಿ ಕೊಟ್ಟಮಾತನ್ನು ಉಳಿಸಿಕೊಳ್ಳಿ. ರೈತರು ಭೂಮಿಯನ್ನು ಮಾರುವುದಿಲ್ಲ ಈ ರೈತರ ಜೊತೆಗೆ ಇಲ್ಲೇ ಮಲಗುತ್ತೇನೆ. ಜೈಲಿಗೆ ಹಾಕುವುದಾದರೆ ಹಾಕಿ, ಬೇಲ್ ಕೂಡ ತೆಗೆದುಕೊಳ್ಳುವುದಿಲ್ಲ ಎಂದರು. ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್ ಮಾತನಾಡಿ, ಇಂದು ರಾಹುಲ್ ಗಾಂಧಿ ಸಂವಿಧಾನ ಉಳಿಸಿ ಎಂದು ದೇಶ ಸುತ್ತಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಏನು ಮಾಡುತ್ತಿದ್ದಾರೆ.? ಸಿದ್ದರಾಮಯ್ಯ ಐದು ಗ್ಯಾರಂಟಿಗಳನ್ನು ನೀಡಿದ್ದಾರೆ 6ನೇ ಗ್ಯಾರಂಟಿಯಾಗಿ ಚನ್ನರಾಯಪಟ್ಟಣ ಭೂ ಸ್ವಾಧೀನ ಮಾಡುವುದಿಲ್ಲ ಎಂದು ಘೋಷಿಸಬೇಕು ಎಂದು ಹೇಳಿದರು.ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಹೋರಾಟದಲ್ಲಿ ನಮಗೆ ನಾವು ಮಾತನಾಡಿಕೊಳ್ಳುವುದಿಲ್ಲ. ನಮ್ಮ ಈ ಮಾತು ಹೃದಯಹೀನ ಸರ್ಕಾರಕ್ಕೆ ಕೇಳಬೇಕು. ಪ್ರತಿದಿನ ಹೊಟ್ಟೆಗೆ ಹಾಕುವ ಅನ್ನವನ್ನು ನೆನಪಿಸಿಕೊಳ್ಳಿ. ರೈತರಿಂದ ಕಿತ್ತುಕೊಂಡ ಭೂಮಿಯನ್ನು ವಾಪಾಸು ನೀಡಬೇಕು ಎಂದರು. ಸಂಯುಕ್ತ ಕರ್ನಾಟಕದ ನಾಯಕಿ ಎಸ್. ವರಲಕ್ಷ್ಮೀ ಮಾತನಾಡಿ, ಭೂಮಿಯನ್ನು ಕೊಡಿ ಎಂದು ಹಲವಾರು ವರ್ಷಗಳಿಂದ ರೈತರು ಚಳವಳಿ ಮಾಡುತ್ತಲೆ ಬಂದಿದ್ದಾರೆ. ಆದರೆ ಈಗ ರೈತರು ನಮ್ಮ ಭೂಮಿ ಕಿತ್ತುಕೊಳ್ಳಬೇಡಿ ಎಂದು ಹೋರಾಟ ನಡೆಸುವಂತಹ ಸಂದರ್ಭ ಬಂದಿದೆ ಎಂದರು. ಶಾಂತಿಯುತ ಧರಣಿಗೆ ಹಳೆ ಬಸ್ ನಿಲ್ದಾಣದಲ್ಲಿ ಅವಕಾಶ: ದೇವನಹಳ್ಳಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ರೈತರು ಶಾಂತಿಯುತ ಧರಣಿಗೆ ಅವಕಾಶ ಕಲ್ಪಿಸಿದ್ದು ಕಾರ್ಯಕ್ರಮ ನಡೆಯುವ ಜಾಗದ ಸುತ್ತಲು ಬ್ಯಾರಿಕೇಡ್‌ಗಳನ್ನು ಹಾಕಿ ಅಲ್ಲಿಂದ ರೈತರು ಹೊರಗಡೆ ಬಂದರೆ ಬಂದಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.ಪ್ರತಿಭಟನಾ ವೇದಿಕೆಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಭೂಸ್ವಾದೀನ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು, ನಟ ಮುಖ್ಯಮಂತ್ರಿ ಚಂದ್ರು, ಇಂದಿರಾ ಕೃಷ್ಣಪ್ಪ ಕಾರಹಳ್ಳಿ ಶ್ರೀನಿವಾಸ್, ಶಿವಾನಂದ್, ಶಿವಪ್ರಸಾದ್, ತಾರಾರಾಮ್, ಚಂದ್ರಜೇಜಸ್ವಿ, ಸಾಹಿತಿಗಳು ಚಿಂತಕರು ವಿವಿಧ ಪರ ಸಂಘನೆಯ ಮುಖಂಡರು ರೈತರು ಇದ್ದರು. ೨೫ ದೇವನಹಳ್ಳಿ ಚಿತ್ರಸುದ್ದಿ: ೦1 ಚನ್ನರಾಯಪಟ್ಟಣ ಭೂಸ್ವಾದೀನ ವಿರೋಧಿ ಹೋರಟ ಸಮಿತಿ ದೇವನಹಳ್ಳಿ ಚಲೋ ವೇದಿಕೆ ಕಾರ್ಯಕ್ರಮದಲ್ಲಿ 13 ಹಳ್ಳಿಗಳ ಗಿಡಕ್ಕೆ ಮಣ್ಣನ್ನು ಹಾಕುವುದರ ಮೂಲಕ ಕಾರ್ಯಕಮಕ್ಕೆ ಚಾಲನೆ ನೀಡಿದರು. ೨೫ ದೇವನಹಳ್ಳಿ ಚಿತ್ರಸುದ್ದಿ: ೦2 ದೇವನಹಳ್ಳಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ರಾಜ್ಯದ ವಿವಿದ ಜಿಲ್ಲೆಗಳ ರೈತರು ೨೫ ದೇವನಹಳ್ಳಿ ಚಿತ್ರಸುದ್ದಿ: 03 ಪ್ರತಿಭಟನಾ ಸ್ಥಳದಲ್ಲಿ ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ಜಲಪಿರಂಗಿಯನ್ನು ನಿಯೋಜನೆ ಮಾಡಿರುವುದು.

೨೫ ದೇವನಹಳ್ಳಿ ಚಿತ್ರಸುದ್ದಿ: ೦4 ಪ್ರತಿಭಟನಾ ಸ್ಥಳದಲ್ಲಿ ಮೊಬೈಲ್ ಕಮಾಂಡ್ ಕಂಟ್ರೋಲ್ ಸೆಂಟರ್ ನಿಯೋಜನೆ.

೨೫ ದೇವನಹಳ್ಳಿ ಚಿತ್ರಸುದ್ದಿ: ೦5 ದೇವನಹಳ್ಳಿ ಚಲೋ ಪ್ರತಿಭಟನೆ ನಿರತ ರೈತರನ್ನು ಪೋಲಿಸರು ಬಂದಿಸಿ ಕರೆದ್ತೋದರು.