ಎಲ್ಲ ಗ್ರಾಮಗಳಲ್ಲಿಯೂ ಸ್ಮಶಾನ ಜಾಗ ಅಭಿವೃದ್ಧಿ: ಬಸವರಾಜ ಶಿವಣ್ಣನವರ

KannadaprabhaNewsNetwork | Published : May 11, 2025 1:21 AM
ಮ | Kannada Prabha

ಸಾರಾಂಶ

ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಹಿಂದುಳಿದ ಸಮಾಜದ ಸ್ಮಶಾನ ಜಾಗ ₹30 ಲಕ್ಷದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಶಾಸಕ ಬಸವರಾಜ ಶಿವಣ್ಣನವರ ಭೂಮಿಪೂಜೆ ನೆರವೇರಿಸಿದರು.

ಬ್ಯಾಡಗಿ: ಪ್ರತಿಯೊಬ್ಬ ವ್ಯಕ್ತಿಯ ಕೊನೆಯ ಸ್ಥಳ ರುದ್ರಭೂಮಿ. ಹೀಗಾಗಿ ಬ್ಯಾಡಗಿ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಹಂತ ಹಂತವಾಗಿ ಸ್ಮಶಾನದ ಜಾಗ ಅಭಿವೃದ್ಧಿಗೊಳಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

ಮೋಟೆಬೆನ್ನೂರಿನ ಹಿಂದುಳಿದ ಸಮಾಜದ ಸ್ಮಶಾನ ಜಾಗ ₹30 ಲಕ್ಷದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರ ಸ್ಮಶಾನ ಜಾಗ ಬಹುದಿನದಿಂದ ಅಭಿವೃದ್ಧಿ ಕಾಣದೇ ಸಮಸ್ಯೆ ಸುಳಿಯಲ್ಲಿ ಸಿಲುಕಿತ್ತು. ಈ ಕುರಿತು ಸಮಾಜದ ಜನರೂ ಬಹುದಿನದ ಬೇಡಿಕೆ ಈಡೇರಿಸುವಂತೆ ಮನವಿ ಸಹ ಮಾಡಿದ್ದರು. ಗ್ರಾಮದ ಹೃದಯಭಾಗದಲ್ಲಿ ಸ್ಮಶಾನವಿರುವುದರಿಂದ ಸ್ವಚ್ಛವಾಗಿದ್ದಷ್ಟು ಉತ್ತಮ ಎಂಬ ವಿಚಾರದಿಂದ ₹30 ಲಕ್ಷ ಅನುದಾನದಲ್ಲಿ ಸ್ಮಶಾನಭೂಮಿ ಅಭಿವೃದ್ಧಿ ಕಾಮಗಾರಿ ಜರುಗಲಿದೆ ಎಂದರು.

ಶವ ಸುಡುವ (ಬರ್ನಿಂಗ್‌ ಮಿಶನ್) ಯಂತ್ರ: ಗ್ರಾಮದ ಮಧ್ಯಭಾಗದಲ್ಲಿರುವ ಪರಿಶಿಷ್ಟ ಸಮುದಾಯದ ಸ್ಮಶಾನ ಭೂಮಿ ಹಾಳುಬಿದ್ದಿದ್ದು, ಶವಸಂಸ್ಕಾರ ವಿಧಿ-ವಿಧಾನ ಹೊರಗೆ ಕಾಣದಂತೆ ಎತ್ತರದ ಕಾಂಪೌಂಡ್‌ ಗೋಡೆ ನಿರ್ಮಾಣ, ಜನರಿಗೆ ನೆರಳು, ಹೈಮಾಸ್ಟ್‌ ವಿದ್ಯುತ್ ಕಂಬ ಸೇರಿದಂತೆ ಹಲವು ಕಾಮಗಾರಿಗಳು ಇದರಲ್ಲಿ ಸೇರಿವೆ. ಜತೆಗೆ ವಿದ್ಯುತ್ ಬಳಸಿ ವೈಜ್ಞಾನಿಕವಾಗಿ ಶವಸಂಸ್ಕಾರ ಮಾಡಲು ಬರ್ನಿಂಗ್ ಮಿಶನ್ ಅಳವಡಿಸುವುದಾಗಿ ತಿಳಿಸಿದರು.

ಜನಪರ ಆಡಳಿತ: ಮುಖಂಡ ನಾಗರಾಜ ಆನ್ವೇರಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ ಸರ್ಕಾರ ಜನಪರ ಆಡಳಿತ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುತ್ತಿದೆ. ಅದರಲ್ಲೂ ಎಸ್‌ಸಿ-ಎಸ್‌ಟಿ ಸಮಾಜದ ಜನರ ಕಾಲನಿ ಅಭಿವೃದ್ಧಿ, ತಾಲೂಕಿನಲ್ಲಿ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಲಾ ಗಿದೆ. ಮೊದಲ ಹಂತದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಲನಿಗಳಲ್ಲಿ ಡಾಂಬರೀಕರಣ, ಚರಂಡಿ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಈ ಸಮಾಜಗಳಿಗೆ ಸರ್ಕಾರ ಹೆಚ್ಚು ಅನುದಾನ ಬಿಡುಗಡೆಗೊಳಿಸಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಪಾರ್ವತೆಮ್ಮ ನಾಯಕ, ಸದಸ್ಯ ನಾಗರಾಜ ಹಾವನೂರು, ನಿವೃತ್ತ ಎಂಜಿನಿಯರ್ ಸಿ.ಆರ್. ಬಳ್ಳಾರಿ, ಶಿವಪುತ್ರಪ್ಪ ಅಗಡಿ, ಮಾರುತಿ ಬ್ಯಾಟಪ್ಪನವರ, ಎಂ. ನಿಂಗಪ್ಪ, ಪ್ರೇಮಾ ಅಂಗಡಿ, ಮಾಲತೇಶ ಹಾವನೂರು, ಮುತ್ತಪ್ಪ ಶಿಗ್ಗಾಂವಿ ಇನ್ನಿತರರಿದ್ದರು.

PREV