ಬಿ. ರಾಮಪ್ರಸಾದ್ ಗಾಂಧಿ
ಅರಸಿಕೇರಿ ಗ್ರಾಮ ಅಂದಾಜು 7 ಸಾವಿರ ಜನಸಂಖ್ಯೆಯುಳ್ಳ ಹೋಬಳಿ ಕೇಂದ್ರ. ಇಲ್ಲಿ ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಮೂರು ದಿನಗಳ ಕಾಲ ದಂಡಿ ದುರುಗಮ್ಮನ ಜಾತ್ರೆ ಜರುಗುತ್ತದೆ. ಅದೇ ರೀತಿ ಈ ವರ್ಷವೂ ಜಾತ್ರೆಯು ವಿಶಿಷ್ಟವಾಗಿ ಸಾವಿರಾರು ಭಕ್ತರ ಹರ್ಷೋದ್ಗಾರದ ಮಧ್ಯೆ ನೆರವೇರಿತು.
ಬೆಳಗಿನ ಜಾವ ದೇವಸ್ಥಾನದಿಂದ ದಂಡಿನ ದುರುಗಮ್ಮ ದೇವಿಯನ್ನು 2 ಕಿಮೀ ದೂರವಿರುವ ಹೊಳೆ (ಹೊಂಡ)ಗೆ ಗಂಗಾಪೂಜೆಗಾಗಿ ಕರೆತರಲಾಯಿತು. ಪೂಜೆ ಮುಗಿಸಿಕೊಂಡು ದೇವಿಯ ಕೇಲು (ಪೂಜಾ ಸಾಮಗ್ರಿಗಳುಳ್ಳ ಮಡಕೆ) ಹೊತ್ತ ಹರಿಜನ ಪೂಜಾರಿ ದೇವಸ್ಥಾನದ ಕಡೆಗೆ ಹೋದರು.ಆಗ ಲಿಂಗಾಯತ, ವಾಲ್ಮೀಕಿ, ಕುರುಬ, ಜಂಗಮ, ಭೋವಿ, ಬಾರಿಕರು, ಶೆಟ್ಟರು, ಬ್ರಾಹ್ಮಣರು, ಗೊಂದಳಿಯರು ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಸರ್ವ ಜಾತಿಯ ಭಕ್ತರು ಮಡಿಯಿಂದ ರಸ್ತೆ ಮಧ್ಯೆ ಬೋರಲಾಗಿ ಮಲಗಿಕೊಂಡರು. ಅವರ ಬೆನ್ನ ಮೇಲೆ ನಿಧಾನವಾಗಿ ಒಬ್ಬ ಕೋಲು ಹೊತ್ತ ಹರಿಜನ ಪೂಜಾರಿ ನಡೆಯುತ್ತಾ ಸಾಗಿದರು. ಇದೇ ರೀತಿ ದೇವಸ್ಥಾನದ ವರೆಗೆ ಅಂದರೆ ಅಂದಾಜು 2 ಕಿಲೋ ಮೀಟರ್ ಉದ್ದ ನಡಿಗೆ ಸಾಗಿತು.
ಈ ಸಂದರ್ಭದಲ್ಲಿ ಬೆನ್ನ ಮೇಲೆ ನಡೆಯುವವ ಸೇರಿ ಒಟ್ಟು 8 ಪೂಜಾರಿಗಳ ತಂಡ ಸಕಲ ವಾದ್ಯ, ಮೇಳಗಳ ಸದ್ದಿನೊಂದಿಗೆ ದೇವಿಯ ಮೂರ್ತಿಯೊಂದಿಗೆ ಹೊಳೆ ಪೂಜೆ ಮುಗಿಸಿಕೊಂಡು ದೇವಸ್ಥಾನಕ್ಕೆ ಸಾಗಿದರು. ಅದರಲ್ಲಿ ಒಬ್ಬ ಕೋಲು ಹೊತ್ತುಕೊಂಡ ಪೂಜಾರಿ ಮಾತ್ರ ಈ ರೀತಿ ಭಕ್ತರ ಮೈ ಮೇಲೆ ಹೋದರೆ ಉಳಿದವರು ಪಕ್ಕಕ್ಕೆ ನಡೆದು ಹೋದರು.
ಈ ಹಿಂದೆ ಜಾತ್ರೆಯಲ್ಲಿ ಸಾವಿರಾರು ಕುರಿಮರಿಗಳನ್ನು ಬಲಿ ಕೊಡಲಾಗುತ್ತಿತ್ತು. ಆದರೆ 5-6 ವರ್ಷಗಳಿಂದ ಪ್ರಾಣಿಬಲಿ ನಿಷೇಧ ಮಾಡಲಾಗಿದೆ.