ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನ ಗುಟ್ಟೆ ಗ್ರಾಮದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಪಂಯಿಂದ ಹೊಸದಾಗಿ ನಿರ್ಮಿಸಿರುವ 532ನೇ ಶುದ್ಧಗಂಗಾ ಜಲ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾಗದಲ್ಲಿ ಶ್ರೀಧರ್ಮಸ್ಥಳ ಕ್ಷೇತ್ರದ ಆಶೀರ್ವಾದದಿಂದ 532ನೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಸಾರ್ವಜನಿಕರಿಗೆ ಸಮರ್ಪಿಸಿರುವುದು ಶ್ಲಾಘನೀಯ. ಗ್ರಾಮೀಣರ ಆರ್ಥಿಕ ಸಬಲೀಕರಕ್ಕಾಗಿ ಹತ್ತಾರು ಜನಪರ ಯೋಜನೆಗಳನ್ನು ರೂಪಿಸಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು ಮತ್ತಷ್ಠು ನಮ್ಮ ಭಾಗದ ಜನತೆಗೆ ಯೋಜನೆಗಳನ್ನು ದೊರಕುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.ಈಗಾಗಲೇ ಬೇಸಿಗೆ ರಣ ಬಿಸಿಲು ತೀವ್ರವಾಗಿದ್ದು, ಜನತೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸರ್ಕಾರದ ಜೊತೆ ಕೈಜೋಡಿಸಿ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡತ್ತಿರುವುದು ಸಂತಸ ತಂದಿದೆ. ಮಧುಗಿರಿ ತಾಲೂಕಿನ ಅಭಿವೃದ್ಧಿಗೆ ಧರ್ಮಸ್ಥಳ ಸಂಘವು 17 ಕೋಟಿಗೂ ಅಧಿಕ ಅನುದಾನ ನೀಡಿದೆ. ಮುಂಬರುವ ದಿನಗಳಲ್ಲಿ ಮಧುಗಿರಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಿದ್ದಾಪುರ ಕೆರೆ ಮತ್ತು ಚೋಳೇನಹಳ್ಳಿ ಕೆರೆ ಹೂಳೆತ್ತುವ ಕೆಲಸ ಮಾಡಲಿದ್ದು ಅವರಿಗೆ ಎಲ್ಲ ರೀತಿಯ ನೆರವು ಕಲ್ಪಿಸಲಾಗುವುದು ಎಂದರು. ಗ್ರಾಪಂ ಪಿಡಿಓಗಳು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿ ನೀರಿನ ಕೊರತೆ ಎಲ್ಲಿ ಕಂಡು ಬರುತ್ತಿದೆ ಎಂಬುದನ್ನು ಗಮನಿಸಿ ಮುತುವರ್ಜಿ ವಹಿಸಿ ಬೇಸಿಗೆ ಕಾಲವಾದ್ದರಿಂದ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಕೊಡಿ ಎಂದು ಸಲಹೆ ನೀಡಿದರು.
ಧರ್ಮಸ್ಥಳದ ಯೋಜನಾಧಿಕಾರಿ ದಿನೇಶ್ ಕುಮಾರ್ ಮಾತನಾಡಿ, ಸ್ಥಳೀಯ ಗ್ರಾಪಂ ನೆರವಿನೊಂದಿಗೆ 532ನೇ ಶುದ್ಧಗಂಗಾ ಕುಡಿವ ನೀರಿನ ಘಟಕ ಸ್ಥಾಪಿಸಿದ್ದು , ಜಿಲ್ಲೆಯಲ್ಲಿ 105 ಘಟಕ ತೆರೆದಿದ್ದು ಮಧುಗಿರಿ ತಾಲೂಕಿನಲ್ಲಿ 7 ಘಟಕಗಳಿದ್ದು ಮುಂದುವರೆದು ಮುಂಬರುವ ದಿನಗಳಲ್ಲಿ 21 ಘಟ ಸ್ಥಾಪಿಸಲಿದ್ದೇವೆ. ಜನತೆ ಶುದ್ಧ ಕುಡಿಯುವ ನೀರನ್ನು ಆಹಾರ ಸೇವನೆ ರೀತಿ ಬಳಸಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕೆ ಶುದ್ಧ ಕುಡಿವ ನೀರು ಸಹಕಾರಿ ಎಂದರು.
ಸಮಾರಂಭದಲ್ಲಿ ಮಧುಗಿರಿ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ, ತಾಪಂ ಇಒ ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಕಡಗತ್ತೂರು ವಿಎಸ್ಎನ್ಎನ್ ಅಧ್ಯಕ್ಷ ತಿಮ್ಮಾರೆಡ್ಡಿ, ಅಧ್ಯಕ್ಷೆ ಆಂಜಿನಮ್ಮ, ಡಾ.ಎಂ.ಜಿ.ಶ್ರೀನಿವಾಮೂರ್ತಿ, ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಸದಸ್ಯ ರಂಗನಾಯಕ್ ಸೇರಿದಂತೆ ಇತರರು ಇದ್ದರು.