ಧರ್ಮಸ್ಥಳ ಮಾದರಿ ಯೋಜನೆ ದೇಶವ್ಯಾಪಿ ಜಾರಿಗೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

KannadaprabhaNewsNetwork |  
Published : Nov 15, 2024, 12:37 AM ISTUpdated : Nov 15, 2024, 08:03 AM IST
ನಿರ್ಮಲಾ ಸೀತಾರಾಂ | Kannada Prabha

ಸಾರಾಂಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದೇಶಕ್ಕೇ ಮಾದರಿಯಾಗಿದೆ. ಈ ಮಾದರಿಯನ್ನು ನಬಾರ್ಡ್‌ ದೇಶಾದ್ಯಂತ ಅನುಷ್ಠಾನ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

  ಬೆಳ್ತಂಗಡಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದೇಶಕ್ಕೇ ಮಾದರಿಯಾಗಿದೆ. ಈ ಮಾದರಿಯನ್ನು ನಬಾರ್ಡ್‌ ದೇಶಾದ್ಯಂತ ಅನುಷ್ಠಾನ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಗುರುವಾರ ಧರ್ಮಸ್ಥಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಿ ಮಾತನಾಡಿದರು.

ಹೆಚ್ಚಿನ ಸರ್ಕಾರಿ ಯೋಜನೆಗಳಲ್ಲಿ ಕೆಲವೊಮ್ಮೆ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳು ಇರುತ್ತವೆ. ಆದರೆ ಧರ್ಮಸ್ಥಳದ ಸಂಸ್ಥೆಗಳು ಯಾವುದೇ ಯೋಜನೆಗಳನ್ನು ಸದಾ ಪರಿಶೀಲನೆ ಮಾಡುವುದರಿಂದ ಅವು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ. ಕೇಂದ್ರ ಸರ್ಕಾರ ತನ್ನ ನೀತಿಗಳಲ್ಲಿ ಇಲ್ಲಿನ ಮಾದರಿಯನ್ನು ಅಳವಡಿಸುವತ್ತ ಚಿಂತಿಸಿದಲ್ಲಿ ನವ ಭಾರತದ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು.

2047ರ ವೇಳೆಗೆ ಭಾರತ ಸಂಪೂರ್ಣವಾಗಿ ಅಭಿವೃದ್ಧಿ ಭಾರತವಾಗಿ ಕಂಗೊಳಿಸಬೇಕು ಎಂಬ ಕನಸು ಪ್ರಧಾನಿ ಮೋದಿಯವರದ್ದು. ಸರ್ಕಾರ ಹಳ್ಳಿಗಳ ಸಶಕ್ತೀಕರಣಕ್ಕೆ ಆದ್ಯತೆ ನೀಡುತ್ತಿದೆ. ಇದಕ್ಕೆ ಮಹಿಳೆಯರ ಪಾಲು ಅಧಿಕವಾಗಬೇಕು. ಸ್ವಸಹಾಯ ಸಂಘಗಳ ಮಾದರಿ ಈಗ ಕೇವಲ ಕಲ್ಯಾಣದ ಅಥವಾ ಸಹಾಯ ನೀಡುವ ಕ್ರಮವಷ್ಟೇ ಆಗಿ ಉಳಿದಿಲ್ಲ. ಇದು ಮಹಿಳೆಯರಿಗೆ ಆದಾಯ ಗಳಿಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಲು ಬೇಕಾದ ಸಂಪನ್ಮೂಲಗಳನ್ನೂ ಒದಗಿಸುತ್ತದೆ. ಇಂಥ ಗುಂಪುಗಳಲ್ಲಿ ಭಾಗವಹಿಸಿದ ಮಹಿಳೆಯರು ಗಳಿಸುತ್ತಿರುವ ಲಾಭ ಅವರಿಗೆ ಗೌರವ ಮತ್ತು ಆತ್ಮವಿಶ್ವಾಸ ನೀಡುತ್ತದೆ. ಸರ್ಕಾರಿ ಯೋಜನೆಗಳು, ಧರ್ಮಸ್ಥಳ ಯೋಜನೆಯಂಥ ಎನ್‌ಜಿಒಗಳು ಗ್ರಾಮೀಣ ಮಹಿಳೆಯರಿಗೆ ಪ್ರಗತಿಯ ಅವಕಾಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದರು.

ಧರ್ಮಸ್ಥಳದ ಸಂಸ್ಥೆಗಳು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತಿದ್ದು, ಈ ಮಾದರಿ ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರುವಲ್ಲಿ ನೆರವಾಗಿವೆ.

ಧರ್ಮಸ್ಥಳ ಯೋಜನೆಗಳ ಮಾದರಿಯ ಯಶಸ್ಸಿನಲ್ಲಿ ಒಂದು ಮುಖ್ಯ ಅಂಶವೇನೆಂದರೆ ನೈತಿಕ ಹೊಣೆ. ಧರ್ಮಸ್ಥಳದಂತಹ ಸಂಸ್ಥೆಗಳು ತಮ್ಮ ಯೋಜನೆಗಳಲ್ಲಿ ನೈತಿಕ ನಿಯಂತ್ರಣವನ್ನು ನಿರ್ವಹಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಗ್ರಾಮದ ಅಭಿವೃದ್ಧಿಗೆ ಕಾರಣರಾಗುತ್ತಿದ್ದಾರೆ. 

ಪ್ರಧಾನಿ ಮೋದಿ ಅವರ ಕನಸು ಕೂಡ ಇದೇ ಆಗಿದೆ. ಹೆಣ್ಣುಮಕ್ಕಳು ನಾಯಕತ್ವ ವಹಿಸಿದರೆ ಏನಾಗುತ್ತದೆ ಅನ್ನುವುದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಉದಾಹರಣೆ. ಧರ್ಮಸ್ಥಳ ಗ್ರಾಮೀಣ ಯೋಜನೆಗಳ ಪ್ರಯೋಗಲಾಯ ಎಂದರೆ ತಪ್ಪಾಗದು ಎಂದು ಯೋಜನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ನಬಾರ್ಡ್ ಬ್ಯಾಂಕ್ ಅಧ್ಯಕ್ಷ ಶಾಜಿ ಕೆ.ವಿ, ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ