ಕನ್ನಡಪ್ರಭ ವಾರ್ತೆ ಗುಬ್ಬಿ
ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಪ್ರಮುಖ ಸಂಕಲ್ಪವಾಗಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಹೇಳಿದರು.ತಾಲೂಕಿನ ಮಡೇನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಕೊಪ್ಪ ವಲಯದ ವತಿಯಿಂದ ಎರಡು ನೂತನ ಸಂಘಗಳನ್ನು ರಚಿಸಿ ಮಾತನಾಡಿದರು. ರಾಜ್ಯದ ವಿವಿಧ ಗ್ರಾಮೀಣ ಭಾಗಗಳಲ್ಲಿ ಧರ್ಮಸ್ಥಳ ಸಂಘಗಳಿಂದ ಸಾಲ ಪಡೆದು ಹಲವರು ಅಭಿವೃದ್ಧಿಯಾಗಿದ್ದಾರೆ. ಮಹಿಳೆಯರಿಗೆ ವಿವಿಧ ರೀತಿಯ ಅನುಕೂಲ ಕಲ್ಪಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.
ಕೇವಲ ಸಾಲ ಕೊಟ್ಟು ಮಹಿಳೆಯರನ್ನು ಸಾಲಗಾರರನ್ನಾಗಿ ಮಾಡದೆ ಹೈನುಗಾರಿಕೆ, ಬ್ಯೂಟಿ ಪಾರ್ಲರ್, ಟೈಲರಿಂಗ್, ಹಾಗೂ ಇನ್ನಿತರ ಉಚಿತ ತರಬೇತಿ ನೀಡುವ ಮೂಲಕ ಆರ್ಥಿಕ ಸ್ಥಿತಿವಂತರನ್ನಾಗಿ ಮಾಡಲು ಉತ್ತೇಜಿಸಲಾಗುವುದು.770 ಕೆರೆಗಳನ್ನ ನಿರ್ಮಾಣ ಮಾಡಲಾಗಿದ್ದು, ಹಲವು ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದರು.ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ, ನಿರ್ಗತಿಕರಿಗೆ ಮಾಶಾಸನ ಕೊಡುವುದರ ಮೂಲಕ 10 ಹಲವು ಕಾರ್ಯಗಳನ್ನ ನಮ್ಮ ಧರ್ಮಸ್ಥಳ ಸಂಘ ಇಂದಿಗೂ ನಿರಂತರವಾಗಿ ಮಾಡುತ್ತಿರುವುದು ಹೆಗ್ಗಳಿಕೆಯ ವಿಷಯವಾಗಿದೆ. ಗ್ರಾಮಗಳ ಅಭಿವೃದ್ಧಿಯ ಕಲ್ಪನೆಯನ್ನು ಇಟ್ಟುಕೊಂಡು ಧರ್ಮಸ್ಥಳ ಸಂಘ ಮುನ್ನುಗ್ಗುತ್ತಿದೆ ಎಂದರು.
ತಾಲೂಕು ಯೋಜನಾಧಿಕಾರಿ ರಾಜೇಶ್ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಉತ್ತಮ ಗುಣಮಟ್ಟದ ಸಂಘಗಳು ಗ್ರಾಮೀಣ ಭಾಗಗಳಲ್ಲಿ ರಚನೆಯಾಗಬೇಕು. ಆಗ ಮಾತ್ರ ಉತ್ತಮ ಪರಿಸರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ. ಈಗಾಗಲೇ ಧರ್ಮಸ್ಥಳ ಸಂಘ ನಿರ್ಮಾಣವಾಗಿ ಸುಮಾರು 47 ವರ್ಷಗಳು ಕಳೆದಿದ್ದು, ಗುಬ್ಬಿ ತಾಲೂಕಿನ ಪೈಕಿ 3042 ಸಂಘಗಳು ರಚನೆಯಾಗಿವೆ. ಸಂಘದ ಎಲ್ಲಾ ಸದಸ್ಯರಿಗೂ ಆರೋಗ್ಯ, ಶಿಕ್ಷಣ ಸೇರಿದಂತೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಮಕ್ಕಳ ಉನ್ನತ ಶಿಕ್ಷಣಕ್ಕೆ ಸ್ಕಾಲರ್ಶಿಪ್ ನೀಡಲಾಗುತ್ತಿದೆ ಎಂದರು.ಸಂಘದ ಸದಸ್ಯರಿಗೆ ದಾಖಲಾತಿಗಳನ್ನ ಉಚಿತವಾಗಿ ಹಸ್ತಾಂತರ ಮಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಕಮಲಮ್ಮ, ವಲಯ ಮೇಲ್ವಿಚಾರಕಿ ಗಾಯತ್ರಿ, ವಿಭಾಗದ ಸೇವಾ ಪ್ರತಿನಿಧಿ ಮಂಜುಳಾ ಹಾಜರಿದ್ದರು.