ಬ್ಯಾಡಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಳೆದ ಆರೇಳು ದಶಕಗಳಲ್ಲಿಯೇ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಕೊಡಿಸುವಲ್ಲಿ ಸಫಲವಾಗಿದೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯವಾಹಿನಿಗೆ ತಂದ ಎಸ್ಡಿಎಂ: ಸಂಪನ್ಮೂಲ ವ್ಯಕ್ತಿ ಸಾಹಿತಿ ಮಾರುತಿ ಶಿಡ್ಲಾಪುರ ಮಾತನಾಡಿ, ಪುರುಷ ಪ್ರಧಾನ ಸಮಾಜ ಪ್ರಪಂಚದಾದ್ಯಂತ ಮಹಿಳಾ ಸ್ವಾತಂತ್ರ್ಯ ಹತ್ತಿಕ್ಕುತ್ತಾ ಬಂದಿದೆ. ಮಹಿಳೆಯರು ತಮ್ಮ ಮನೆಗಳಿಗೆ ಮಾತ್ರ ಸೀಮಿತರಾಗಿದ್ದರು. ಸಮಯ ಬದಲಾದಂತೆ ಕುಟುಂಬ ನಿರ್ಮಿತ ಅಡೆತಡೆ ದಾಟಲು ಮಹಿಳೆಯರು ಪ್ರಾರಂಭಿಸಿದರು. ಇಂತಹ ವೇಳೆ ಅವರ ನೆರವಿಗೆ ಬಂದಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಎಂದರೆ ತಪ್ಪಾಗಲಾರದು ಎಂದರು.
ಇದೊಂದು ಸಂಚಿತ ಪ್ರಜ್ಞೆ: ಪಿಎಸ್ಐ ಅರವಿಂದ ಮಾತನಾಡಿ, ಮಹಿಳಾ ಸಬಲೀಕರಣದ ಆರಂಭಕ್ಕೆ ಇತಿಹಾಸದಲ್ಲಿ ನಿಖರವಾದ ವರ್ಷವಿಲ್ಲ. ಆದರೆ ಇದೊಂದು ಸಂಚಿತ ಪ್ರಜ್ಞೆಯಾಗಿದೆ. ಆದಾಗ್ಯೂ ಕ್ರಾಂತಿಗಳು, ಚಳವಳಿಗಳು, ಪ್ರತಿಭಟನೆಗಳು, ಮಹಿಳಾ ಸಬಲೀಕರಣದ ವೇಗವನ್ನು ಹೆಚ್ಚಿಸಿವೆ. ಇದರ ಪರಿಣಾಮ ಮಹಿಳೆಯರು ಇದೀಗ ಅಡೆತಡೆಯಿಲ್ಲದೇ ಶಿಕ್ಷಣ ಮತ್ತು ಉದ್ಯೋಗ ಆನಂದಿಸುತ್ತಿದ್ದಾರೆ ಎಂದರು.ಮಹಿಳಾ ಸಬಲತೆಗೆ ಸಾಕ್ಷಿ: ಯೋಜನಾಧಿಕಾರಿ ಜಿ. ರಘುಪತಿ ಮಾತನಾಡಿ, ಎಸ್ಡಿಎಂ ಸಂಸ್ಥೆ ಪ್ರಚುರಪಡಿಸಿದ ಗುಂಪು ಸಾಲಯೋಜನೆ (ಮಹಿಳೆಯರಿಗೆ) ಅವರಿಗೆ ಆರ್ಥಿಕ ಸ್ವಾತಂತ್ರ್ಯ ಕೊಡಿಸಿದೆಯಲ್ಲದೇ ಅಸಮಾನತೆಯ ಪ್ರಪಾತದಲ್ಲಿ ಬಿದ್ದಿದ್ದ ಮಹಿಳೆಯರನ್ನು ಮೇಲೆತ್ತುವ ಗಮನಾರ್ಹ ಕೆಲಸವನ್ನು ಮಾಡಿದೆ. ಇದರ ಪರಿಣಾಮ ಯೋಜನೆಯಡಿ ಬರುವ ಮಹಿಳೆಯರು ಇಂದಲ್ಲ ನಾಳೆ ಪ್ರಪಂಚದಲ್ಲಿಯೇ ಮಹಿಳಾ ಸಬಲತೆಗೆ ಸಾಕ್ಷಿಯಾದರೂ ಆಶ್ಚರ್ಯವಿಲ್ಲ ಎಂದರು.
ಮುಖ್ಯಶಿಕ್ಷಕಿ ಎಸ್.ಬಿ. ಸವಕ್ಕನವರ, ಮೇಲ್ವಿಚಾರಕಿ ಶೀತಲ್ ಬೇಕಲ್, ಕೃಷಿ ಅಧಿಕಾರಿ, ವಿಚಕ್ಷಣಾಧಿಕಾರಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.