- ನುಗ್ಗಿಹಳ್ಳಿಯಲ್ಲಿ ಮದ್ಯವರ್ಜನ ಶಿಬಿರ ಸಮಾರೋಪದಲ್ಲಿ ಮಾಡಾಳು ವಿರೂಪಾಕ್ಷಪ್ಪ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಶ್ರೀ ಕ್ಷೇತ್ರ ಧರ್ಮಸ್ಥಳ ದೇವರುಗಳೇ ನೆಲೆಸಿರುವಂತಹ ಪುಣ್ಯಕ್ಷೇತ್ರವಾಗಿದೆ. ಇಂತಹ ಕ್ಷೇತ್ರದ ಮೇಲೆ ಅಪ ಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಚನ್ನಗಿರಿ ತಾಲೂಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.ತಾಲೂಕಿನ ನುಗ್ಗಿಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ 1963ನೇ ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೂರುದಾರನೊಬ್ಬ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಿದ್ದೇನೆ ಎಂದು 13ಕ್ಕೂ ಹೆಚ್ಚು ಸ್ಥಳಗಳನ್ನು ತೋರಿಸಿದ್ದಾರೆ. ಅಧಿಕಾರಿಗಳು ಆ ಜಾಗದಲ್ಲಿ ಅಗೆದು, ಬಗೆದು ನೋಡಿದರೆ ಎಲ್ಲೂ ಅಸ್ತಿ ಪಂಜರಗಳೇ ಸಿಕ್ಕಿಲ್ಲ. ಸುಳ್ಳು ಆರೋಪಗಳ ಮೂಲಕ ಧರ್ಮಸ್ಥಳಕ್ಕೆ ಕೆಟ್ಟ ಹೆಸರನ್ನು ತರಲು ಹವಣಿಕೆ ತರವಲ್ಲ ಎಂದರು.ದೇಶದ ಪುಣ್ಯಕ್ಷೇತ್ರವಾದ ಶನಿ ಸಿಂಗಾಪುರ ಕ್ಷೇತ್ರದಲ್ಲಿ ಮನೆಗಳಿಗೆ ಬಾಗಿಲುಗಳೇ ಇರುತ್ತಿರಲಿಲ್ಲ. ಬ್ಯಾಂಕುಗಳು ಕೂಡ ಒಂದು ಪರದೆ ಮುಚ್ಚಿ ಹೋಗುತ್ತಿದ್ದರು. ಆದರೂ, ಅಲ್ಲಿ ಯಾವುದೇ ಕಳವು ಕೃತ್ಯಗಳು ನಡೆಯುತ್ತಿರಲಿಲ್ಲ. ಶಬರಿಮಲೆ, ತಿರುಪತಿಯಂಥ ಹಿಂದೂ ಶ್ರದ್ಧಾ ಕೇಂದ್ರಗಳಿಗೂ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿತ್ತು ಎಂದು ಟೀಕಿಸಿದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪಾಂಡೋಮಟ್ಟಿ ವಿರಕ್ತ ಮಠದ ಡಾ.ಶ್ರೀ ಗುರುಬಸವ ಮಹಾಸ್ವಾಮೀಜಿ ಮಾತನಾಡಿ, ಮದ್ಯಪಾನದಂತಹ ದುಶ್ಚಟಗಳಿಂದ ಅನೇಕ ಕುಟುಂಬಗಳಲ್ಲಿ ಅಶಾಂತಿ, ಸಮಾಜದಲ್ಲಿ ಅಗೌರವ, ಮಕ್ಕಳು ಬೀದಿ ಪಾಲಾಗುವಂಥ ಘಟನೆಗಳು ನಡೆಯುತ್ತಿವೆ. ಪ್ರಯೋಗಾಲಯ, ವಾಚನಾಲಯ, ಕ್ರೀಡಾಂಗಣದಲ್ಲಿ ಇರಬೇಕಾಗಿದ್ದ ಯುವಜನರು ಇಂದು ಪಾನಾಲಯ, ಕ್ಯಾಬರೆಗಳಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಎಲ್ಲರೂ ಉತ್ತಮ ಜೀವನ ರೂಪಿಸಿಕೊಳ್ಳಲು ಶ್ರಮಿಸಬೇಕು ಎಂದರು.ಮುಖ್ಯ ಅತಿಥಿಗಳಾಗಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ವೀರೇಶ್ ನಾಯ್ಕ್, ಎಸ್.ಬಿ. ಶಿವಕುಮಾರ್, ದಿಗ್ಗೇನಹಳ್ಳಿ ನಾಗರಾಜ್, ಕಾಕನೂರು ಎಂ.ಬಿ. ನಾಗರಾಜ್, ಶಿಬಿರಾಧಿಕಾರಿ ಕುಮಾರ್, ಎಸ್.ಪಿ. ಪ್ರಕಾಶ್, ಪರಮೇಶ್ವರಯ್ಯ. ಈಶ್ವರಪ್ಪ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಯೋಜನೆಯ ಕಮಲಾಕ್ಷ, ಮುತ್ತಪ್ಪ, ಕುಬೇಂದ್ರಪ್ಪ, ಯೋಜನಾಧಿಕಾರಿ ಸಂತೋಷ್ ಉಪಸ್ಥಿತರಿದ್ದರು.
- - -(ಬಾಕ್ಸ್) * ಕುಡಿತದಿಂದ ಮುಕ್ತಿ ಶೇಷ್ಠ ಸೇವೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸಂಘಟನೆ ಮೂಲಕ ಅಶಕ್ತ ಮಹಿಳೆಯರಿಗೆ ಆರ್ಥಿಕವಾಗಿ ಸಬಲರನ್ನಾಗಿಸುತ್ತಿದೆ. ಗ್ರಾಮಾಂತರ ಪ್ರದೇಶಗಳ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಆರ್ಥಿಕ ಸಹಕಾರ ನೀಡುತ್ತಿದೆ. ರಾಜ್ಯದಲ್ಲಿನ ದೇವಾಲಯಗಳ ನಿರ್ಮಾಣಕ್ಕೂ ಧನಸಹಾಯ, ಕೆರೆಗಳ ಅಭಿವೃದ್ಧಿ, ಮನೆಗಳಿಲ್ಲದವರಿಗೆ ಸೂರು ಕಲ್ಪಿಸುವಂಥ ಹಲವಾರು ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಸಂಸ್ಥೆ ಹೆಗ್ಗಳಿಕೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರಶಂಶಿಸಿದರು. ಮದ್ಯವ್ಯಸನದಿಂದ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿದ್ದಂತಹ ವ್ಯಸನಿಗಳನ್ನು ಕುಡಿತದಿಂದ ಮುಕ್ತಗೊಳಿಸುವುದು ಶೇಷ್ಠ ಕಾರ್ಯ. ಇಂತಹ ಶಿಬಿರಗಳಲ್ಲಿ ಪಾಲ್ಗೊಂಡವರು ಪುನಃ ಉತ್ತಮ ಜೀವನವನ್ನು ನಡೆಸಲು ಸಹಕಾರಿ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
- - --13ಕೆಸಿಎನ್ಜಿ1.ಜೆಪಿಜಿ:
ನೀತಿಗೆರೆ ಗ್ರಾಮದಲ್ಲಿ ಮದ್ಯವರ್ಜನಾ ಶಿಬಿರ ಸಮಾರೋಪ ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು. ಪಾಂಡೋಮಟ್ಟಿ ಶ್ರೀಗಳು, ಗಣ್ಯರು ಇದ್ದಾರೆ.