ಕಾರವಾರ: ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬುಧವಾರ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಉದ್ಘಾಟಿಸಿದರು.ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ವಿಶ್ವ ಕಂಡ ಶ್ರೇಷ್ಠ ಮೇದಾವಿ ಬಸವಣ್ಣನವರು ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ರಾಯಾಭಾರಿಯಾಗದೇ, ಸಮಾಜ ಸುಧಾರಣೆ, ಧರ್ಮದಲ್ಲಿರುವ ಅನಾಚಾರಗಳು ಸೇರಿದಂತೆ ಸಮಾಜದಲ್ಲಿರುವ ಸಂಪ್ರದಾಯಗಳು, ಅನಿಷ್ಟ ಪದ್ಧತಿಗಳ ವಿರುದ್ಧ ನಿರ್ಭಯವಾಗಿ ವಚನ ಸಾಹಿತ್ಯದ ಮೂಲಕ ಪ್ರತಿಪಾದಿಸಿದರು ಎಂದು ಹೇಳಿದರು.
ಹಿರಿಯ ಪತ್ರಕರ್ತ ನಾಗರಾಜ ಹರಪನಹಳ್ಳಿ ಮಾತನಾಡಿ, ಬಸವಣ್ಣ ಅವರು 12ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ದೊಡ್ಡ ಕ್ರಾಂತಿಯನ್ನು ಮಾಡಿದವರು ಎಂದರು.
ಶಿಕ್ಷಕ ಗಣೇಶ ಎನ್ ಬಿಷ್ಠಣ್ಣನವರ್, ಬಸವಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿ, ವಿಶ್ವ ಗುರು, ಜ್ಞಾನಜ್ಯೋತಿ ಬಸವಣ್ಣ ನಾಡಿಗೆ ಹೊಸ ನವ್ಯತೆಯನ್ನು ನೀಡಿ, ತಮ್ಮ ವಚನಗಳ ಮೂಲಕ ನಮ್ಮೆಲ್ಲರನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ ಎಂದರು.ಪ್ರಮುಖರಾದ ರಾಜೀವ್ ಮಠದ್, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಲಾ ನಾಯ್ಕ ಸ್ವಾಗತಿಸಿದರು. ಶಿವಾಜಿ ವಿದ್ಯಾಮಂದಿರದ ಶಿಕ್ಷಕ ಮಹಾದೇವ ರಾಣೆ ನಿರೂಪಿಸಿ, ವಂದಿಸಿದರು.