ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸಮೀಪದ ಆಲೂರುಸಿದ್ದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ 75 ವರ್ಷ ತುಂಬಿರುವ ಹಿನ್ನೆಲೆ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ, ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳ ಸಹಭಾಗಿತ್ವದಲ್ಲಿ 75ನೇ ವರ್ಷದ ಶಾಲಾ ವಜ್ರಮಹೋತ್ಸವ ಸಂಭ್ರಮವನ್ನು ಈಗಾಗಲೆ ಆಚರಿಸಲು ತೀರ್ಮಾನಿಸಿರುವ ಹಿನ್ನಲೆಯಲ್ಲಿ ಮಂಗಳವಾರ ಶಾಲಾ ಸಭಾಂಗಣದಲ್ಲಿ ವಜ್ರಮಹೋತ್ಸವ ಸಮಿತಿ, ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರ 4ನೇ ಪೂರ್ವಭಾವಿ ಸಭೆಯು ವಜ್ರಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪಿ.ಎಸ್.ಸತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.ಪೂರ್ವಭಾವಿ ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಉದಯ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ವಜ್ರಮಹೋತ್ಸವವನ್ನು ಈ ಹಿಂದೆ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನವಾದ ರೂಪರೇಶಗಳಂತೆ ಯಶಸ್ವಿಯಾಗಿ ನಡೆಸಲು ವಜ್ರಮಹೋತ್ಸವ ಸಮಿತಿ, ಹಳೆಯ ವಿದ್ಯಾರ್ಥಿಗಳು ಈಗಲೇ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು
ಹಿರಿಯ ವಿದ್ಯಾರ್ಥಿ ಎಚ್.ಎಸ್.ಪ್ರೇಮ್ನಾಥ್ ಸಲಹೆ ನೀಡಿ, ಶಾಲಾ ವಜ್ರಮಹೋತ್ಸವ ಅದ್ಧೂರಿಯಾಗಿ ನಡೆಸಲು ತೀರ್ಮಾನವಾಗಿರುವ ಹಿನ್ನಲೆಯಲ್ಲಿ ಮೊದಲು ಆರ್ಥಿಕ ಕ್ರೋಢಿಕರಣಗೊಳಿಸಲು ತ್ವರಿತವಾಗಿ ಪ್ರಯತ್ನಿಸುವ ಅಗತ್ಯ ಇದೆ ಎಂದರು.ಸಭೆಯಲ್ಲಿ ಆರ್ಥಿಕ ಕ್ರೋಡೀಕರಣ, ಮೂರು ದಿನ ನಡೆಯುವ ವಜ್ರಮಹೋತ್ಸವ ಸಂಭ್ರಮದ ಕಾರ್ಯಕ್ರಮಗಳ ಬಗ್ಗೆ, ಶಾಲಾ ವಜ್ರಮಹೋತ್ಸವ ಪ್ರಯುಕ್ತ ಶಾಲೆಗೆ ಸುಣ್ಣಬಣ್ಣ ಹೊಡೆಯುವುದು, ಶಾಲಾ ವಜ್ರಮಹೋತ್ಸವ ಸಂಭ್ರಮ ಮುಗಿದ ನಂತರವು ಶಾಲೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು, ಶಾಲಾ ವಜ್ರಮಹೋತ್ಸವ ಕಾರ್ಯಕ್ರಮವನ್ನು ನವಂಬರ್ ಕೊನೆಯಲ್ಲಿ ಅಥವಾ ಡಿಸಂಬರ್ ಮೊದಲ ವಾರದೊಳಗೆ ನಡೆಸುವುದಾಗಿ ಮತ್ತು ಈ ಕುರಿತಾಗಿ ಮುಂದಿನ ಪೂರ್ವಭಾವಿ ಸಭೆಯಲ್ಲಿ ದಿನಾಂಕ ನಿಗದಿ ಪಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು ಮತ್ತು ಮುಂದಿನ ಪೂರ್ವಸಭೆಯನ್ನು ಜು. 29 ರಂದು ನಡೆಸುವಂತೆ ನಿರ್ಣಯಿಸಲಾಯಿತು.
ಸಭೆಯಲ್ಲಿ ವಜ್ರಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪಿ. ಎಸ್. ಸತೀಶ್ಕುಮಾರ್, ವಜ್ರಮಹೋತ್ಸವ ಸಮಿತಿ ಕಾರ್ಯದರ್ಶಿ ಎಚ್.ಪಿ.ಕರುಂಭಯ್ಯ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಪ್ರಮುಖರಾದ ಕಡ್ಯದ ಮಾಚಯ್ಯ, ಅಂಬ್ರಾಟಿ ಮಾದಪ್ಪ, ನಿವೃತ್ತ ಪ್ರಾಂಶುಪಾಲ ಎಚ್.ಮಾದಪ್ಪ, ಎಸ್ಡಿಎಂಸಿ ಅಧ್ಯಕ್ಷ ಹೇಮಾನಂದ್, ಹಳೆಯ ವಿದ್ಯಾರ್ಥಿಗಳಾದ ಪ್ರಕಾಶ್ ವೀಣಾ, ನಿವೃತ್ತ ಅಭಿಯಂತರ ಸೋಮಯ್ಯ ಮುಂತಾದವರು ಇದ್ದರು.