ಕೆಡಿಪಿ ಸಭೆಗಳಿಗೆ ಡೈರಿ ಕಾರ್ಯದರ್ಶಿಗಳು ಹೋಗದಂತೆ ಸೂಚನೆ

KannadaprabhaNewsNetwork |  
Published : May 27, 2025, 02:07 AM IST
26ಕೆಎಂಎನ್ ಡಿ15 | Kannada Prabha

ಸಾರಾಂಶ

ಗ್ರಾಪಂಗಳು ಸರ್ಕಾರದ ಒಂದು ಭಾಗ. ಸ್ಥಳೀಯ ಸರ್ಕಾರವಾಗಿ ತಾಪಂ ಇಒಗಳಿಂದ ಹಿಡಿದು ಸ್ಥಳೀಯ ನ್ಯಾಯಬೆಲೆ ಅಂಗಡಿ ಮಾಲೀಕವರೆಗೆ ಎಲ್ಲರೂ ಗ್ರಾಪಂಗಳ ಕೆಡಿಪಿ ಸಭೆಗಳಲ್ಲಿ ಭಾಗವಹಿಸುವುದು ಕಡ್ಡಾಯ. ಇದಕ್ಕಾಗಿ ರಾಜ್ಯ ಸರ್ಕಾರ ಸುತ್ತೊಲೆ ಹೊರಡಿಸಿದ್ದು ಅದರಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳೂ ಕೆಡಿಪಿ ಸಭೆಯಲ್ಲಿ ಭಾಗವಹಿಸಲೇಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸ್ಥಳೀಯ ಗ್ರಾಮ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆಗಳಿಗೆ (ಕೆಡಿಪಿ) ಡೈರಿ ಕಾರ್ಯದರ್ಶಿಗಳು ಭಾಗವಹಿಸದಂತೆ ಮನ್ಮುಲ್ ನಿರ್ದೇಶಕ ಡಾಲು ರವಿ ಸೂಚಿಸಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಹಾಲು ಉತ್ಪಾದಕರ ಒಕ್ಕೂಟದ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳ ಸಭೆಯಲ್ಲಿ ಸೂಚನೆ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಗ್ರಾಪಂಗಳು ಸರ್ಕಾರದ ಒಂದು ಭಾಗ. ಸ್ಥಳೀಯ ಸರ್ಕಾರವಾಗಿ ತಾಪಂ ಇಒಗಳಿಂದ ಹಿಡಿದು ಸ್ಥಳೀಯ ನ್ಯಾಯಬೆಲೆ ಅಂಗಡಿ ಮಾಲೀಕವರೆಗೆ ಎಲ್ಲರೂ ಗ್ರಾಪಂಗಳ ಕೆಡಿಪಿ ಸಭೆಗಳಲ್ಲಿ ಭಾಗವಹಿಸುವುದು ಕಡ್ಡಾಯ. ಇದಕ್ಕಾಗಿ ರಾಜ್ಯ ಸರ್ಕಾರ ಸುತ್ತೊಲೆ ಹೊರಡಿಸಿದ್ದು ಅದರಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳೂ ಕೆಡಿಪಿ ಸಭೆಯಲ್ಲಿ ಭಾಗವಹಿಸಲೇಬೇಕು ಎಂದರು.

ಡೈರಿಗಳು ಯಾವುದೇ ವ್ಯಕ್ತಿ ನಿರ್ಮಿತವಲ್ಲ. ಬದಲಾಗಿ ಅವು ಸಹಕಾರಿ ನಿಯಮದಡಿ ರಚನೆಯಾಗಿವೆ. ಸರ್ಕಾರದ ಸಹಕಾರ ಇಲಾಖೆ ಕಾರ್ಯವ್ಯಾಪ್ತಿಗೆ ಸೇರಿವೆ. ಕ್ಷೇತ್ರದ ಶಾಸಕರಾದವರು ಸರ್ಕಾರದ ಒಂದು ಭಾಗ ಎನ್ನುವ ಅರಿವು ಡಾಲು ರವಿಗಿಲ್ಲ. ಸಹಕಾರಿ ನಿಯಮಗಳ ಅರಿವಿಲ್ಲದ ವ್ಯಕ್ತಿ ತಾಲೂಕು ವ್ಯಾಪ್ತಿಯಲ್ಲಿ ಪಾಳೇಗಾರಿಕೆಯ ನಡವಳಿಕೆ ಪ್ರದರ್ಶಿಸುತ್ತಿದದಾರೆ. ಡಾಲು ರವಿಯ ಗೊಡ್ಡು ಬೆದರಿಕೆಗಳಿಗೆ ನಾನು ಬೆದರುವವನಲ್ಲ ಎಂದು ಕಿಡಿಕಾರಿದರು.

ಡೇರಿಗಳ ಸಭೆಗೆ ಕ್ಷೇತ್ರದ ಶಾಸಕರನ್ನು ಆಹ್ವಾನಿಸುವುದು ಸಹಜ. ಶಾಸಕರನ್ನು ಆಹ್ವಾನಿಸಿದರೆ ಅಂತಹ ಸಹಕಾರ ಸಂಘಗಳಿಗೆ ಮನ್ಮುಲ್ ವತಿಯಿಂದ ಯಾವುದೇ ಅನುದಾನ ನೀಡುವುದಿಲ್ಲ ಎಂದು ಡಾಲು ರವಿ ಕಾರ್ಯದರ್ಶಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.

ಶಾಸಕರನ್ನು ಆಹ್ವಾನಿಸದೆ ಹಕ್ಕು ಚ್ಯುತಿ ಮಾಡಿದ ತಾಲೂಕಿನ ಹರಿರಾಯನಹಳ್ಳಿ ಡೈರಿ ನಡೆಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸಹಕಾರ ಇಲಾಖೆಗೆ ನೋಟಿಸ್ ನೀಡಿದ್ದಾರೆ. ಡಾಲು ರವಿಯಂತೆಯೇ ಪಾಳೇಗಾರಿಕೆ ಭಾಷೆಯಲ್ಲಿ ಮಾತನಾಡುವುದು ನನಗೂ ಬರುತ್ತದೆ. ಆದರೆ, ಕ್ಷೇತ್ರದ ಶಾಸಕನಾಗಿ ನಾನು ಜನರ ಗೌರವಕ್ಕೆ ಧಕ್ಕೆಯಾಗದಂತೆ ನಡೆಯಬೇಕಾಗಿದೆ ಎಂದರು.

ನಾನು ಸಮಾಜಕ್ಕೆ ಅಂಜಿ ನಡೆಯುವವನು. ಶಿಸ್ತು ಮತ್ತು ಕಾರ್ಯ ಬದ್ಧತೆ ಹೊಂದಿದ್ದೇನೆ. ಸರ್ಕಾರದ ನಿಯಮಾನುಸಾರ ನಾನು ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿ ಕೆಡಿಪಿ ಸಭೆ ಆಯೋಜಿಸಿ ಆಡಳಿತವನ್ನು ಬಲಗೊಳಿಸಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿದ್ದೇನೆ. ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ತಮಗೆ ಇರುವ ಅಧಿಕಾರ ಬಳಕೆ ಮಾಡಿ ಅಧಿಕಾರಿಗಳಿಂದ ಕೆಲಸ ಮಾಡಿಸುವಂತೆ ಸಜ್ಜುಗೊಳಿಸುತ್ತಿದ್ದೇನೆ ಎಂದರು.

ಕ್ಷೇತ್ರದ ಶಾಸಕನಾದ ನನ್ನನ್ನು ಡಾಲು ರವಿ ಕೇವಲವಾಗಿ ನಿಂದಿಸಿ ಮಾತನಾಡಿದ್ದಾರೆ. ಅವರು ತನ್ನ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಡೈರಿಗಳ ಪ್ರಗತಿಗೆ ಚಿಂತಿಸಲಿ. ಶಾಸಕರನ್ನು ಬಹಿರಂಗವಾಗಿ ನಿಂದಿಸಿದರೆ ನಾನು ದೊಡ್ಡವನಾಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬರಲಿ. ಇಲ್ಲದಿದ್ದರೆ ಅವರಂತೆಯೇ ನನ್ನ ಭಾಷೆಯನ್ನು ಬದಲಿಸಿಕೊಂಡು ಉತ್ತರಿಸಬೇಕಾಗುತ್ತದೆಂದು ಶಾಸಕ ಎಚ್.ಟಿ.ಮಂಜು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯರಾದ ಬೂಕನಕೆರೆ ಹುಲ್ಲೇಗೌಡ, ಮಲ್ಲೇನಹಳ್ಳಿ ಮೋಹನ್, ಹೊಸಹೊಳಲು ರಾಜು, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ್, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕುರುಬರಹಳ್ಳಿ ನಾಗೇಶ್, ಜೆಡಿಎಸ್ ವಿವಿಧ ಹೋಬಳಿ ಘಟಕದ ಅಧ್ಯಕ್ಷರಾದ ಮಾಕವಳ್ಳಿ ವಸಂತಕುಮಾರ್, ಸಂತೇಬಾಚಹಳ್ಳಿ ರವಿಕುಮಾರ್, ಅಘಲಯ ಅಜಯ್, ಮನ್ಮುಲ್ ಪರಾಜಿತ ಅಭ್ಯರ್ಥಿ ಬೋರ್‍ವೆಲ್ ಮಹೇಶ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ