ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೀನಿಯರ್ ಚೇಂಬರ್ ವತಿಯಿಂದ ಹೆಣ್ಣು ಮಕ್ಕಳ ಹದಿಹರೆಯದ ಬಗ್ಗೆ ಉಪನ್ಯಾಸ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಇತ್ತೀಚಿನ ವರ್ಷಗಳಲ್ಲಿ ಬದಲಾದ ಆಹಾರ ಶೈಲಿ, ಜೀವನ ಶೈಲಿಯಿಂದ ಹೆಣ್ಣು ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಕೊಪ್ಪದ ವೈದ್ಯೆ ಡಾ.ಅನಿತಾ ನಟರಾಜ್ ತಿಳಿಸಿದರು.
ಮಂಗಳವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೀನಿಯರ್ ಚೇಂಬರ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡಿ, ಹಿಂದೆ 15 -16 ನೇ ವಯಸ್ಸಿಗೆ ಋತುಮತಿಯಾಗುತ್ತಿದ್ದ ಹೆಣ್ಣು ಮಕ್ಕಳು ಈಗ 10- 12 ನೇ ವಯಸ್ಸಿಗೆ ಆಗುತ್ತಿದ್ದಾರೆ. ಬದಲಾದ ಜೀವನ ಶೈಲಿಯೇ ಇದಕ್ಕೆ ಕಾರಣ. 12 -18 ನೇ ವಯಸ್ಸಿನವರೆಗೂ ವಿದ್ಯಾರ್ಥಿನಿಯರಲ್ಲಿ ಶಾರೀರಿಕ ಹಾಗೂ ಮಾನಸಿಕ ಬದಲಾವಣೆ ಸಹಜ ಪ್ರಕ್ರಿಯೆ.ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಗಾಬರಿಯಾಗದೆ ತಮ್ಮ ಸಮಸ್ಯೆಗಳನ್ನು ಶಿಕ್ಷಕಿ ಯರು ಹಾಗೂ ಪೋಷಕರೊಂದಿಗೆ ಹಂಚಿಕೊಳ್ಳಬೇಕು. ಸಣ್ಣ ಸಮಸ್ಯೆ ಎಂದು ಹಾಗೇ ಬಿಟ್ಟರೆ ಮುಂದೆ ಅದು ದೊಡ್ಡ ಸಮಸ್ಯೆಯಾಗಿ ಗಂಭೀರ ಪರಿಣಾಮವಾಗುತ್ತದೆ. ಶಿಕ್ಷಣ ಕಲಿಯುವ ಹಂತದಲ್ಲಿ ವಿದ್ಯಾರ್ಥಿನಿಯರು ಏಕಾಗ್ರತೆಯಿಂದ ಗುರಿ ಮುಟ್ಟುವ ತನಕ ಕಠಿಣ ಪರಿಶ್ರಮದಿಂದ ಪಠ್ಯ ಪುಸ್ತಕಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸೀನಿಯರ ಚೇಂಬರ್ ಉಪಾಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಸೀನಿಯರ್ ಚೇಂಬರ್ ವಿಶೇಷವಾಗಿ ಶಾಲಾ, ಕಾಲೇಜುಗಳಲ್ಲಿ ಇಂತಹ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿರುವುದರಿಂದ ಮುಂದೆ ದೇಶದ ಉತ್ತಮ ನಾಗರಿಕರಾಗಿ ಬಾಳಬೇಕು ಎಂಬುದೇ ಉದ್ದೇಶವಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಅಜ್ಜಪ್ಪ ಮಾತನಾಡಿ, ಸೀನಿಯರ್ ಚೇಂಬರ್ ಯಾವುದೇ ಪ್ರತಿ ಫಲಾಫೇಕ್ಷೆ ಇಲ್ಲದೆ ಸೇವೆ ಉದ್ದೇಶದಿಂದ ವೈದ್ಯರನ್ನು ಕರೆಸಿ ವಿದ್ಯಾರ್ಥಿನಿಯರಿಗೆ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಿ ಕೊಟ್ಟಿರುವುದರಿಂದ ನಮ್ಮ ಶಾಲೆ ವಿದ್ಯಾರ್ಥಿನಿಯರಿಗೆ ಅನುಕೂಲವಾಗಿದೆ. ಮುಂದೆ ಸಹ ಇಂತಹ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ನಡೆಸಿಕೊಡಿ ಎಂದು ಮನವಿ ಮಾಡಿದರು. ಸಭೆ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಅಧ್ಯಕ್ಷ ಕೆ.ಆರ್.ನಾಗರಾಜ ಪುರಾಣಿಕ್ ವಹಿಸಿದ್ದರು. ಅತಿಥಿಗಳಾಗಿ ಸೀನಿಯರ್ ಚೇಂಬರ್ ಪೂರ್ವಾಧ್ಯಕ್ಷರಾದ ಎಚ್.ಆರ್.ದಿನೇಶ್, ಎಚ್.ಬಿ.ರಘುವೀರ್, ಸದಸ್ಯರಾದ ಬಿ.ಎನ್.ದಕ್ಷಿಣಾಮೂರ್ತಿ, ಕುಮಾರ್ ಜಿ ಶೆಟ್ಟಿ, ಕೆ.ಎಸ್.ರಾಜಕುಮಾರ್, ಜಿ.ಆರ್.ದಿವಾಕರ್, ಟಿ.ಎಂ.ಶಿವಕುಮಾರ್ ಮತ್ತಿತರರು ಇದ್ದರು.