ಅಳ್ನಾವರ: ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಉರ್ದು ಶಾಲೆಯ ಕುರಿತಾಗಿ ಸೋಮವಾರ ''''ಶಿಥಿಲಗೊಂಡ ಶಾಲೆಯಲ್ಲಿಯೇ ನಡೆಯುತ್ತಿರುವ ತರಗತಿ'''' ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಳ್ಳುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಪಂ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಆಗಮಿಸಿ ಶಾಲೆಯನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಿದರು.
ಈಗಾಗಲೇ ಸರ್ಕಾರದಿಂದ ಗ್ರಾಮದಲ್ಲಿನ ಶಾಲೆಗೆ ಎರಡು ಕಟ್ಟಡಗಳು ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಬಿಇಒ ರಾಮಕೃಷ್ಣ ಸದಲಗಿ ಕನ್ನಡಪ್ರಭಕ್ಕೆ ತಿಳಿಸಿದರು.
ಈ ವೇಳೆ ತಾಪಂ ಅಧಿಕಾರಿ ಸಂತೋಷ ತಳಕಲ್ಲ, ರೈತ ಸಂಘದ ತಾಲೂಕು ಅಧ್ಯಕ್ಷ ರವಿ ವಡ್ಡರ, ಎಸ್ಡಿಎಂಸಿ ಅಧ್ಯಕ್ಷ ಮಹಾಬೂಬ ನಿಚ್ಚನಕಿ, ರಾಜೇಸಾಬ ನಿಚ್ಚನಕಿ, ಸಲೀಂ ತಾಳಿಕೋಟಿ, ಸುಭಾನಿ ಅಮ್ಮಿನಬಾವಿ, ಸಾಧಿಕ ಗಬ್ಬೂರ ಇದ್ದರು.