ಕಾಫಿ ಬೆಳೆಗಾರರ ಸಂಘದ ಕಚೇರಿಗೆ ಎಂ.ಜೆ. ದಿನೇಶ್ ಭೇಟಿ

KannadaprabhaNewsNetwork | Published : Oct 6, 2024 1:17 AM

ತಾಲೂಕು ಕಾಫಿ ಬೆಳೆಗಾರರ ಸಂಘದ ಕಚೇರಿಗೆ ಕಾಫಿ ಮಂಡಳಿ ಅಧ್ಯಕ್ಷ ಎಂ. ಜೆ. ದಿನೇಶ್‌ ಭೇಟಿ ನೀಡಿ ಮನವಿ ಸ್ವೀಕರಿಸಿದರು. 307 ಕೋಟಿಯ ಸಹಾಯ ಧನ ಯೋಜನೆ ಇದ್ದು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕು ಕಾಫಿ ಬೆಳೆಗಾರರ ಸಂಘದ ಕಚೇರಿಗೆ, ಭಾರತ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಶನಿವಾರ ಭೇಟಿ ನೀಡಿ ಮನವಿ ಸ್ವೀಕರಿಸಿದರು.

ನಂತರ ಮಾತನಾಡಿ, ಭಾರತ ಕಾಫಿ ಮಂಡಳಿ ವತಿಯಿಂದ ಬೆಳೆಗಾರರಿಗೆ 307 ಕೋಟಿಯ ಸಾಕಷ್ಟು ಸಹಾಯಧನ ಯೋಜನೆ ಇದ್ದು, ಬೆಳೆಗಾರರ ಬಳಸಿಕೊಳ್ಳಬೇಕು. ಅರೇಬಿಕಾ ಕಾಫಿ ಬೆಳೆಗಾರರು ಮೊದಲು ಸಂಘಟಿತರಾಗಬೇಕಿದೆ. ನಂತರ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಿದಲ್ಲಿ ಯಶಸ್ಸುಗಳಿಸಲು ಸಾಧ್ಯ. ಈಗಾಗಲೇ ಸಾಂಪ್ರದಾಯಿಕವಾಗಿ ಕಾಫಿ ಬೆಳೆಯುವ ದೇಶಗಳನ್ನು ಬಿಟ್ಟು, ಸಾಕಷ್ಟು ದೇಶಗಳಲ್ಲಿ ರೋಬಷ್ಠ ಕಾಫಿ ಬೆಳೆಯಲಾಗುತ್ತಿದೆ. ಅದರ ನೇತೃತ್ವವನ್ನು ಪ್ರಪಂಚದ ಮೂರು ಬೃಹತ್ ಕಂಪೆನಿಗಳು ವಹಿಸಿದ್ದು, ಮುಂದಿನ 50 ವರ್ಷಗಳಿಗೆ ಬೇಕಾಗುವ ಕಾಫಿಯನ್ನು ಉತ್ಪಾದಿಸಲಾಗುತ್ತಿದೆ. ಆದುದ್ದರಿಂದ ಬೆಳೆಗಾರರು ಅಲಸ್ಯದಿಂದ ಹೊರಬಂದು ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರೊಂದಿಗೆ, ಸಹಾಯಕ್ಕಾಗಿ ಸರ್ಕಾರವನ್ನು ಕಾಯದೆ, ಲಾಭದಾಯಿಕ ಕಾಫಿ ಬೆಳೆಯಲು ಚಿಂತಿಸಬೇಕು ಎಂದರು.

ತಿಂಗಳ ಒಂದು ದಿನ ಕಾಫಿ ಬೆಳೆಗಾರರ ಸಂಘದ ಕಚೇರಿಯಲ್ಲಿ ಅರೇಬಿಕಾ ಕಾಫಿ ಬೆಳೆಗಾರರು ಸೇರಿದಲ್ಲಿ, ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳನ್ನು ಕರೆಸಿ ಲಾಭದಾಯಕವಾಗಿ ಕಾಫಿ ಬೆಳೆಯುವುದು, ಮಾರುಕಟ್ಟೆಯ ಸೇರಿದಂತೆ ಸಂಪೂರ್ಣ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಅದ್ಯಕ್ಷ ಮೋಹನ್ ಬೋಪಣ್ಣ ಮಾತನಾಡಿ, ಜಿಲ್ಲೆಯಲ್ಲಿ ಅರೇಬಿಕಾ ಕಾಫಿ ಬೆಳೆಯುವ ಪ್ರಮುಖ ತಾಲೂಕಾಗಿದ್ದು, ಕಾಫಿ ಕೃಷಿ ಅವನತಿಯತ್ತ ಸಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಈಗಾಗಲೇ ಹೆಚ್ಚಿನ ಅರೇಬಿಕಾ ಬೆಳೆಗಾರರು ರೊಬಷ್ಟ ಕಾಫಿ ಬೆಳೆಯುವತ್ತ ಸಾಗಿದ್ದಾರೆ. ಈ ನಿಟ್ಟಿನಲ್ಲಿ ಹವಾಮಾನಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿರುವ ಅರೇಬಿಕಾ ಕಾಫಿ ಕಣ್ಮರೆಯಾಗುವುದನ್ನು ತಪ್ಪಿಸಲು ಕಾಫಿ ಮಂಡಳಿ ಮತ್ತು ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗಬೇಕು. ಕ್ರಿಮಿನಾಶಕ, ಗೊಬ್ಬರ, ಮೈಲುತುತ್ತ ಸೇರಿದಂತೆ ಎಲ್ಲದಕ್ಕೂ ಇನ್ನೂ ಹೆಚ್ಚಿನ ಸಹಾಯಧನ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ದಾಖಲೆಯ ಮಳೆಗೆ ಕಾಫಿ ನಷ್ಟವಾಗಿದ್ದು, ಬೆಳೆಗಾರರ ಫಸಲು ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ವಾಣಿಜ್ಯ ಬ್ಯಾಂಕ್‌ಗಳು ಬೆಳೆಗಾರರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾಗಬೇಕು ಎಂದರು.

ವೇದಿಕೆಯಲ್ಲಿ ಕಾಫಿ ಮಂಡಳಿ ಸದಸ್ಯ ಕಿಶೋರ್, ಹಿರಿಯ ಕಾಫಿ ಬೆಳೆಗಾರರಾದ ಎಸ್.ಜಿ. ಮೇದಪ್ಪ, ಬಿ.ಡಿ. ಮಂಜುನಾಥ್, ಲವಕುಮಾರ್ ಇದ್ದರು.