ಗದಗ: ಅಂಗವಿಕಲತೆ ಶಾಪವಲ್ಲ, ಅದನ್ನು ಸವಾಲಾಗಿ ಸ್ವೀಕರಿಸಬೇಕು. ಇಂತಹ ಮಕ್ಕಳ ಬೌದ್ಧಿಕ ಹಾಗೂ ಶೈಕ್ಷಣಿಕ ಸಾಮರ್ಥ್ಯ ವೃದ್ಧಿಸುವ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕೆಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ್ ಹೇಳಿದರು.
ಮಕ್ಕಳ ಕಲಿಕೆ ನಿರಂತರವಾಗಿರಲಿ. ವಿಶೇಷ ಮಕ್ಕಳು ಸಾಧಿಸಬಲ್ಲರು. ಅವರಲ್ಲಿ ಸ್ಪೂರ್ತಿ ತುಂಬುವ ಕಾರ್ಯ ನಡೆಯಬೇಕು. ಅವರಿಗಾಗಿಯೇ ಸರ್ಕಾರದ ಹಲವಾರು ಯೋಜನೆಗಳಿದ್ದು ಅವುಗಳ ಸದ್ವಿನಿಯೋಗವಾಗಬೇಕೆಂದರು.
ಅಂಗವಿಕಲ ಮಕ್ಕಳ ಪಾಲನೆ-ಪೋಷಣೆಯಲ್ಲಿ ಪಾಲಕರ ಪಾತ್ರ ಕುರಿತು ಮುಖ್ಯೋಪಾಧ್ಯಾಯ ಎಸ್.ಸಿ. ನಾಗರಳ್ಳಿ ಉಪನ್ಯಾಸ ನೀಡಿ, ಅಂಗವಿಕಲರಿಗೆ ಅನುಕಂಪ ಬೇಡ, ಅವಕಾಶ ಬೇಕು. ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯಲು ಸೂಕ್ತ ಅವಕಾಶ ಕಲ್ಪಿಸಿದಲ್ಲಿ ಅಗಾಧವಾದ ಸಾಧನೆ ಮಾಡಬಲ್ಲರು ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ ಮಾತನಾಡಿ, ವಿಕಲಚೇತನರು ಚೈತನ್ಯಶೀಲರು. ಪ್ರತಿಭೆ ಅವರಲ್ಲಿ ಅಡಗಿರುತ್ತದೆ. ಅದರಲ್ಲಿಯ ವಿವಿಧ ಕಲೆಗಳಿಗೆ ನಾವು ಅವಕಾಶ ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ವಿವಿಧ ನ್ಯೂನತೆಗಳುಳ್ಳ ಮಕ್ಕಳು ಸಹ ಕಲಿಯಬಲ್ಲರು, ಆಡಬಲ್ಲರು ಎಂಬುದನ್ನು ನಾವು ಮನನ ಮಾಡಿಕೊಂಡು ಇಂತಹ ಮಕ್ಕಳೊಂದಿಗೆ ಆತ್ಮಿಯ ಅವಿನಾಭಾವ ಸಂಬಂಧ ಹೊಂದಿ ಕಲಿಕೆಗೆ ಪೂರಕವಾಗಿ ಚಟುವಟಿಕೆ ಆಧಾರಿತ ಬೋಧನೆ, ಪರಿಣಾಮಕಾರಿ ಕಲಿಕೆಗೆ ಉತ್ತಮ ಪರಿಸರ ನಿರ್ಮಾಣ ನಮ್ಮ ಗುರಿಯಾಗಿರಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿದರು.
ಖಾಜಾ ಹುಸೇನ ಕಾತರಕಿ, ಮಂಜು ಭರಮಣ್ಣವರ, ನಾಸಿರುದ್ಧಿನ ಮಕಾನದಾರ, ಎಸ್.ಸಿ. ನಾಗರಳ್ಳಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ದಕ್ಷೀತಾ ಎಸ್, ಪವಿತ್ರಾ ಕಿಟಗೇರಿ, ವಿವೇದಿತಾ ದೇವರಕುಂಡಿ, ಸಾಗರ ಭಜಂತ್ರಿ, ಇಜಾಜ ನದಾಫ್, ಆಕೀಬ್ ಕರಡಿ ಬಹುಮಾನ ಪಡೆದರು.ಸಂಪನ್ಮೂಲ ವ್ಯಕ್ತಿಗಳಾದ ಇ.ಡಿ. ಹುಗ್ಗೇಣವರ, ಬಸವರಾಜ ಮಟ್ಟಿ, ಗವಿಸಿದ್ಧಯ್ಯ ಹಿರೇಮಠ, ಪುಷ್ಪಾ ಮಾನೆ, ಮಾಲನ್ ಹೊಸಳ್ಳಿ, ರತ್ನಾ ಚಂಡೂರ, ಗಣೇಶ ದೊಡ್ಡಮನಿ, ಸೈಮನ್ ರೋಡ್ರಿಗಸ್, ಕವಿತಾ ಎಸ್, ನಸರಿನ್ ಕರಡಿ, ಅಂಬಿಕಾ ರಾಯಬಾಗಿ, ಅರ್ಚನಾ ಪಾವನ್, ಸಂಗೀತಾ ಸೋಳಂಕಿ, ರೇಖಾ ಕಿರಟಗೇರಿ, ಸತೀಶ ಗಡಾದ, ಚಂದ್ರು ಉಪ್ಪಳಕರ, ಮಂಜುಳಾ ಕಾಕಿ, ಶೃತಿ ಶ್ಯಾವಿ, ಆಶಾ ಭಜಂತ್ರಿ, ಶಹನಾಜ್ ಬೇಗಂ ನದಾಫ್, ಗೀತಾ ಸಿದ್ದನಗೌಡ್ರ ಇದ್ದರು. ಸಂಪನ್ಮೂಲ ವ್ಯಕ್ತಿ ಶಶಿಧರ ಚಳಗೇರಿ ಸ್ವಾಗತಿಸಿ ನಿರೂಪಿಸಿದರು, ಸುನೀತಾ ತಿಮ್ಮನಗೌಡ್ರ ವಂದಿಸಿದರು.