ಜಿಲ್ಲೆಯ ವಿದ್ಯುತ್ ವ್ಯತ್ಯಯ ಬಗ್ಗೆ ಸಚಿವರೊಂದಿಗೆ ಚರ್ಚಿಸಿ ಕ್ರಮ: ಹೆಸ್ಕಾಂ ಅಧ್ಯಕ್ಷ

KannadaprabhaNewsNetwork |  
Published : Apr 22, 2026, 02:30 AM IST
ಭಟ್ಕಳದ ಹೆಸ್ಕಾಂ ಕಚೇರಿಯಲ್ಲಿ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜಮ್‌ಪೀರ್ ಎಸ್. ಖಾದ್ರಿ ಪತ್ರಕರ್ತರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಭಟ್ಕಳ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ಜನತೆಗೆ ತೊಂದರೆಯಾಗುತ್ತಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಭಟ್ಕಳ

ಭಟ್ಕಳ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ಜನತೆಗೆ ತೊಂದರೆಯಾಗುತ್ತಿದೆ ಎಂಬ ಅಭಿಪ್ರಾಯ ಕೇಳಿ ಬಂದಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್‌ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜಮ್‌ಪೀರ್ ಎಸ್. ಖಾದ್ರಿ ಹೇಳಿದರು.

ಭಟ್ಕಳಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಭಟ್ಕಳದಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಬೇಸಿಗೆಯ ಸಂದರ್ಭದಲ್ಲಿ ತೀವ್ರ ತೊಂದರೆಯಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಮೆಸ್ಕಾಂನಿಂದ ರಿಂಗ್ ಸಂಪರ್ಕ ಕಲ್ಪಿಸುವ ಯೋಜನೆ ನನೆಗುದಿಗೆ ಬಿದ್ದಿದೆ, ಭಟ್ಕಳದಲ್ಲಿ ನಿರ್ಮಾಣವಾಗುತ್ತಿರುವ ೧೧೦ ಕೆವಿ ಸ್ಟೇಶನ್ ಕೂಡಾ ಕಾಮಗಾರಿಯಾಗಿದ್ದರೂ ಟವರ್ ನಿರ್ಮಾಣಕ್ಕೆ ತಡೆಯಾಗಿದೆ ಎಂದು ಪತ್ರಕರ್ತರು ಹೆಸ್ಕಾಂ ಅಧ್ಯಕ್ಷರ ಗಮನ ಸೆಳೆದರು. ರೈತರಿಗೆ ಹಗಲು ಹೊತ್ತಿನಲ್ಲಿ ೭ ತಾಸು ವಿದ್ಯುತ್ ನೀಡುತ್ತಿದ್ದೇವೆ. ಸೋಲಾರ್ ವಿದ್ಯುತ್ ಸಂಪರ್ಕವನ್ನು ರೈತರಿಗೆ ನೀಡಲು ಚಿಂತನೆ ನಡೆದಿದೆ. ಏಳು ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ರೈತರ ಅಕ್ರಮ ಪಂಪ್ ಸೆಟ್‌ಗಳ ವಿದ್ಯುತ್ ಸಂಪರ್ಕ ಸಕ್ರಮ ಮಾಡಿದ್ದೇವೆ. ರೈತರಿಗಾಗಿ ಶೀಘ್ರ ಸಂಪರ್ಕ ಯೋಜನೆಯನ್ನು ತಂದಿದ್ದು ಇದರಡಿಯಲ್ಲಿ ೧ ಟಿಸಿಯನ್ನು ಉಚಿತವಾಗಿ ಹಾಕಿ ಕೊಡಲಿದ್ದೇವೆ ಎಂದರು.

ರೈತರಿಗೆ ಸೊಲಾರ್ ಪಂಪ್ ಸೆಟ್‌ ನೀಡಲಾಗುತ್ತಿದ್ದು, ಶೇ.೫೦ ರಾಜ್ಯ ಸರಕಾರದ ಸಬ್ಸಿಡಿ, ಶೇ.೨೦ ಕೇಂದ್ರ ಸರಕಾರದ ಸಬ್ಸಿಡಿ ದೊರೆಯುತ್ತಿದ್ದು ಕೇವಲ ಶೇ.೨೦ರಷ್ಟು ರೈತರು ಭರಿಸಬೇಕಾಗುತ್ತದೆ ಎಂದರು.

ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಬಡಜನರ ಗಲ್ಲಿಗಳಲ್ಲಿರುವ ಅನೇಕ ಹಳೆಯ ಶಿಥಿಲ ಕಂಬಗಳನ್ನು ಬದಲಿಸಲು ಕ್ರಮ ಕೈಗೊಂಡಿದ್ದೇನೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇನೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಭಟ್ಕಳ ಒಳಗೊಂಡಂತೆ ಉಪ ವಿಭಾಗದಲ್ಲಿ ಒಟ್ಟೂ ೧೪೦೩೪೩ ಗೃಹಜ್ಯೋತಿ ಸಂಪರ್ಕಗಳಿದ್ದು ಈ ಭಾಗದಲ್ಲಿ ಶೇ.೯೮.೮೮ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ಹೆಸ್ಕಾಂ ಹೊನ್ನಾವರ ಉಪ ವಿಭಾಗದ ಪ್ರವೀಣ, ಭಟ್ಕಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೋಷ ತಿದ್ದಿಕೊಂಡು ನಡೆಯುವಂತಾಗಲಿ: ಮಾಧವಾನಂದಭಾರತೀ ಸ್ವಾಮಿಗಳು
ವಿಜೃಂಭಣೆಯ ಉಜ್ಜಯನಿ ಮರಳುಸಿದ್ದೇಶ್ವರ ಮಹಾರಥೋತ್ಸವ