ಕನ್ನಡಪ್ರಭ ವಾರ್ತೆ ಮಂಡ್ಯ
ಮುಂದಿನ ಹದಿನೈದು ದಿನಗಳೊಳಗೆ ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಅರ್ಜಿ ಸಲ್ಲಿಸಿರುವವರ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ರಾಜ್ಯ ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಸೂಚನೆ ನೀಡಿದರು.ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಾಲಕ್ಕೆ ಅರ್ಜಿ ಸಲ್ಲಿಸಿದವರು ಬಂದಾಗ ಬ್ಯಾಂಕ್ ಅಧಿಕಾರಿಗಳು ಮುಖಾಮುಖಿ ಸಂದರ್ಶನ ಮಾಡುವುದಕ್ನು ನಿಲ್ಲಿಸಬೇಕು. ಸಾಲ ನೀಡುವುದಕ್ಕೆ ಪೂರಕ ದಾಖಲೆಗಳು ಸರಿಯಾಗಿದ್ದ ಮೇಲೆ ಸಾಲ ಮಂಜೂರು ಮಾಡಬೇಕು. ಸಬ್ಸಿಡಿ ಕೊಡುವಾಗಲೂ ಚಕಾರ ಎತ್ತಬಾರದು ಎಂದು ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಕಿರು ಉದ್ದಿಮೆ ಸ್ಥಾಪನೆಗೆ ಅರ್ಜಿ ಸಲ್ಲಿಸಿದವರ ಪೈಕಿ ೩೭ ಜನರಿಗೆ ೯.೮ ಕೋಟಿ ರು. ಸಾಲ ಬಾಕಿ ಇರುವುದು ತಿಳಿದುಬಂದಿದೆ. ಈ ಸಾಲದ ಅರ್ಜಿಗಳನ್ನು ಮುಂದಿನ ೧೫ ದಿನಗಳೊಳಗೆ ವಿಲೇವಾರಿ ಮಾಡಬೇಕು. ಕನಿಷ್ಠ ಜಿಲ್ಲೆಯಿಂದ ೧ ಸಾವಿರ ಅರ್ಜಿಗಳಿಗೆ ಸಾಲ ವಿತರಣೆ ಮಾಡುವ ಗುರಿ ಹೊಂದಿರುವಂತೆ ಸೂಚಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಬೆಲ್ಲ, ತುಪ್ಪ, ಅವಲಕ್ಕಿ ಸೇರಿದಂತೆ ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನ, ಆಹಾರೋತ್ಪನ್ನಗಳನ್ನು ಮಾಡಿ ಕಳುಹಿಸಿಕೊಡಿ. ಅದರಿಂದ ಮೌಲ್ಯವರ್ಧನೆ ಹೆಚ್ಚುತ್ತದೆ. ಆಹಾರ ಪದಾರ್ಥಗಳು ಸಂಸ್ಕರಣೆಗೊಳಪಟ್ಟಾಗ ಅದರ ಮೌಲ್ಯ ಹೆಚ್ಚುತ್ತದೆ. ಪ್ರತಿಯೊಂದು ಮನೆಯಲ್ಲೂ, ಪ್ರತಿಯೊಬ್ಬರಲ್ಲೂ ಒಂದೊಂದು ಐಡಿಯಾ ಇರುತ್ತದೆ. ಅದನ್ನು ಕಾರ್ಯಗತಗೊಳಿಸುವ ದೃಢವಾದ ಮನಸ್ಸಿರಬೇಕು ಎಂದರು.ಧಾರವಾಡ ಪೇಡ, ಗೋಕಾಕ್ ಕರದಂಟು, ಬೆಳಗಾವಿ ಕುಂದ ಹೀಗೆ ಅದರದ್ದೇ ಆದ ಭೌಗೋಳಿಕ ಸೂಚನೆಯನ್ನು ಹೊಂದಿವೆ. ಅದೇ ರೀತಿ ಜಿಲ್ಲೆಯ ಮದ್ದೂರು ವಡೆ ಇದುವರೆಗೂ ಭೌಗೋಳಿಕ ಸೂಚನೆಯನ್ನು ಹೊಂದಿಲ್ಲದಿರುವುದು ವಿಪರ್ಯಾಸ. ಅದಕ್ಕೊಂದು ಐಡೆಂಟಿಟಿ ಕೊಡುವ ಪ್ರಯತ್ನ ಈಗಲಾದರೂ ಮಾಡಬೇಕಿದೆ ಎಂದರು.