ಪಿಎಸ್ಎಸ್‌ಕೆ ನೌಕರರಿಗೆ ರಜಾ ನಗದೀಕರಣ, ಬೋನ್ಸ್‌ ನೀಡಲು ತಕರಾರು

KannadaprabhaNewsNetwork |  
Published : May 07, 2024, 01:05 AM IST
6ಕೆಎಂಎನ್ ಡಿ22 | Kannada Prabha

ಸಾರಾಂಶ

ಕಾರ್ಖಾನೆಯನ್ನು 40 ವರ್ಷ ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್, ಪಿಎಸ್‌ಎಸ್‌ಕೆ ಕಾರ್ಮಿಕರನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಈಗಾಗಲೇ 4 ವರ್ಷ ಕಬ್ಬು ನುರಿಸಿದೆ. 3 ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಜಾ ನಗದೀಕರಣ ಮತ್ತು ಶಾಸನ ಬದ್ಧ ಬೋನಸ್ ನೀಡಿದ್ದು, ಪ್ರಸಕ್ತ ವರ್ಷ ಮುಗಿದರೂ ತಮಗೆ ರಜಾ ನಗದೀಕರಣ ಮತ್ತು ಶಾಸನ ಬದ್ಧ ಬೋನಸ್ ನೀಡಿಲ್ಲ ಎಂದು ಕಾರ್ಮಿಕರು ದೂರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಜಾ ನಗದೀಕರಣ ಮತ್ತು ಶಾಸನ ಬದ್ಧ ಬೋನಸ್ ನೀಡಲು ತಕರಾರು ಮಾಡುತ್ತಿರುವ ನಿರಾಣಿ ಶುಗರ್ಸ್ ಸಂಸ್ಥೆ ಸಿಜಿಎಂ ಸಂಜೀವ್ ಕುಮಾರ್ ಅವರಿಗೆ ಪಿಎಸ್‌ಎಸ್‌ಕೆ ನೌಕರರು ಘೇರಾವ್ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಕಾರ್ಖಾನೆಯನ್ನು 40 ವರ್ಷ ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್, ಪಿಎಸ್‌ಎಸ್‌ಕೆ ಕಾರ್ಮಿಕರನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಈಗಾಗಲೇ 4 ವರ್ಷ ಕಬ್ಬು ನುರಿಸಿದೆ. 3 ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಜಾ ನಗದೀಕರಣ ಮತ್ತು ಶಾಸನ ಬದ್ಧ ಬೋನಸ್ ನೀಡಿದ್ದು, ಪ್ರಸಕ್ತ ವರ್ಷ ಮುಗಿದರೂ ತಮಗೆ ರಜಾ ನಗದೀಕರಣ ಮತ್ತು ಶಾಸನ ಬದ್ಧ ಬೋನಸ್ ನೀಡಿಲ್ಲ ಎಂದು ಕಾರ್ಮಿಕರು ದೂರಿದರು.

ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದು, ರಜಾ ನಗದೀಕರಣ ಮತ್ತು ಬೋನಸ್ ಹಣ ಬಂದಲ್ಲಿ ತಮ್ಮ ಮಕ್ಕಳ ಶಾಲಾ ದಾಖಲಾತಿಗೆ ಅನುಕೂಲವಾಗುತ್ತದೆ. ಆರೋಗ್ಯ ವೆಚ್ಚ ಸರಿದೂಗಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಜನವರಿ ತಿಂಗಿನಿಂದಲೇ ತಾವು ಮನವಿ ಸಲ್ಲಿಸಿದ್ದು, ಇಲ್ಲಿವರೆಗೂ ಕಾರ್ಖಾನೆ ಆಡಳಿತ ಮಂಡಳಿ ತಮಗೆ ಹಣ ನೀಡಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.

ಕಾರ್ಮಿಕರ ವೇತನದಲ್ಲಿ ಪಿಎಫ್‌ಹಣ ಕಟಾವು ಮಾಡಲಾಗುತ್ತಿದೆ. ಆದರೆ, ಅದರ ಅಕೌಂಟ್ ನಂಬರ್ ನೀಡುತ್ತಿಲ್ಲ. ಎರಡು ದಿನದಿಂದ ನಾವು ಕಾರ್ಖಾನೆಗೆ ಬಂದಿದ್ದರೂ ಹಾಜರಿ ನೀಡಿಲ್ಲ. ಕ್ಯಾಂಟಿನ್ ಸೌಲಭ್ಯ ತೀರಾ ಕಳಪೆ, ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ನೋವು ಹೇಳಿದರು.

ಸ್ಥಳಕ್ಕೆ ರೈತಸಂಘದ ಜಿಲ್ಲಾ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮತ್ತು ತಾಲೂಕು ಅಧ್ಯಕ್ಷ ಕೆನ್ನಾಳು ಪಿ.ನಾಗರಾಜು ಧಾವಿಸಿ ಸಿಜಿಎಂ ಸಂಜೀವ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಕಾರ್ಮಿಕರ ಸಮಸ್ಯೆ ಈಡೇರಿಸುವಂತೆ ಒತ್ತಾಯಿಸಿದರು.

ಈ ವೇಳೆ ಸಿಜಿಎಂ ಸಂಜೀವ್ ಕುಮಾರ್ ಮಾತನಾಡಿ, ರಜಾ ನಗದೀಕರಣ ಹಣವನ್ನು ಕಾರ್ಮಿಕರು ನಿವೃತ್ತಿಯಾದಾಗ ನೀಡಲು ಮತ್ತು ಶಾಸನ ಬದ್ಧ ಬೋನಸ್ ಹಣವನ್ನು ದೀಪಾವಳಿಯಂದು ಕೊಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು. ಅಲ್ಲದೇ, ಕಾರ್ಮಿಕರಲ್ಲಿ ಶಿಸ್ತನ ಕೊರತೆ ಇದೆ. ಭಾನುವಾರದಂದು ನಾನು ಕಾರ್ಖಾನೆ ಬಂದಾಗ ನನ್ನನ್ನು ಕಾರ್ಮಿಕರು ಗೇಟ್‌ನಲ್ಲಿ ತಡೆದರು ಎಂದು ಸಿಜಿಎಂ ಕಾರ್ಮಿಕರ ವಿರುದ್ಧ ದೂರಿದಾಗ, ಪಿಎಸ್‌ಎಸ್‌ಕೆ ಮಾಜಿ ಉಪಾಧ್ಯಕ್ಷರೂ ಆದ ರೈತಸಂಘದ ತಾಲ್ಲೂಕು ಅಧ್ಯಕ್ಷ ಪಿ.ನಾಗರಾಜು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಮೊದಲು ಆಡಳಿತ ಮಂಡಳಿ ಮತ್ತು ಉನ್ನತ ಹುದ್ದೆಯಲ್ಲಿರುವ ನೀವು ಶಿಸ್ತು ಕಲಿಯಿರಿ, ಕಾರ್ಮಿಕರಿಗೆ ಕಾಲಕಾಲಕ್ಕೆ ನೀಡಬೇಕಿದ್ದ ಭತ್ಯೆ ಮತ್ತಿತರ ಶಾಸನ ಬದ್ಧ ಅನುಕೂಲಗಳನ್ನು ಸಮಯಕ್ಕೆ ಸರಿಯಾಗಿ ಕೊಟ್ಟಿದ್ದರೆ ಅವರೇಕೆ ನಿಮ್ಮನ್ನು ಗೇಟ್ ಹತ್ತಿರ ತಡೆಯುತ್ತಿದ್ದರು. ನೀವು ಅವರ ತಾಳ್ಮೆಯನ್ನು ಪರೀಕ್ಷಿಸಬೇಡಿ, ಕೂಡಲೇ ಅವರಿಗೆ ಕೊಡಬೇಕಿರುವ ಅಗತ್ಯ ಅನುಕೂಲ ಒದಗಿಸಿ, 10 ದಿನದೊಳಗೆ ಕಾರ್ಮಿಕರ ಸಮಸ್ಯೆ ಈಡೇರಿಸುವಂತೆ ಗಡುವು ನೀಡಿದರು.

ರೈತ ಮುಖಂಡರ ಆಕ್ರೋಶಕ್ಕೆ ಮಣಿದ ಸಿಜಿಎಂ ಸಂಜೀವ್ ಕುಮಾರ್, ಈ ಬಗ್ಗೆ ಕೂಡಲೇ ಆಡಳಿತ ಮಂಡಳಿಗೆ ವಿಷಯ ತಿಳಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಈ ವೇಳೆ ರೈತಮುಖಂಡರಾದ ಕೆನ್ನಾಳು ವಿಜಯಕುಮಾರ್, ಎಣ್ಣೆಹೊಳೆಕೊಪ್ಪಲು ಮಂಜು, ರಘು, ಪಿಎಸ್‌ಎಸ್‌ಕೆ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಎಂ.ಪುಟ್ಟಮಾದೇಗೌಡ, ಉಪಾಧ್ಯಕ್ಷ ಡಿ.ಲೋಕೇಶ್, ಕಾರ್ಯದರ್ಶಿ ಎನ್.ಮಹೇಶ್, ಖಜಾಂಚಿ ಸಿದ್ದೇಗೌಡ, ಸಹ ಕಾರ್ಯದರ್ಶಿ ಡಿ.ಸುರೇಶ್ ಹಾಗೂ ಪಿಎಸ್‌ಎಸ್‌ಕೆ ನೌಕರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!