ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಅರ್ಹರಿಗೆ ಪಡಿತರ ಚೀಟಿ ವಿತರಿಸಿ

KannadaprabhaNewsNetwork | Published : Dec 9, 2023 1:15 AM

ಸಗಟು ಸಾಗಾಣಿಕೆ ಗುತ್ತಿಗೆದಾರರಿಗೆ ಉತ್ತಮ ಗುಣಮಟ್ಟದ ಪಡಿತರ ಆಹಾರಧಾನ್ಯವನ್ನು ಎತ್ತುವಳಿ ಮಾಡಿ ವಿತರಿಸಬೇಕು.

ಕಾರವಾರ:

ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ ಈಗಾಗಲೇ ಸಲ್ಲಿಸಲಾಗಿರುವ ಅರ್ಜಿ ಪರಿಶೀಲಿಸಿ ಅರ್ಹರಿಗೆ ಹೊಸ ಪಡಿತರ ಚೀಟಿ ವಿತರಿಸಲು ಕ್ರಮವಹಿಸಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಿರ್ದೇಶನ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಆಹಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಡಿತರ ಚೀಟಿ ಪರಿಶೀಲಿಸಿ ಅನರ್ಹ ಪಡಿತರ ಚೀಟಿ ರದ್ದುಪಡಿಸಿ ಅರ್ಹರಿಗೆ ವಿತರಿಸಬೇಕು. ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ 5 ಕೆಜಿ ಹೆಚ್ಚುವರಿ ಅಕ್ಕಿ ಬದಲಾಗಿ ಡಿಬಿಟ್ ಮೂಲಕ ಹಣ ಪಾವತಿ ಮಾಡಲಾಗುತ್ತಿದ್ದು, ಹಣ ಜಮಾ ಆಗದೆ ಇರುವ ಪಡಿತರ ಚೀಟಿಗಳನ್ನು ಪರಿಶೀಲಿಸಿ ಪಡಿತರದಾರರಿಗೆ ಹಣ ಪಾವತಿ ಆಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಎನ್‍ಪಿಸಿಐ ಫೆಲ್ಯೂರ್ ಮತ್ತು ಆಧಾರ್‌ ಸಿಡೀಂಗ್ ಡೀಲಿಂಕ್ ಆಗುತ್ತಿರುವ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಬ್ಯಾಂಕ್‍ಗಳು ಸಹಕಾರ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸೂಚಿಸಬೇಕು. ತಾಲೂಕುಗಳಲ್ಲಿ ಪಡಿತರ ಅಕ್ಕಿಯ ದುರುಪಯೋಗವಾಗುತ್ತಿರುವ ಬಗ್ಗೆ ಪತ್ತೆ ಹಚ್ಚಬೇಕು. ಸಗಟು ಮಳಿಗೆದಾರರಿಗೆ ಆಹಾರಧಾನ್ಯದ ಗುಣಮಟ್ಟ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.

ಸಗಟು ಸಾಗಾಣಿಕೆ ಗುತ್ತಿಗೆದಾರರಿಗೆ ಉತ್ತಮ ಗುಣಮಟ್ಟದ ಪಡಿತರ ಆಹಾರಧಾನ್ಯವನ್ನು ಎತ್ತುವಳಿ ಮಾಡಿ ವಿತರಿಸಬೇಕು. ಪ್ರತಿ ತಿಂಗಳ ಸೀಮೆಎಣ್ಣೆ ಎತ್ತುವಳಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ, ಜಿಲ್ಲೆಯಲ್ಲಿ 4338 ಅನರ್ಹ ಪಡಿತರ ಚೀಟಿ ಪತ್ತೆ ಮಾಡಲಾಗಿದ್ದು, ₹ 46,29,100 ದಂಡ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಖಜಾನೆಯ ಉಪ ನಿರ್ದೇಶಕರು, ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿ, ಆಹಾರ ನಿರೀಕ್ಷಕರು, ಸಗಟು ಗೋದಾಮು ವ್ಯವಸ್ಥಾಪಕರು, ಸಗಟು ಸಾಗಾಣಿಕೆ ಗುತ್ತಿಗೆದಾರರು ಇದ್ದರು.