ಚನ್ನಪಟ್ಟಣ: ತಾಲೂಕಿನ ಭೂಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಎರಡು ಮನೆಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿ ನಿರಾಶ್ರಿತರಾಗಿದ್ದ ಎರಡು ಕುಟುಂಬಗಳಿಗೆ ಗ್ರಾಮ ಪಂಚಾಯಿತಿಯಿಂದ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ ಎಂದು ಭೂಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈರಪ್ಪ ತಿಳಿಸಿದರು.
ಸಂತ್ರಸ್ತರ ಎರಡು ಮನೆಗಳು ಸಂಪೂರ್ಣ ಭಸ್ಮವಾಗಿದ್ದವು. ಮನೆಯಲ್ಲಿದ್ದ ಎಲ್ಲಾ ವಸ್ತುಗಳು, ಆಹಾರ ಪದಾರ್ಥಗಳು ಎಲ್ಲಾ ಸುಟ್ಟು ಕರಕಲಾಗಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ಮನೆ ಮತ್ತು ವಸ್ತುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದ ಎರಡು ಕುಟುಂಬಗಳಿಗೆ ಪಂಚಾಯಿತಿಯಿಂದ ತಾತ್ಕಾಲಿಕವಾಗಿ ಬಾಡಿಗೆ ಮನೆ ಮಾಡಿಕೊಟ್ಟು, ಒಂದು ತಿಂಗಳಿಗೆ ಬೇಕಾದ ದಿನ ಬಳಕೆ ಆಹಾರ ಪದಾರ್ಥಗಳು, ತಟ್ಟೆ ಲೋಟ, ಪಾತ್ರೆ ಇತರೆ ವಸ್ತುಗಳು ಹಾಗೂ ಬಟ್ಟೆ, ಚಾಪೆ, ಹೊದಿಕೆ ಸೇರಿದಂತೆ ಅವಶ್ಯಕ ವಸ್ತುಗಳನ್ನು ಒದಗಿಸಿ ಕೊಡಲಾಗಿದೆ ಎಂದು ತಿಳಿಸಿದರು.
ನಿರಾಶ್ರಿತ ಕುಟುಂಬದವರು, ಸ್ವಂತ ಮನೆ ಇಲ್ಲದೆ ಬೇರೆಯವರ ಜಾಗದಲ್ಲಿ ಗುಡಿಸಲನ್ನು ನಿರ್ಮಿಸಿಕೊಂಡು ವಾಸವಾಗಿದ್ದರು. ಗ್ಯಾಸ್ ಸ್ಪೋಟದಿಂದಾಗಿ ವಾಸಕ್ಕೆ ಮನೆ ಇಲ್ಲದೇ ಬೀದಿಗೆ ಬಿದ್ದಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ನರಸಿಂಹಮೂರ್ತಿ, ತಾಪಂ ಇಒ ಶಿವಕುಮಾರ್ ಹಾಗೂ ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಅವರ ಗಮನಕ್ಕೆ ತಂದು ನಿರಾಶ್ರಿತ ಕುಟುಂಬಕ್ಕೆ ನಿವೇಶನ ನೀಡಿ ಮನೆ ನಿರ್ಮಿಸಿಕೊಳ್ಳಲು ಸಹಾಯ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.