ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಮುಂಬರುವ ದಿನದಲ್ಲಿ ನಿವೇಶನ, ಮನೆಗಳ ವಿತರಣೆ: ಶಾಸಕ ಎಂ.ಚಂದ್ರಪ್ಪ

KannadaprabhaNewsNetwork | Published : Jun 19, 2025 12:34 AM

ಮೂರ್ನಾಲ್ಕು ತಿಂಗಳಲ್ಲಿ ನಿವೇಶನಗಳನ್ನು ವಿಂಗಡಿಸಿ ಮುಂದಿನ ದಿನಗಳಲ್ಲಿ ಮನೆಗಳನ್ನು ಕಟ್ಟಿಸಿಕೊಡುತ್ತೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು

ಆಶ್ರಯ ಬಡಾವಣೆ, ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಭೂಮಿಪೂಜೆ । ₹1.45 ಕೋಟಿ ವೆಚ್ಚ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮೂರ್ನಾಲ್ಕು ತಿಂಗಳಲ್ಲಿ ನಿವೇಶನಗಳನ್ನು ವಿಂಗಡಿಸಿ ಮುಂದಿನ ದಿನಗಳಲ್ಲಿ ಮನೆಗಳನ್ನು ಕಟ್ಟಿಸಿಕೊಡುತ್ತೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.

ಭರಮಸಾಗರ ಹೋಬಳಿ ಬಹದ್ದೂರ್‌ಘಟ್ಟ ಹೊಸಹಟ್ಟಿ ಗ್ರಾಮದಲ್ಲಿ 1.45 ಕೋಟಿ ರು. ವೆಚ್ಚದಲ್ಲಿ ನೂತನ ಆಶ್ರಯ ಬಡಾವಣೆ ನಿರ್ಮಾಣ ಕಾಮಗಾರಿ ಮತ್ತು ಅಂಗನವಾಡಿ ಕೇಂದ್ರ ಕಟ್ಟಡ ಕಾಮಗಾರಿಗೆ ಬುಧವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ಹೊಸದಾಗಿ ಮತ ಕೇಳಲು ಬಂದಾಗ ಭರಮಸಾಗರದಲ್ಲಿ ಓಡಾಡಲು ರಸ್ತೆಗಳಿರಲಿಲ್ಲ. ಗೆದ್ದ ನಂತರ ಎಲ್ಲಾ ಹಳ್ಳಿಗಳಲ್ಲಿಯೂ ರಸ್ತೆಗಳನ್ನು ಮಾಡಿಸಿದ್ದರಿಂದ ರಸ್ತೆ ರಾಜ ಎಂಬ ಬಿರುದು ನೀಡಿ ಹೆಗಲ ಮೇಲೆ ಎತ್ತಿಕೊಂಡು ಕುಣಿಸಿ ಎರಡನೆ ಬಾರಿಗೂ ನನ್ನನ್ನು ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ. ಹಾಗಾಗಿ ನಿಮ್ಮಗಳ ಋಣ ನನ್ನ ಮೇಲಿರುವುದರಿಂದ ಎಲ್ಲಾ ಜಾತಿ ಜನಾಂಗದವರನ್ನು ಪ್ರೀತಿ, ಗೌರವದಿಂದ ಕಾಣುವುದರ ಜತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದೇನೆಂದು ತಿಳಿಸಿದರು.

ಜಗಳೂರು, ಮಾಯಕೊಂಡ, ದಾವಣಗೆರೆ ಶಾಸಕರು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಣವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ಉಚಿತ ಗ್ಯಾರಂಟಿಗಳಿಗೆ ಹಣವನ್ನು ಬಳಸುತ್ತಿದ್ದಾರೆಂದು ನೊಂದುಕೊಳ್ಳುತ್ತಿದ್ದಾರೆ. ಅದೇ ನಾನು ಕೋಟಿಗಟ್ಟಲೆ ಅನುದಾನ ತಂದು ನಿತ್ಯವೂ ಒಂದಲ್ಲ ಒಂದು ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದೇನೆ. ವಿಧಾನಸೌದ ಕಟ್ಟಲು ಖರ್ಚಾಗಿರುವುದು ಕೇವಲ ತೊಂಬತ್ತು ಲಕ್ಷ ರು. ನನ್ನ ಕ್ಷೇತ್ರದಲ್ಲಿ ನೂರಾರು ಕೋಟಿ ರು.ಗಳನ್ನು ಖರ್ಚು ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್‍ಗಳನ್ನು ಕೊರೆಸಿ ಪಂಪ್ ಮೋಟಾರ್‌ಗಳನ್ನು ಹಾಕಿಸಿಕೊಡುತ್ತೇನೆ. ಸುಂದರವಾದ ಬದುಕು ಕಟ್ಟಿಕೊಳ್ಳಿ ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.

ಭರಮಸಾಗರ ಬಿಜೆಪಿ. ಮಂಡಲ ಅಧ್ಯಕ್ಷ ಶೈಲೇಶ್, ಡಿ.ಎಸ್.ಪ್ರವೀಣ್‍ಕುಮಾರ್, ಆನಂದಪ್ಪ, ಹಿರೇಬೆನ್ನೂರು ರಾಜಣ್ಣ, ಮಂಜಣ್ಣ, ಶಿವಣ್ಣ, ಚಂದ್ರಶೇಖರ್, ಬಸಣ್ಣ ಹನುಮಂತಪ್ಪ, ಚನ್ನಬಸಪ್ಪ, ವಾಸುದೇವ್, ಕೆಆರ್‌ಡಿಐಎಲ್‌ ಎಂಜಿನಿಯರ್ ತೇಜಸ್, ಗ್ರಾಮದ ಮುಖಂಡರು ಹಾಜರಿದ್ದರು.