ಭಟ್ಕಳದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಕೊಡೆ ವಿತರಣೆ

KannadaprabhaNewsNetwork |  
Published : Dec 20, 2024, 12:46 AM IST
ಭಟ್ಕಳದ  ಬೀದಿಬದಿಯ ವ್ಯಾಪಾರಿಗಳಿಗೆ ಬಿಸಿಲು ಮತ್ತೆ ಮಳೆಯಲ್ಲಿ ಅನುಕೂಲವಾಗಲು ವಾಸುಕಿ ಸೌಹಾರ್ದ ಸಹಕಾರಿ ಸಂಘದಿಂದ ದೊಡ್ಡ ಕೊಡೆಗಳನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ಕಾರ್ಯಕ್ರಮದಲ್ಲಿ ಶ್ರೀ ವಾಸುಕಿ ಸೌಹಾರ್ದ ಸಹಕಾರಿಯ ನಿರ್ದೇಶಕರು ಬೀದಿ ವ್ಯಾಪಾರಿಗಳಿಗೆ ಕೊಡೆಗಳನ್ನು ಹಸ್ತಾಂತರಿಸಿದರು.

ಭಟ್ಕಳ: ತಾಲೂಕಿನ ಸರ್ಪನಕಟ್ಟೆಯಲ್ಲಿರುವ ಶ್ರೀ ವಾಸುಕಿ ಸೌಹಾರ್ದ ಸಹಕಾರಿ ಸಂಘದ ಮೂರನೇ ವರ್ಷದ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ತಾಲೂಕಿನ ಸರ್ಪನಕಟ್ಟೆ, ಚೌಧನಿ, ಹೂವಿನ ಪೇಟೆ, ಹಳೆ ಬಸ್ ನಿಲ್ದಾಣದಲ್ಲಿರುವ ಬೀದಿ ಬದಿಯ ವ್ಯಾಪಾರಿಗಳಿಗೆ ಅನುಕೂಲವಾಗಲು ಕೊಡೆಗಳನ್ನು(ಗಾರ್ಡನ್ ಅಂಬ್ರೆಲ್ಲಾ) ನೀಡಲಾಯಿತು.

ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೌಹಾರ್ದ ಸಹಕಾರಿಯ ನಿರ್ದೇಶಕರು ಬೀದಿ ವ್ಯಾಪಾರಿಗಳಿಗೆ ಕೊಡೆಗಳನ್ನು ಹಸ್ತಾಂತರಿಸಿದರು.

ಬೀದಿಬದಿಯ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಘದ ವೃತ್ತಿಪರ ನಿರ್ದೇಶಕ ಸುಭಾಷ ಎಂ. ಶೆಟ್ಟಿ, ಹಣಕಾಸಿನ ಸಂಸ್ಥೆಯಲ್ಲಿ ಕೇವಲ ಲಾಭವೇ ಮುಖ್ಯವಾಗಿರದೆ, ಪ್ರತಿವರ್ಷ ಸಂಸ್ಥಾಪಕರ ದಿನಾಚರಣೆಯಂದು ಸಾರ್ವಜನಿಕರಿಗೆ ಅಥವಾ ಸಂಘ- ಸಂಸ್ಥೆಗಳಿಗೆ ಅನುಕೂಲವಾಗುವ ವಸ್ತುಗಳನ್ನು ನೀಡಲು ತೀರ್ಮಾನಿಸಿದಂತೆ ಈ ಬಾರಿ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಗಾರ್ಡನ್ ಕೊಡೆಯನ್ನು ನೀಡಲಾಗಿದೆ ಎಂದರು.

ಸಂಘದ ನಿರ್ದೇಶಕರಾದ ಮಹಾದೇವ ನಾಯ್ಕ, ಗಣಪತಿ ಆಚಾರಿ, ವೃತ್ತಿಪರ ನಿರ್ದೇಶಕ ಸಂತೋಷ ಶೇಟ್, ಮುಖ್ಯ ಕಾರ್ಯ ನಿರ್ವಾಹಕ ಕಿಶನ್ ಶೆಟ್ಟಿ, ಸಂಘದ ಸಿಬ್ಬಂದಿ ಮತ್ತು ಬೀದಿಬದಿ ವ್ಯಾಪಾರಿಗಳು ಇದ್ದರು.

ಗೋಳಿಯಲ್ಲಿ ಮಿಂಚಿದ ಕರ್ಣ ನೃತ್ಯರೂಪಕ

ಶಿರಸಿ: ಇಲ್ಲಿನ ನಾಟ್ಯಾಂಜಲಿ ನೃತ್ಯಕಲಾ ಕೇಂದ್ರವು ತಾಲೂಕಿನ ಗೋಳಿಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನೃತ್ಯ ಸಂಜೆ ಕಾರ್ಯಕ್ರಮ ಜನಮನ ಸೆಳೆಯಿತು. ಸಂಕಷ್ಟಿಯ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಕಲಾವಿದರು, ವಿವಿಧ ನೃತ್ಯ ಬಂಧಗಳನ್ನು ಪ್ರಸ್ತುತ ಪಡಿಸಿದರು.ಗಂ ಗಣಪತಯೇ ದುರ್ಗಾಸ್ತುತಿ ನರಸಿಂಹ ಕೌತ್ವಂ ಮುಂತಾದ ನೃತ್ಯಗಳನ್ನು ಕಲಾವಿದರು ಅತ್ಯಂತ ಮನೋಹರವಾಗಿ ನರ್ತಿಸಿದರು. ಇದೇ ಸಂದರ್ಭದಲ್ಲಿ ನೃತ್ಯಗುರು, ವಿದುಷಿ ಡಾ. ಸಹನಾ ಭಟ್ಟ ಅವರು ಕರ್ಣ ನೃತ್ಯರೂಪಕವನ್ನು ಅದ್ಭುತವಾಗಿ ಪ್ರದರ್ಶಿಸಿದರು. ಕರ್ಣನ ಜನನ, ಬಾಲ್ಯ, ಶಸ್ತ್ರಾಭ್ಯಾಸ, ಪರಶುರಾಮ ಶಾಪ, ವಿವಾಹ, ಕುಂತಿಯೋಜನೆಯ ಸಂಭಾಷಣೆಯನ್ನು ಎಳೆ ಎಳೆಯಾಗಿ ಬಿಡಿಸುತ್ತ ತಮ್ಮ ಪ್ರೌಢ ಅಭಿನಯವನ್ನು ಮೆರೆದರು.

ಕಲಾವಿದರಾದ ವಿದುಷಿ ದಿವ್ಯಾ, ಪೂಜಾ ಹೆಗಡೆ, ರಾಜೇಶ್ವರಿ, ಕೃತಿ ತಮ್ಮ ಅಭಿನಯದ ಮೂಲಕ ಜನಮಾನಸವನ್ನು ಗೆದ್ದರು. ನೃತ್ಯ ರೂಪಕದ ಸಾಹಿತ್ಯವು ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ ಅವರದ್ದಾಗಿತ್ತು. ಸಂಗೀತ ನಿರ್ದೇಶನವನ್ನು ಬೆಂಗಳೂರಿನ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ ನೀಡಿದರು.ಕಾರ್ಯಕ್ರಮವನ್ನು ದೇವಸ್ಥಾನದ ಅಧ್ಯಕ್ಷ ಎಂ.ಎಲ್. ಹೆಗಡೆ, ಉದ್ಘಾಟಿಸಿ, ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಸೆಳೆತದ ನಡುವೆಯೂ ಸಹನಾ ಭಟ್ಟ ನೃತ್ಯ ಕ್ಷೇತ್ರದ ಮೂಲಕ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿರುವುದು ಪ್ರಶಂಸನಾರ್ಹ ಮತ್ತು ಇಂತಹ ನೃತ್ಯ ಸಂಸ್ಥೆಗಳಿಗೆ ಸಹಕರಿಸಬೇಕು. ಕಲಾವಿದರು ಸಿದ್ಧಿ ವಿನಾಯಕನಿಗೆ ನೀಡುತ್ತಿರುವ ನೃತ್ಯ ಸೇವೆ ಗಮನಾರ್ಹವಾದದ್ದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌