ಅಧಿಕಾರಿಗಳಿಂದ ಕಂದಾಯ ಕಡತ ಪರಿಶೀಲನೆ ಕನ್ನಡಪ್ರಭ ವಾರ್ತೆ, ಬೀರೂರು. ಸಾರ್ವಜನಿಕರ ಅಹವಾಲಿನ ಮೇರೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪಟ್ಟಣದ ಪುರಸಭೆ ಹಾಗೂ ನಾಡ ಕಚೇರಿಗೆ ಬುಧವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಕಂದಾಯ ಅಧಿಕಾರಿಗಳಿಂದ ಕಡತ ಪರಿಶೀಲನೆ ನಡೆಸಿದರು. ಉಪ ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳಿಗೆ ಗ್ರಾಮೀಣ ಪ್ರದೇಶಗಳ ಸ್ಮಶಾನ ಭೂಮಿ ಹಂಚಿಕೆ, ಪಾರಂ 50 ಮತ್ತು 53 ಬಗರು ಹುಕುಂ ಅರ್ಜಿಗಳ ಗಣಕೀಕರಣ, ಅಭಿಲೇಖಾಲಯ ಕಡತಗಳ ಕ್ಯಾಟ್ ಲಾಗಿಂಗ್ ಹಾಗೂ ಸಕಾಲ ಅರ್ಜಿಗಳ ವಿಲೇವಾರಿ ಬಗ್ಗೆ ಮಾಹಿತಿ ಪಡೆದರು. ನಂತರ ಕಂದಾಯ ನಿರೀಕ್ಷಕರ ಕಚೇರಿಗೆ ತೆರಳಿದಾಗ ಅಧಿಕಾರಿಗಳ ಜೊತೆ ಖಾಸಗಿ ವ್ಯಕ್ತಿಗಳನ್ನು ಕಂಡ ಅವರು, ಇವರು ಗಳನ್ನೇಕೆ ಕಚೇರಿ ಒಳಗೆ ಕೂರಿಸಿ ಕಾರ್ಯನಿರ್ವಹಿಸುತ್ತಿದ್ದೀರಿ, ನಿಮ್ಮ ಕೆಲಸಕ್ಕೆ ಇವರೇಕೆ ಎಂದು ಪ್ರಶ್ನಿಸಿ, ಇನ್ನು ಮುಂದೆ ಅಧಿಕಾರಿಗಳನ್ನು ಬಿಟ್ಟು ಬೆರ್ಯಾವ ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡದ್ದು ಕಂಡು ಬಂದಲ್ಲಿ ನಿಮ್ಮ ವಿರುದ್ಧ ಕ್ರಮ ಕೈ ಗೊಳ್ಳುವುದಾಗಿ ಎಚ್ಚರಿಸಿದರು. ನಂತರ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಕಂದಾಯ ರಶೀದಿ ವಹಿ ಪರಿಶೀಲಿಸಿ ಸರ್ಕಾರಕ್ಕೆ ಪ್ರತಿ ದಿನ ಕಡ್ಡಾಯವಾಗಿ ಪಾವತಿಸುವಂತೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಕಂದಾಯ ನಿರೀಕ್ಷಕರೇ ಲಾಗಿನ್ ಮತ್ತಿತರ ಜವಾಬ್ದಾರಿ ಹೊತ್ತವರು ಕಂಪ್ಯೂಟರ್ ಆಪರೇಟಿಂಗ್ ಕಲಿತು ನೀವೆ ಬಳಸಬೇಕೆಂದು ಅಧಿಖಾಧಿಕಾರಿಗೆ ಸೂಚಿಸಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಕಡೂರು ತಾಲೂಕಿನಲ್ಲಿ ಈ ಹಿಂದೆ ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರುಪಯೋಗ ನಡೆದ ಹಿನ್ನೆಲೆಯಲ್ಲಿ ಇಂದು ನಾಡಕಚೇರಿಗೆ ಭೇಟಿ ನೀಡಲಾಯಿತು. ರೈತರು ಮತ್ತಿತರ ಜನರು ನಾಡಕಚೇರಿ ವಿವಿಧ ಸರ್ಕಾರಿ ಸವಲತ್ತು ಗಳಿಗೆ ಅರ್ಜಿ ನೀಡಿದರೆ ಅಧಿಕಾರಿಗಳು ಸಕಾಲದಲ್ಲಿ ಮಾಹಿತಿ ನೀಡಿ , ಬಾಕಿ ಉಳಿಸದೆ ಪೂರ್ಣಗೊಳಿಸಿಕೊಡಿ ಎಂದರು. ನಾಡಕಚೇರಿ ಕಟ್ಟಡ ಶಿಥಿಲಗೊಂಡಿದ್ದು ಇದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸಾರ್ವಜನಿಕರು ಡಿಸಿಯವರಿಗೆ ಮನವಿ ಮಾಡಿದಾಗ ಉತ್ತರಿಸಿದ ಅವರು ತಾಲೂಕು ಪಂಚಾಯ್ತಿ ಅಧಿಕಾರಿಗಳಿಂದ ಈಗಿರುವ ಕಟ್ಟಡವನ್ನು ಕಂದಾಯ ಇಲಾಖೆಗೆ ಹಸ್ತಾರಿಸುವಂತೆ ಕೋರಿದ್ದು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಪುರಸಭೆ ಸಂಬಂಧ ಪಟ್ಟ ಘನತ್ಯಾಜ ಘಟಕ ನಿರ್ಮಾಣದ ಕಾಮಗಾರಿ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ರಿಂದ ಮಾಹಿತಿ ಪಡೆದ ಅವರು ಆದಷ್ಟು ಬೇಗ ಕಾಮಗಾರಿ ಮುಗಿಸಲು ಬೇಕಾದ ಕಡತಗಳನ್ನು ಸಂಬಂದಪಟ್ಟ ಇಲಾಖೆಗೆ ರವಾನಿಸಿ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಬಿ.ಎಂ.ಮಲ್ಲಿಕಾರ್ಜುನ್, ಕಂದಾಯ ನಿರೀಕ್ಷಕ ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ಗಳಾದ ನವೀನ್ ಕುಮಾರ್, ಪ್ರಿಯಾಂಕ ಸೇರಿದಂತೆ ಮತ್ತಿತರರು ಇದ್ದರು. ೨೫ ಬೀರೂರು ೬ ಬೀರೂರಿನ ನಾಡಕಚೇರಿಗೆ ಬುಧವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭೇಟಿ ನೀಡಿದರು.