ಕನ್ನಡಪ್ರಭ ವಾರ್ತೆ ಮೈಸೂರುಜಿಲ್ಲೆ ಸಂಘಟನ ಸೃಜನ ಅಭಿಯಾನ ಮೂಲಕ ಪಕ್ಷದ ತತ್ವಗಳಿಗೆ ಬದ್ಧತೆ ಹೊಂದಿರುವ, ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಹಾಗೂ ಪರಿಣಾಮಕಾರಿ ನಾಯಕತ್ವ ನೀಡಬಲ್ಲ ವ್ಯಕ್ತಿಗಳನ್ನು ಗುರುತಿಸಲಾಗುವುದು ಎಂದು ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಎಐಸಿಸಿ ವೀಕ್ಷಕ ರಾಜೇಶ್ ಠಾಕೂರ್ ತಿಳಿಸಿದರು.ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಮೈಸೂರು ಜಿಲ್ಲೆ ಸಂಘಟನ ಸೃಜನ ಅಭಿಯಾನದಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಮುಖ್ಯ ಉದ್ದೇಶ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಇನ್ನಷ್ಟು ಬಲಿಷ್ಠ, ಜವಾಬ್ದಾರಿಯುತ ಮತ್ತು ಜನಸ್ನೇಹಿಯಾಗಿಸುವುದಾಗಿದೆ ಎಂದರು.ಹೊಸ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕೇವಲ ಹುದ್ದೆ ಭರ್ತಿಗೆ ಸೀಮಿತವಾಗದೆ, ಪಕ್ಷವನ್ನು ಸಂಘಟಿಸುವ, ಕಾರ್ಯಕರ್ತರನ್ನು ಪ್ರೇರೇಪಿಸುವ ಮತ್ತು ಜನರೊಂದಿಗೆ ನೇರ ಸಂಪರ್ಕ ಬೆಳೆಸುವ ನಾಯಕತ್ವವನ್ನು ರೂಪಿಸುವ ಉದ್ದೇಶ ಹೊಂದಿದೆಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪುನರ್ ರಚನೆಯ ನಂತರ ಬ್ಲಾಕ್, ಮಂಡಲ ಹಾಗೂ ಗ್ರಾಮ ಮಟ್ಟದ ಕಾಂಗ್ರೆಸ್ ಸಮಿತಿಗಳನ್ನೂ ಪುನರುಜ್ಜೀವನಗೊಳಿಸಲಾಗುತ್ತದೆ. ಜೊತೆಗೆ ಜಿಲ್ಲಾ ರಾಜಕೀಯ ವ್ಯವಹಾರಗಳ ಸಮಿತಿಗಳನ್ನು ರಚಿಸಿ ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರೀಯ ವಿಷಯಗಳ ಕುರಿತು ಸಂಘಟಿತ ರಾಜಕೀಯ ಸಂವಾದಕ್ಕೆ ವೇದಿಕೆ ಕಲ್ಪಿಸಲಾಗುವುದು ಎಂದರು.ಈ ಅಭಿಯಾನವು ಕೇವಲ ಆಡಳಿತಾತ್ಮಕ ಕ್ರಮವಲ್ಲ, ಇದು ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ ಯಾತ್ರೆ ನೀಡಿದ ನ್ಯಾಯ, ಸಮಾನತೆ, ಸೌಹಾರ್ದತೆ ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಸಂಘಟನೆಯ ಮೂಲಕ ಬಲಪಡಿಸುವ ರಾಜಕೀಯ ಮತ್ತು ಸೈದ್ಧಾಂತಿಕ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದರು.ಸಂಘಟನ ಸೃಜನ ಅಭಿಯಾನದ ಮೂಲಕ ಪಕ್ಷದಲ್ಲಿ ಅಧಿಕಾರದ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾಗಿದ್ದು, ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಹಾಗೂ ಸಮರ್ಪಿತ ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಕತ್ವದ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುತ್ತದೆ ಎಂದರು.ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ನಾಗರಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪಕ್ಷದ ತತ್ವಗಳಿಗೆ ನಿಷ್ಠರಾಗಿರುವ, ಪ್ರಾಮಾಣಿಕತೆ, ವಿನಯ ಮತ್ತು ಜನಸೇವೆಯ ಮನೋಭಾವ ಹೊಂದಿರುವ ನಾಯಕತ್ವವನ್ನು ಗುರುತಿಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.ನಮ್ಮ ಗುರಿ ಕೇವಲ ಸಂಘಟನೆಯನ್ನು ಪುನರ್ ರಚಿಸುವುದಲ್ಲ, ಜನರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ, ಕಾರ್ಯಕರ್ತರನ್ನು ಸಬಲಗೊಳಿಸುವ ಮತ್ತು ಕಾಂಗ್ರೆಸ್ ಪಕ್ಷವನ್ನು ಪ್ರತಿಯೊಂದು ಹಳ್ಳಿ ಹಾಗೂ ಪ್ರತಿಯೊಂದು ಮನೆಯವರೆಗೆ ತಲುಪಿಸುವ ದೃಢವಾದ ಸಂಘಟನೆ ನಿರ್ಮಿಸುವುದಾಗಿದೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಕೆಪಿಸಿಸಿ ವೀಕ್ಷಕರಾದ ಮುದ್ದುಹನುಮಗೌಡ, ಎಸ್.ಸಿ. ಬಸವರಾಜ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮೊದಲಾದವರು ಇದ್ದರು.