ಕನ್ನಡಪ್ರಭ ವಾರ್ತೆ ಹಾಸನ
ಅವಧಿ ಮುಗಿದಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಇದೇ ನ.9 ರಂದು ಚುನಾವಣೆ ನಡೆಯುತ್ತಿದ್ದು, ಯಾವುದೇ ಆಕ್ರಮಗಳಿಗೆ ಅವಕಾಶ ಇಲ್ಲದಂತೆ ಕ್ರಮಗಳನ್ನು ವಹಿಸಲಾಗಿದೆ. ಮತದಾರರು ಮೊಬೈಲ್ ಹಾಗೂ ಪೆನ್ ಕೂಡ ತೆಗೆದುಕೊಂಡು ಹೋಗಲು ಅವಕಾಶವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ರಾಜೇಶ್ ಮತ್ತು ಸಹಾಯಕ ಚುನಾವಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.ಅವರು ಚುನಾವಣಾ ಕಾರ್ಯವಿಧಾನದ ಕುರಿತು ಗುರುವಾರ ಅಭ್ಯರ್ಥಿಗಳಿಗೆ ತಿಳಿವಳಿಕೆ ನೀಡುತ್ತಾ, ನವೆಂಬರ್ ೯ ರಂದು (ಭಾನುವಾರ) ಬೆಳಗ್ಗೆ ೮ ರಿಂದ ಮಧ್ಯಾಹ್ನ ೩ರವರೆಗೆ ಮತದಾನ ನಡೆಯಲಿದೆ ಎಂದು ಹೇಳಿದರು. ಬೆಳಗ್ಗೆ ೯ರಿಂದ ಮಧ್ಯಾಹ್ನ ೩ರವರೆಗೆ ನಿಗದಿಯಾಗಿದ್ದ ಮತದಾನ ವೇಳೆಯನ್ನು, ಅಭ್ಯರ್ಥಿಗಳ ಮನವಿ ಮೇರೆಗೆ ಒಂದು ಗಂಟೆ ಮುಂಚೆ ಆರಂಭಿಸಲು ತೀರ್ಮಾನಿಸಲಾಗಿದೆ. ಮತದಾರರು ಮತಗಟ್ಟೆ ಪ್ರವೇಶ ಮಾಡುವಾಗ ಮೊಬೈಲ್, ಪೆನ್, ಸ್ಮಾರ್ಟ್ ವಾಚ್ ಅಥವಾ ಕೂಲಿಂಗ್ ಕನ್ನಡಕ ತರಲು ಅವಕಾಶವಿರುವುದಿಲ್ಲ. ಮತದಾನ ಪ್ರಕ್ರಿಯೆ ವೇಳೆ ನೇರವಾಗಿ ಸೀಲ್ ಮಾಡಲಾದ ಮತಪೆಟ್ಟಿಗೆಯಲ್ಲಿ ಮತಪತ್ರ ಹಾಕಬೇಕು. ಮತ ಹಾಕುವ ವೇಳೆ ಜೇಬಿಗೆ ಕೈ ಹಾಕುವುದು ಅಥವಾ ಇನ್ನ್ಯಾವುದೆ ಅಕ್ರಮಕ್ಕೆ ಪ್ರಯತ್ನಿಸಿದರೆ ಮತದಾನ ಹಕ್ಕು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಮತದಾನ ನಡೆಯುವ ವೇಳೆ ನಿಯಮಗಳಿದ್ದು, ಚುನಾವಣೆ ನಡೆಯುವ ಸ್ಥಳದಿಂದ ನೂರು ಮೀಟರ್ ಅಂತರದಲ್ಲಿ ಅಭ್ಯರ್ಥಿಗಳು ಇತರರು ಇರಬೇಕು. ಅಲ್ಲಿಯೇ ನಿಂತು ಪ್ರಚಾರ ಮಾಡಬಹುದು. ಮತದಾನವು ಜಿಲ್ಲಾ ಪತ್ರಕರ್ತರ ಸಂಘದ ಮೊದಲ ಮಹಡಿಯಲ್ಲಿ ನಡೆಯಲಿದ್ದು, ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಒಟ್ಟು ೨೮೯ ಮತದಾರರು ಭಾಗವಹಿಸಲಿದ್ದಾರೆ. ಮತದಾನ ಮುಗಿದ ತಕ್ಷಣವೇ ಮತ ಎಣಿಕೆ ನಡೆಯಲಿದ್ದು, ಫಲಿತಾಂಶವನ್ನು ಅದೇ ದಿನ ಪ್ರಕಟಿಸಲಾಗುವುದು. ಚುನಾವಣೆ ನಡೆಯುವ ಸ್ಥಳದ ಒಳಗೂ ಹೊರಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಯಾವುದೇ ಅಹಿತಕರ ಘಟನೆ ಅಥವಾ ದುರುಪಯೋಗ ಸಂಭವಿಸದಂತೆ ಸಂಪೂರ್ಣ ನಿಗಾ ವಹಿಸಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದರು.