ಒಕ್ಕಲಿಗರು ಬೆಂಬಲಿಸಿದರೆ ಇನ್ನಷ್ಟು ಎತ್ತರಕ್ಕೆ ಬೆಳೆವೆ ಎಂದ ಡಿಕೆ ಶಿವಕುಮಾರ್

KannadaprabhaNewsNetwork |  
Published : Jan 20, 2024, 02:02 AM ISTUpdated : Jan 20, 2024, 12:29 PM IST
DK Shivakumar

ಸಾರಾಂಶ

ಒಕ್ಕಲಿಗ ಸಮಾಜದ ಸಹಕಾರದಿಂದ ನಾನು ಉಪಮುಖ್ಯಮಂತ್ರಿ ಹುದ್ದೆಯವರೆಗೂ ಬಂದಿದ್ದೇನೆ. ಇದೇ ರೀತಿ ಸಮಾಜದ ಬೆಂಬಲ, ಸಹಕಾರ ಮುಂದುವರೆದರೆ ಇನ್ನಷ್ಟು ಎತ್ತರಕ್ಕೆ ಹೋಗುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. 

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಕ್ಕಲಿಗ ಸಮಾಜದ ಸಹಕಾರದಿಂದ ನಾನು ಉಪಮುಖ್ಯಮಂತ್ರಿ ಹುದ್ದೆಯವರೆಗೂ ಬಂದಿದ್ದೇನೆ. ಇದೇ ರೀತಿ ಸಮಾಜದ ಬೆಂಬಲ, ಸಹಕಾರ ಮುಂದುವರೆದರೆ ಇನ್ನಷ್ಟು ಎತ್ತರಕ್ಕೆ ಹೋಗುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಫಸ್ಟ್ ಸರ್ಕಲ್ ಸೊಸೈಟಿ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಉದ್ಯಮಿ ಒಕ್ಕಲಿಗ-2024’ ಸಮಾವೇಶವನ್ನು ಶುಕ್ರವಾರ ಉದ್ಘಾಟಿಸಿದರು.

ಸಮಾಜದಿಂದ ಮುಂದೆ ಬಂದಿರುವ ನಾನು ಸಮಾಜಕ್ಕೆ ವಾಪಸ್ ಏನಾದರೂ ಕೊಡಬೇಕು. ಈ ಸಮಾವೇಶದ ಮೂಲಕ ಎಲ್ಲರ ಭೇಟಿ ಸಾಧ್ಯವಾಗಿದೆ. 

ಸಮುದಾಯದವರಿಗೆ ಎಲ್ಲಾ ರೀತಿಯ ಸಹಾಯ, ಸಹಕಾರ, ಮಾರ್ಗದರ್ಶನ ಮಾಡುತ್ತೇನೆ. ಸಮಾಜದಿಂದ ನನಗೆ ಇನ್ನಷ್ಟು ಬೆಂಬಲ, ಸಹಕಾರ ಸಿಗಬೇಕು. ಆಗ ನಾನು ಇನ್ನಷ್ಟು ಎತ್ತರಕ್ಕೆ ಹೋಗಲು ಸಾಧ್ಯವಿದೆ ಎಂದು ಹೇಳಿದರು.

ಒಕ್ಕಲಿಗ ಸಂಘದ ಹುದ್ದೆಗಾಗಿ ಮಾತ್ರ ಪೈಪೋಟಿಗೆ ಇಳಿಯುವ ಬದಲು, ಇನ್ನೂ ನಾಲ್ಕು ಮೆಡಿಕಲ್ ಕಾಲೇಜು ಸ್ಥಾಪಿಸುವ ಕಡೆ ಅಧಿಕಾರಸ್ಥರು ಯೋಚಿಸಬೇಕು. 

ಶಿಕ್ಷಣ, ಉದ್ಯಮ, ಕೈಗಾರಿಕೆ, ಸೇವಾ ವಲಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಒಕ್ಕಲಿಗರು ಬೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. 

ವ್ಯಾಪಾರ, ಉದ್ಯಮ ಮಾಡುವವರು ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಮತ್ತು ಎಸ್.ಎಂ. ಕೃಷ್ಣ ಅವರು ಬೆಂಗಳೂರಿನ ಬೆಳವಣಿಗೆಗೆ ಅಗಾಧ ಕೊಡುಗೆ ನೀಡಿದ್ದಾರೆ. ಇಲ್ಲದಿದ್ದರೆ ಬೇರೆ ನಗರ ರಾಜ್ಯದ ರಾಜಧಾನಿ ಆಗಿರುತ್ತಿತ್ತು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ