ಡಿಕೆಶಿ-ಮುನಿರತ್ನ ಭಾರಿ ಬಹಿರಂಗ ಜಟಾಪಟಿ

KannadaprabhaNewsNetwork |  
Published : Oct 13, 2025, 02:00 AM IST

ಸಾರಾಂಶ

ಬೆಂಗಳೂರಿನ ಮತ್ತಿಕೆರೆ ಜೆ.ಪಿ.ಪಾರ್ಕ್‌ನಲ್ಲಿ ಭಾನುವಾರ ಸಾರ್ವಜನಿಕ ಕುಂದು-ಕೊರತೆ ಆಲಿಸುವ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡೆಸಿದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮಕ್ಕೆ ತಮಗೆ ಆಹ್ವಾನಿಸದಿರುವುದನ್ನು ಖಂಡಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಡಿಕೆಶಿ ಎದುರು ನೇರಾನೇರ ಪ್ರತಿಭಟನೆಗೆ ಇಳಿದ ಪರಿಣಾಮ ಭಾರಿ ಹೈಡ್ರಾಮಾ ನಡೆದಿದೆ. ಈ ವೇಳೆ ಶಾಸಕ-ಡಿಸಿಎಂ ಬಹಿರಂಗ ವಾಗ್ವಾದ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನ ಮತ್ತಿಕೆರೆ ಜೆ.ಪಿ.ಪಾರ್ಕ್‌ನಲ್ಲಿ ಭಾನುವಾರ ಸಾರ್ವಜನಿಕ ಕುಂದು-ಕೊರತೆ ಆಲಿಸುವ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡೆಸಿದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮಕ್ಕೆ ತಮಗೆ ಆಹ್ವಾನಿಸದಿರುವುದನ್ನು ಖಂಡಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಡಿಕೆಶಿ ಎದುರು ನೇರಾನೇರ ಪ್ರತಿಭಟನೆಗೆ ಇಳಿದ ಪರಿಣಾಮ ಭಾರಿ ಹೈಡ್ರಾಮಾ ನಡೆದಿದೆ. ಈ ವೇಳೆ ಶಾಸಕ-ಡಿಸಿಎಂ ಬಹಿರಂಗ ವಾಗ್ವಾದ ನಡೆದಿದೆ.

ಆಗಷ್ಟೇ ಆರೆಸ್ಸೆಸ್ ಪಥಸಂಚಲನದಿಂದ ಮರಳಿ ಡಿಕೆಶಿ ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್‌ ಗಣವೇಷದಲ್ಲೇ ಆಗಮಿಸಿದ ಶಾಸಕ ಮುನಿರತ್ನ ಅವರು, ತಮಗೆ ಸಮಾರಂಭಕ್ಕೆ ಆಹ್ವಾನ ಇಲ್ಲದಿದ್ದರೂ, ‘ಸಾರ್ವಜನಿಕನಾಗಿ ಬಂದಿದ್ದೇನೆ’ ಎಂದು ಹೇಳಿ ಅಚ್ಚರಿ ಮೂಡಿಸಿದರು. ಈ ವೇಳೆ ನಾಟಕೀಯ ವಿದ್ಯಮಾನಗಳು ನಡೆದು ಸ್ಥಳದಲ್ಲಿ ಉದ್ವಿಗ್ನ ವಾತಾವರಣಕ್ಕೂ ನಾಂದಿ ಹಾಡಿತು.

ಆಗಿದ್ದೇನು?:

ಮೊದಲು ಡಿ.ಕೆ.ಶಿವಕುಮಾರ್‌ ಅವರು ರಾಜರಾಜೇಶ್ವರಿ ನಗರದ ಕಾಂಗ್ರೆಸ್‌ ನಾಯಕಿ, ಮುನಿರತ್ನ ಅವರ ಎದುರಾಳಿ ಕುಸುಮಾ ಜತೆಗೂಡಿ ಪಾರ್ಕ್‌ನ ವಿವಿಧ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಸಾರ್ವಜನಿಕರ ಮಧ್ಯೆ ಜನ ಸಾಮಾನ್ಯರಂತೆ ಗಣವೇಷ ಧರಿಸಿ ಅಚ್ಚರಿಯ ರೀತಿ ಶಾಸಕ ಮುನಿರತ್ನ ಬಂದು ನಿಂತಿದ್ದರು. ಅವರನ್ನು ಡಿಕೆಶಿ ನೋಡಿಯೂ ನೋಡದಂತೆ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದರು.

ಡಿಶಿ ಮುಂದೆ ಹೋದಂತೆ ಮುನಿರತ್ನರೂ ಶಾಸಕ ಹಿಂಬಾಲಿಸಿದರು. ಇನ್ನೇನು ಶಿವಕುಮಾರ್‌ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದು ತಿಳಿಯುತ್ತಿದಂತೆ ಮುನಿರತ್ನ, ಸಾರ್ವಜನಿಕರ ನಡುವೆ ಹೋಗಿ ಕೂತರು. ಇದನ್ನು ಗಮನಿಸಿದ ಡಿಕೆಶಿ ಮೈಕ್‌ನಲ್ಲಿ, ‘ಏಯ್‌ ಎಂಎಲ್‌ಎ ಅವ್ರೇ ಬನ್ರೀ... ಈ ಕಡೆ, ಏಯ್‌ ಕರಿ ಟೋಪಿ ಎಂಎಲ್‌ಎ ಈ ಕಡೆ ಬಾರಪ್ಪ...’ ಎಂದು ವೇದಿಕೆಗೆ ಆಹ್ವಾನಿಸಿದರು. ಆಗ ಧುತ್ತನೇ ವೇದಿಕೆ ಮೇಲೆ ಬಂದ ಮುನಿರತ್ನ ಮೈಕ್‌ ನೀಡುವಂತೆ ಡಿಕೆಶಿ ಅವರನ್ನು ಕೇಳಿಕೊಂಡರು. ‘ಆ ಮೇಲೆ, ಆ ಮೇಲೆ’ ಎನ್ನುತ್ತಾ ಮೈಕ್‌ ನೀಡಲು ಡಿಸಿಎಂ ನಿರಾಕರಿಸಿದರು. ಒಂದು ನಿಮಿಷ ಅಷ್ಟೇ ಎಂದು ಮೈಕ್‌ ಪಡೆದ ಮುನಿರತ್ನ, ‘ಈ ಸಭೆಗೆ ನನಗೆ ಆಹ್ವಾನವಿಲ್ಲ. ಆದರೂ ಬೆಂಗಳೂರಿನ ನಾಗರಿಕನಾಗಿ ಆಗಮಿಸಿದ್ದು, ಸಾರ್ವಜನಿಕರೊಂದಿಗೆ ಕೂರುವೆ’ ಎಂದು ಹೇಳಿ ವಾಪಸ್‌ ಜನರ ಮಧ್ಯೆ ಬಂದು ಕೂತರು.

ತದ ನಂತರ ಕಾರ್ಯಕ್ರಮದ ಸ್ವಾಗತಕಾರರು, ಡಿಕೆಶಿ ಜತೆಗೆ ಶಾಸಕರನ್ನೂ ಸ್ವಾಗತಿಸಿದರು. ಆಗ ಮತ್ತೆ ವೇದಿಕೆಗೆ ಬಂದ ಮುನಿರತ್ನ ಅಧಿಕಾರಿಯಿಂದ ಮೈಕ್‌ ಕಿತ್ತುಕೊಂಡು, ‘ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಸಂಸದರ ಹಾಗೂ ಶಾಸಕರ ಫೋಟೋ ಹಾಕಿಲ್ಲ. ಅಧಿಕೃತವಾಗಿ ಶಾಸಕರಿಗೆ ಜಿಬಿಎ ಮುಖ್ಯ ಆಯುಕ್ತರು ಆಹ್ವಾನಿಸಿಲ್ಲ. ಒಬ್ಬ ಶಾಸಕನಿಗೆ ನೀಡಬೇಕಾದ ಗೌರವ ಕೊಟ್ಟಿಲ್ಲ’ ಎಂದು ಹರಿಹಾಯ್ದರು.

ಧಿಕ್ಕಾರದ ಮಳೆ:

‘ಇದು ಸಾರ್ವಜನಿಕರ ಕುಂದು-ಕೊರತೆ ಸಭೆಯೆ ಎಂಬ ಅನುಮಾನ ಮೂಡುತ್ತಿದೆ. ಇದು ಕಾಂಗ್ರೆಸ್‌ ಕಾರ್ಯಕ್ರಮ’ ಎಂದು ಹೇಳುತ್ತಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಮೈಕ್‌ ಕಿತ್ತುಕೊಳ್ಳುವಂತೆ ಆಗ್ರಹಿಸಿದರು. ವೇದಿಕೆಯಿಂದ ಕೆಳಗಿಳಿಯೋ ಮೊದಲು, ನಿನಗೆ ನಾಚಿಕೆ ಆಗಬೇಕು ಎಂದು ಶಾಸಕರೊಂದಿಗೆ ನೇರವಾಗಿ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ಈ ವೇಳೆ ‘420 ಮುನಿರತ್ನನಿಗೆ ಧಿಕ್ಕಾರ’ ಎಂಬ ಘೋಷಣೆ ಕೂಗಿದರು. ಆಗ ವೇದಿಕೆ ಮೇಲೆ ಕೆಲಕಾಲ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಧ್ಯೆ ಹೈಡ್ರಾಮವೇ ನಡೆಯಿತು. ಕೊನೆಗೆ ಪೊಲೀಸರು, ಮುನಿರತ್ನ ಅವರನ್ನು ಜೆ.ಪಿ.ಪಾರ್ಕ್‌ನಿಂದ ಹೊರ ಕರೆದುಕೊಂಡು ಹೋದರು. ಆಗ ಮುನಿರತ್ನ ಗಾಂಧೀಜಿ ಫೋಟೋ ಇಟ್ಟುಕೊಂಡು ಡಿಕೆಶಿಯಿಂದ ನನಗ ಹಾಗೂ ಆರೆಸ್ಸೆಸ್‌ಗೆ ಅವಮಾನವಾಗಿದೆ ಎಂದು ಪ್ರತಿಭಟನೆ ನಡೆಸಿದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ