ಸಂಡೂರು: ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡು, ನುಡಿ, ಸಂಸ್ಕೃತಿಯ ಸರಂಕ್ಷಣೆ ಹಾಗೂ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಅದಕ್ಕೆ ತಮ್ಮ ಹಿರಿಯರ ಹೆಸರಿನಲ್ಲಿ ದತ್ತಿಯನ್ನು ನೀಡುವುದರಿಂದ ತಮ್ಮ ಹಿರಿಯರನ್ನು ಸ್ಮರಿಸುವುದರ ಜತೆಗೆ ಕನ್ನಡವನ್ನು ಬೆಳೆಸಿದಂತಾಗುತ್ತದೆ ಎಂದು ಯಶವಂತನಗರದ ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ದತ್ತಿದಾನಿಗಳಾದ ಚಿತ್ರಿಕಿ ಮೃತ್ಯುಂಜಯಪ್ಪ ತಿಳಿಸಿದರು. ತಾಲೂಕಿನ ಯಶವಂತನಗರ ಗ್ರಾಮದ ಶ್ರೀಗುರು ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕರಿಬಸಮ್ಮ ಮತ್ತು ಚಿತ್ರಿಕಿ ತೋಟಪ್ಪ ದತ್ತಿ ಹಾಗೂ ಮರಿಬಸಮ್ಮ ಚಿತ್ರಿಕಿ ದತ್ತಿ ಉಪನ್ಯಾಸ ಹಾಗೂ ಚಿತ್ರಿಕಿ ತಿಪ್ಪಣ್ಣನವರ ೧೦ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವು ಯಾವುದೇ ಕೆಲಸ ಮಾಡಿದರೂ ತಂದೆ- ತಾಯಿಗಳಿಗೆ ಹೆಸರು ತರುವಂತಹ ಸಮಾಜಮುಖಿಯಾದ ಸೇವೆ ಮಾಡಬೇಕು ಎಂದರು. ಉಪನ್ಯಾಸಕ ಬಸವರಾಜ ಬಣಕಾರ ಅವರು, ರೇವಣಸಿದ್ದರ ಕೃಪೆಯಿಂದ ಶ್ರೀಶೈಲ ಮಲ್ಲಿಕಾರ್ಜುನನ ಒಲುಮೆ ಪಡೆದು ಸೊನ್ನಲಿಗೆ ಎನ್ನುವ ಸಣ್ಣ ಗ್ರಾಮವನ್ನು ಸುಂದರ ನಗರವನ್ನಾಗಿ ನಿರ್ಮಿಸಿದ ಕೀರ್ತಿ ಸೊನ್ನಲಿಗೆ ಸಿದ್ದರಾಮೇಶ್ವರರಿಗೆ ಸಲ್ಲುತ್ತದೆ. ಅವರು ಪ್ರಾರಂಭದಲ್ಲಿ ಸಾಮಾಜಿಕ ಸೇವೆಗಳಾದ ಕೆರೆಗಳನ್ನು ಕಟ್ಟಿಸುವುದು, ಬಾವಿಗಳ ತೋಡಿಸುವುದು, ದೇವಸ್ಥಾನಗಳ ನಿರ್ಮಾಣ, ಸಾಮೂಹಿಕ ವಿವಾಹ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲಮ ಪ್ರಭುಗಳು ಅತನ ಶಕ್ತಿಯನ್ನು ಅರಿತು ಆತನನ್ನು ಕಲ್ಯಾಣಕ್ಕೆ ಕರೆತಂದು ಆಧ್ಯಾತ್ಮದ ಚಿಂತನೆಗೆ ಹಚ್ಚಿದರು ಎಂದರು. ಸಾನ್ನಿಧ್ಯವನ್ನು ವಹಿಸಿದ್ದ ಯಶವಂತನಗರದ ಗಂಗಾಧರ ಸ್ವಾಮೀಜಿ ಹಾಗೂ ಸಂಡೂರಿನ ಪ್ರಭುಸ್ವಾಮೀಜಿ ಆಶೀರ್ವಚನ ನೀಡಿದರು. ಟಿ. ವೆಂಕಟೇಶ್ ಹಾಗೂ ಎಚ್. ಕುಮಾರಸ್ವಾಮಿ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕುರುಗೋಡಪ್ಪ ಸ್ವಾಗತಿಸಿದರು. ಜಿ. ವೀರೇಶ್ ನಿರೂಪಿಸಿದರು. ಶಿಕ್ಷಕ ಕೊಟ್ರೇಶ್ ವಂದಿಸಿದರು. ಮುಖಂಡರಾದ ಚಿತ್ರಿಕಿ ಸುಮಂಗಳಮ್ಮ, ಸಿ.ಕೆ. ವಿಶ್ವನಾಥ, ಚಿತ್ರಿಕಿ ಮಹಾಬಲೇಶ್ವರ್, ಎ.ಎಂ. ಶಿವಮೂರ್ತಿಸ್ವಾಮಿ, ಅಕ್ಕನ ಬಳಗದ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ದ್ಘಾಟಿಸಿದರು.