ಕೊಪ್ಪಳ: ಈ ಗಾಳಿಯನ್ನು ನೀಡುವ ನಿಸರ್ಗವೂ ಏನನ್ನು ಕೇಳುವುದಿಲ್ಲ. ಬೆಳಕು ನೀಡುವ ಸೂರ್ಯನೂ ತನ್ನ ಕಾಯಕವನ್ನು ನಿಲ್ಲಿಸುವುದಿಲ್ಲ. ಹಾಗೆಯೇ ಈ ದೇಹದಲ್ಲಿ ಉಸಿರು ಇರುವವರೆಗೂ ಒಳ್ಳೆಯ ಕಾರ್ಯ ಮಾಡಬೇಕು. ಸಾವು ಸನಿಹದಲ್ಲಿಯೇ ಇದ್ದರೂ ಒಳ್ಳೆಯ ಕಾರ್ಯಕ್ಕಾಗಿ ಮನ ಮಿಡಿಯಬೇಕು ಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಹಾವೀರ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿರುವ ಕಲಬುರಗಿ ವಿಭಾಗ ಮಟ್ಟದ ಯುವ ರೆಡ್ಕ್ರಾಸ್ ಕಾರ್ಯಾಗಾರದಲ್ಲಿ ಮಾತನಾಡಿದರು.ದೇಹಕ್ಕೆ ಉಸಿರು ಇರುವವರೆಗೂ ಮಾತ್ರ ಶಕ್ತಿ ಮತ್ತು ಬೆಲೆ. ಅದು ಚೆಲ್ಲಿದ ಮೇಲೆ ಅದಕ್ಕೆ ಬೆಲೆಯೂ ಇರುವುದಿಲ್ಲ ಮತ್ತು ಶಕ್ತಿಯೂ ಇರಲ್ಲ. ಹೀಗಾಗಿ, ದೇಹದ ಶಕ್ತಿ ಅದಕ್ಕೆ ಜೀವ ಇರುವ ವರೆಗೂ ಇರುತ್ತದೆ. ಆದರೆ, ಈ ಜೀವ ಅಥವಾ ಮನಸ್ಸು ಯಾವುದೂ ಕಣ್ಣಿಗೆ ಕಾಣುವುದಿಲ್ಲ. ಮನಸ್ಸಿಗೆ ಆಕಾರ ಇಲ್ಲ, ತೂಕ ಇಲ್ಲ. ಆದರೆ, ಆ ಶಕ್ತಿಯನ್ನೊಳಗೊಂಡ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳಬೇಕು. ಮನಸ್ಸು ನಿಗ್ರಹಿಸದ ಹೊರತು ಬದುಕಿನಲ್ಲಿ ಜಯ ಸಾಧಿಸಲು ಸಾಧ್ಯವಿಲ್ಲ. ಮನಸ್ಸು ಗೆದ್ದ ಬುದ್ಧ ಲೋಕ ಗೆದ್ದ, ಮನಸ್ಸು ಗೆಲ್ಲದಿದ್ದರೆ ಬಿದ್ದಂತೆ ಎಂದರು.
ಇದಕ್ಕಾಗಿ ಸಾಧನೆ ಬೇಕಾಗುತ್ತದೆ. ಆದ್ದರಿಂದ ನಾವು ನಮ್ಮ ಮನಸ್ಸನ್ನು ನಿಗ್ರಹಿಸಿಕೊಳ್ಳಬೇಕು. ಇದಕ್ಕಾಗಿ ನಾವು ಒಳ್ಳೆಯ ಕಾರ್ಯ ಮಾಡಬೇಕು. ಚಹಾದ ಪಾತ್ರೆಯ ಬದಲು ಸಾಂಬರ್ ಪಾತ್ರೆಯಲ್ಲಿ ಚಹಾ ಮಾಡಿದರೇ ಚಹಾ ಖಾರವಾಗುತ್ತದೆ. ಹಾಗೆಯೇ ಕೆಟ್ಟ ಯೋಚನೆ ಮಾಡುವ ಮನಸ್ಸು ಸಹ ಖಾರದ ಅನುಭವ ನೀಡುತ್ತದೆ. ಆದರೆ, ಅದೇ ಸಾಂಬರ್ ಪಾತ್ರೆಯಲ್ಲಿ ಪದೇ ಪದೆ ಚಹಾ ಮಾಡಿದರೆ ಖಾರ ಇಲ್ಲವಾಗಿ, ಪರಿಪೂರ್ಣ ಸಿಹಿಯ ಅನುಭವ ನೀಡುತ್ತದೆ. ಅದರಂತೆ ಸತತವಾಗಿ ಒಳ್ಳೆಯ ಕಾರ್ಯ ಮಾಡುವ ಮೂಲಕ ಖಾರದ ಅನುಭವ ಮಾಯವಾಗುತ್ತದೆ ಎಂದರು.ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕೊಪ್ಪಳದಲ್ಲಿ ಅತ್ಯುತ್ತಮ ಕಾರ್ಯ ಮಾಡತ್ತಿದೆ. ಅದರ ಉತ್ತಮ ಕಾರ್ಯದಿಂದಾಗಿ ಅದೆಷ್ಟೋ ಜನರ ತೊಂದರೆ ನೀಗಿಸಲು ಸಹಕಾರಿಯಾಗಿದೆ. ಅದರಲ್ಲೂ ರಕ್ತಭಂಡಾರದಿಂದ ಸಾಕಷ್ಟು ಅನುಕೂಲವಾಗಿದೆ ಎಂದರು.ಇಂಥ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಮನಸ್ಸಿನ ಪರಿವರ್ತನೆ ಮಾಡುವ ಕಾರ್ಯ ಮಾಡುತ್ತಿದೆ. ತರಬೇತಿ ಪಡೆದ ನಾಯಿ ಯಾರೋ ಹಾಕಿದ ಬಿಸ್ಕಿಟ್ ಸಹ ತಿನ್ನುವುದಿಲ್ಲ. ಆದರೆ, ತರಬೇತಿ ಪಡೆಯದ ನಾಯಿ ಯಾರು ಏನೇ ಕೊಟ್ಟರು ಸ್ವೀಕಾರ ಮಾಡತ್ತದೆ. ಅದಕ್ಕಾಗಿ ತರಬೇತಿ ಪಡೆದ ನಾಯಿಯಂತೆಯಾಗಬೇಕು. ಅಂಥ ತರಬೇತಿಯನ್ನು ಇಂಥ ಕಾರ್ಯಾಗಾರಗಳನ್ನು ನೀಡಿ, ಕೆಟ್ಟದ್ದರಿಂದ ದೂರ ಇರುವಂತೆ ಮಾಡಿ, ಸತ್ಕಾರ್ಯಕ್ಕೆ ಪ್ರೇರೇಪಿಸಿದಂತಾಗುತ್ತದೆ ಎಂದು ತಿಳಿಸಿದರು.
ಇದೇವೇಳೆ, ವಿಪತ್ತು ನಿರ್ವಹಣೆಯ ಕುರಿತು ಕಾರ್ಯಾಗದಲ್ಲಿ ಅಗ್ನಿಶಾಮಕ ದಳದವರು ಪ್ರದರ್ಶನ ನೀಡಿದರು.ಬೆಂಕಿ ನಂದಿಸುವುದು ಬಗೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಅಗ್ನಿಶಾಮಕ ದಳದ ಜಿಲ್ಲಾಮಟ್ಟದ ಅಧಿಕಾರಿ ರಾಮಪ್ಪ ಅವರು ಮಕ್ಕಳಿಗೆ ಉಪನ್ಯಾಸ ನೀಡಿದರು.
ಸಮಾರೋಪ ಸಮಾರಂಭಕಲಬುರಗಿ ವಿಭಾಗ ಮಟ್ಟದ ಯುವ ರೆಡ್ ಕ್ರಾಸ್ ಕಾರ್ಯಾಗಾರದ ಸಮಾರೋಪ ಸಮಾರಂಭ ಸೆ. 1ರಂದು ಮಧ್ಯಾಹ್ನ 1.30ಕ್ಕೆ ಕೊಪ್ಪಳ ನಗರದ ಮಹಾವೀರ ಕಲ್ಯಾಣಮಂಟಪದಲ್ಲಿ ನಡೆಯಲಿದೆ. ಸಂಸದ ರಾಜಶೇಖರ ಹಿಟ್ನಾಳ ಸಮಾರೋಪ ಸಮಾರಂಭದ ಉದ್ಘಾಟಿಸುವರು. ಸಂಸದ ಸಂಗಣ್ಣ ಕರಡಿ ಸಮರೋಪ ಭಾಷಣ ಮಾಡಲಿದ್ದಾರೆ. ರೆಡ್ ಕ್ರಾಸ್ ಕೊಪ್ಪಳ ಜಿಲ್ಲಾ ಸಭಾಪತಿ ಸೋಮರಡ್ಡಿ ಅಳವಂಡಿ ಅಧ್ಯಕ್ಷತೆ ವಹಿಸುವರು. ಭಾರೆಕ್ರಾ ರಾಜ್ಯ ಶಾಖೆ ಉಪಸಭಾಪತಿ ಆನಂದ್ ಎಸ್. ಜಿಗಜಿನ್ನಿ, ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಯತೀಶ್ ಬೈಕಂಪಾಡಿ, ಡಾ. ಬಸವರಾಜ ಕ್ಯಾವಟರ್, ಡಾ. ಕೃಷ್ಣ ವಿ. ಓಂಕಾರ, ಡಾ. ಪರ್ವತಗೌಡ ಹಿರೇಗೌಡ್ರ, ವೆಂಕಟೇಶ ಉಪಸ್ಥಿತರಿರುವರು.