- ಚಾಲಕರಿಗೆ ಮನಃಪರಿವರ್ತನೆಗಾಗಿ ಕೌನ್ಸಲಿಂಗ್ ಶಿಬಿರ
ಕನ್ನಡಪ್ರಭ ವಾರ್ತೆ ದಾವಣಗೆರೆ ಮನುಷ್ಯರು ತಪ್ಪು ಮಾಡುವುದು ಸಹಜ. ಆ ತಪ್ಪನ್ನು ತಿದ್ದಿಕೊಳ್ಳಬೇಕು. ಮನಸ್ಸು ಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ಸಜ್ಜನರಾಗಿ ಬದುಕಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ನಗರದ ಡಿಎಆರ್ ಘಟಕದ ಆವರಣದಲ್ಲಿನ ಪೊಲೀಸ್ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಚಾಲಕರ ಮೇಲೆ ಪ್ರಕರಣಗಳಲ್ಲಿನ ಚಾಲಕರಿಗೆ ಮನಃಪರಿವರ್ತನೆಗಾಗಿ ಆಯೋಜಿಸಿದ್ದ ಕೌನ್ಸಲಿಂಗ್ ಶಿಬಿರದಲ್ಲಿ ಅವರು ಮಾತನಾಡಿದರು.ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಓಡಿಸುವುದು, ಮೊಬೈಲ್ನಲ್ಲಿ ಮಾತನಾಡುತ್ತ ವಾಹನ ಚಲಾಯಿಸುವುದು ತಪ್ಪು. ಅದೇ ರೀತಿ ಮದ್ಯ ಸೇವಿಸಿ ವಾಹನಗಳನ್ನು ಚಲಾಯಿಸುವುದೂ ಮಹಾತಪ್ಪು. ಮದ್ಯಪಾನ ಮಾಡಿ ಗಾಡಿ ಚಲಾಯಿಸಿದರೇ ನ್ಯಾಯಾಲಯದಲ್ಲಿ ₹10,000 ದಂಡ ವಿಧಿಸಿ, ವಾಹನ ಚಾಲನೆ ಪರವಾನಗಿ ಅಮಾನತು ಮಾಡಿಕೊಳ್ಳಲಾಗುವುದು. 2ನೇ ಬಾರಿ ಅಪರಾಧಕ್ಕೆ 6 ತಿಂಗಳು ಜೈಲುಶಿಕ್ಷೆ ಜೊತೆಗೆ ಚಾಲನೆ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಚಾಲಕರಿಗೆ ಸೂಚನೆ ನೀಡಿದರು.
ತಪೋವನ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯಸ್ಥೆ ಡಾ.ಶ್ವೇತಾ ಶಿವಾನಂದ ಮಾತನಾಡಿ, ಮದ್ಯಪಾನಿಗಳ ಪರಿವರ್ತನೆಗಾಗಿ ಈ ಶಿಬಿರ ಆಯೋಜಿಸಲಾಗಿದೆ. ನೀವು ಈಗಾಗಲೇ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿ ಕೋರ್ಟ್ಗೆ ಹೋಗಿ ದಂಡ ಕಟ್ಟಿದ್ದೀರಿ. ಈ ತಪ್ಪನ್ನು ಮತ್ತೆ ಮಾಡಬಾರದು. ಈ ಹಿನ್ನೆಲೆ ಪೊಲಿಸ್ ಇಲಾಖೆಯ ನಗರ ಉಪ ವಿಭಾಗದ ಎರಡು ಸಂಚಾರ ಪೊಲೀಸ್ ಠಾಣೆಗಳಿಂದ ಚಾಲಕರಿಗೆ ಮನಃ ಪರಿವರ್ತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ಸಂಚಾರ ವೃತ್ತದ ಸಿಪಿಐ ನಲವಾಗಲು ಮಂಜುನಾಥ, ನಗರ ಡಿವೈಎಸ್ಪಿ ಬಿ. ಶರಣಬಸವೇಶ್ವರ ಭೀಮಾರಾವ್, ಎಎಸ್ಪಿ ಜಿ.ಮಂಜುನಾಥ, ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಮಹಾದೇವಪ್ಪ ಎಸ್. ಭತ್ತೆ, ನಿರ್ಮಲ, ಶೈಲಜಾ, ಜಯಶೀಲ, ಸಂಚಾರ ಠಾಣೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. ಡಿಎಆರ್ ಡಿವೈಎಸ್ಪಿ ಪಿ.ಬಿ.ಪ್ರಕಾಶ್ ನಿರೂಪಣೆ ಮಾಡಿದರು.- - - (** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್ಗೆ ಬಳಸಿ)
-9ಕೆಡಿವಿಜಿ37:ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ನಡೆದ ಮದ್ಯವ್ಯಸನಿ ಚಾಲಕರ ಮನಃಪರಿವರ್ತನೆ ಕಾರ್ಯಕ್ರಮವನ್ನು ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಉದ್ಘಾಟಿಸಿದರು. ತಪೋವನ ಆಯುರ್ವೇದಿಕ್ ಮೆಡಿಕಲ್ ಕಾಲೇಜು- ಆಸ್ಪತ್ರೆ ಮುಖ್ಯಸ್ಥೆ ಡಾ.ಶ್ವೇತಾ ಶಿವಾನಂದ, ಅಧಿಕಾರಿಗಳಾದ ನಲವಾಗಲು ಮಂಜುನಾಥ, ಬಿ.ಶರಣಬಸವೇಶ್ವರ ಭೀಮಾರಾವ್, ಜಿ.ಮಂಜುನಾಥ ಇತರರು ಇದ್ದರು.