ದಕ್ಷ, ಪ್ರಾಮಾಣಿಕ ಆಡಳಿತಗಾರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ಮಾಡುತ್ತಿರುವುದು ಸರಿಯೇ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಜಶೇಖರಜತ್ತಿ ಪ್ರಶ್ನಿಸಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಗರಣಗಳ ಸರಮಾಲೆಯನ್ನೇ ಹೊಂದಿರುವ ಬಿಜೆಪಿ, ಜೆಡಿಎಸ್ ನಾಯಕರು ಮೈತ್ರಿ ಹೆಸರಿನಲ್ಲಿ ಕಾನೂನು ರೀತಿಯ ಮುಡಾದಿಂದ ಆಗಿರುವ ಸೈಟ್ ಹಂಚಿಕೆ ಪ್ರಕರಣ ಇಟ್ಟುಕೊಂಡು ದಕ್ಷ, ಪ್ರಾಮಾಣಿಕ ಆಡಳಿತಗಾರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ಮಾಡುತ್ತಿರುವುದು ಸರಿಯೇ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಜಶೇಖರಜತ್ತಿ ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗಲೇ ೫೦:೫೦ ಅನುಪಾತದಲ್ಲಿ ಮೈಸೂರು ಮುಡಾದಿಂದ ಈ ಸೈಟ್ ಹಂಚಿಕೆಯಾಗಿದ್ದು ಇದು ಅಕ್ರಮವೋ, ಸಕ್ರಮವೋ ಎಂಬುದು ಬೊಮ್ಮಾಯಿ ಅವರಿಗೆ ಗೊತ್ತಿರಲಿಲ್ಲವೇ ಎಂದರು. ಪಾದಯಾತ್ರೆ ಮಾಡುತ್ತಿರುವ ಮೈತ್ರಿ ನಾಯಕರು ಮತ್ತು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ನಡೆದಿದ್ದು ಅವುಗಳ ಎಲ್ಲಾ ವಿವರಗಳನ್ನು ಸಿಎಂ ಸಿದ್ದರಾಮಯ್ಯನವರು ಶುಕ್ರವಾರ ಮೈಸೂರಿನಲ್ಲಿ ನಡೆಯುವ ಜನಾಂದೋಲನದ ಬೃಹತ್ ಸಮಾವೇಶದಲ್ಲಿ ಬಹಿರಂಗಪಡಿಸಲಿದ್ದಾರೆ ಎಂದರು.
ಹಿಂದಿನ ಸರ್ಕಾರದಲ್ಲಿ ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ, ಕೈಗಾರಿಕಾ ವಸಾಹತಿನಲ್ಲಿ ೨ಸಾವಿರ ಕೋಟಿಗೂ ಹೆಚ್ಚು ಅವ್ಯವಹಾರ, ಶಾಲಾ ಮಕ್ಕಳಿಗೂ ಹಂಚುವ ಮೊಟ್ಟೆಯಲ್ಲಿ ಭ್ರಷ್ಟಾಚಾರ, ವಸತಿ ಶಾಲೆಗಳಿಗೆ ಹಂಚುವ ಹಾಸಿಗೆಯಲ್ಲೂ ಭ್ರಷ್ಟಾಚಾರ, ದೇವೇಗೌಡರ ಕುಟುಂಬ ಅತಿಕ್ರಮವಾಗಿ ಮಾಡಿರುವ ಜಮೀನು, ಕೊರೋನಾ ಸಂದರ್ಭದಲ್ಲಿ ಔಷಧಿ, ಆಸ್ಪತ್ರೆಯಲ್ಲಿ ನಡೆದಿರುವ ಕೋಟ್ಯಂತರ ರು.ಗಳ ಭ್ರಷ್ಟಾಚಾರದ ಹಗರಣಗಳನ್ನು ಹೊತ್ತುಕೊಂಡು ಪಾದಯಾತ್ರೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.ಸಿದ್ದರಾಮಯ್ಯನವರನ್ನು ಕೆಳಗಿಸಬೇಕೆಂದು ಷಡ್ಯಂತ್ರ ರೂಪಿಸಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಯಾವ ರೀತಿಯಲ್ಲೂ ಕೈಗೂಡುವುದಿಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯೆ ಚಿನ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಶ್ರೀ, ಭಾಗ್ಯ, ಸುವರ್ಣಮ್ಮ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.