ಕನ್ನಡಪ್ರಭ ವಾರ್ತೆ ಉಡುಪಿರಾಜ್ಯ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ಉಡುಪಿಯ ಸೈಂಟ್ ಮೇರಿಸ್ ಕೈಗಾರಿಕಾ ತರಬೇತಿ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲಾ ಘಟಕದ ಪದ ಪ್ರದಾನ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಅವರು ಚೆಂಡೆವಾದನದ ಮೂಲಕ ಉದ್ಘಾಟಿಸಿ, ಜನಪದ ಕಲೆಯನ್ನು ದಾಖಲೀಕರಣ ಮಾಡಬೇಕಾದ, ಮುಂದಿನ ಪೀಳಿಗೆಗೆ ಈ ಕಲೆಯನ್ನು ಉಳಿಸಿ ಬೆಳೆಸಬೇಕಾದ ತುರ್ತು ಅವಶ್ಯಕತೆ ಇದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೋಕ ಮಾತ ಚರ್ಚಿನ ಸಹಾಯಕ ಧರ್ಮಗುರು ಮೇಲ್ವಿನ್ ರೋಯ್ ಲೋಬೋ ವಹಿಸಿದ್ದರು. ಮೂಡುಸಗ್ರಿ ಕ್ಷೇತ್ರದ ಧರ್ಮದರ್ಶಿ ಭಾಸ್ಕರ ಗುಂಡಿಬೈಲು ಶುಭ ಹಾರೈಸಿದರು. ವೇದಿಕೆಯಲ್ಲಿ ಸೈಂಟ್ ಮೇರಿಸ್ ಐಟಿಐ ಕಾಲೇಜಿನ ಪ್ರಾಂಶುಪಾಲ ವಿಜಯ್, ಉಡುಪಿ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ಮುಂತಾದವರಿದ್ದರು.ಈ ಸಂದರ್ಭ ಹಿರಿಯ ಜನಪದತಜ್ಞ ಡಾ. ಗಣನಾಥ ಎಕ್ಕಾರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಗಂಗಾಧರ ಕಿದಿಯೂರು, ಸುರಭಿ ಮಹಿಳಾ ಚೆಂಡೆ ವಾದನ ಬಳಗದ ಸುನಂದ ಗೋಪಾಲ ಗಾಣಿಗ ಬೈಂದೂರು ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ವತಿಯಿಂದ ರಾಜ್ಯ ಅಧ್ಯಕ್ಷ ಡಾ.ಎಸ್ ಬಾಲಾಜಿ ಮತ್ತು ಜಿಲ್ಲಾ ಅಧ್ಯಕ್ಷ ಡಾ.ಗಣೇಶ್ ಕುಮಾರ್ ಗಂಗೊಳ್ಳಿ ಅವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಡಾ.ಗಣೇಶ್ ಗಂಗೊಳ್ಳಿ ನೇತೃತ್ವದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕಾರ್ಯಾಧ್ಯಕ್ಷ ಉದಯ ಕುಮಾರ್ ಹೈಕಾಡಿ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಸುವರ್ಣ ಕಟಪಾಡಿ ವಂದಿಸಿದರು.ಸುರಭಿ ಮಹಿಳಾ ಚೆಂಡೆ ವಾದನ ಬಳಗದಿಂದ ಚೆಂಡೆ ವಾದನ ಪ್ರದರ್ಶನ ಮತ್ತು ಜಾನಪದ ಕಲಾವಿದರಾದ ಡಾ.ಗಣೇಶ್ ಗಂಗೊಳ್ಳಿ, ಅಶ್ವಿನಿ ಸುವರ್ಣ ಪಡುಬಿದ್ರೆ, ವಸಂತಿ ಕಡಂಬಳ ಕಾರ್ಕಳ, ರಮಣಿ ರವಿ ಬೈಂದೂರು ಅವರಿಂದ ಜಾನಪದ ಗಾಯನ ನಡೆಯಿತು. ಹಿಮ್ಮೇಳದಲ್ಲಿ ರೋಹಿತ್ ಕುಮಾರ್ ಮಲ್ಪೆ, ಸುರೇಶ್ ಲಕ್ಷ್ಮೀನಗರ ಸಹಕರಿಸಿದರು.