ಎಸ್ಸೆಸ್ಸೆಲ್ಸಿ ಪರೀಕ್ಷೆಯು ನಿಮ್ಮ ಜೀವನದ ಪ್ರಮುಖ ಘಟ್ಟವಾಗಿದೆ. ಶಿಕ್ಷಕರು ಹೇಳಿಕೊಟ್ಟ ಪಾಠ ಸರಿಯಾಗಿ ಅಭ್ಯಾಸ ಮಾಡಿದಲ್ಲಿ ಪರೀಕ್ಷೆಯ ಬಗ್ಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ
ಲಕ್ಷ್ಮೇಶ್ವರ: ಪರೀಕ್ಷೆಯನ್ನು ಸಂಭ್ರಮಿಸಿ ಹಬ್ಬದಂತೆ ಆಚರಿಸಿ. ಅದರ ಬಗ್ಗೆ ಭಯ ಬೇಡ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಿಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಹೇಳಿದರು.
ಶುಕ್ರವಾರ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಡವಿ ಹಾಗೂ ಬಿಇಓ ಕಚೇರಿ ಸಹಯೋಗದಲ್ಲಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಪ್ರತಿಭಾಶಾಲಿ ವಿದ್ಯಾರ್ಥಿಗಳ 3 ದಿನಗಳ ಯಶೋ ಸಾಧನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯು ನಿಮ್ಮ ಜೀವನದ ಪ್ರಮುಖ ಘಟ್ಟವಾಗಿದೆ. ಶಿಕ್ಷಕರು ಹೇಳಿಕೊಟ್ಟ ಪಾಠ ಸರಿಯಾಗಿ ಅಭ್ಯಾಸ ಮಾಡಿದಲ್ಲಿ ಪರೀಕ್ಷೆಯ ಬಗ್ಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಕಠಿಣ, ಪರಿಶ್ರಮ ಹಾಗೂ ಏಕಾಗ್ರತೆಯಿಂದೆ ಅಭ್ಯಾಸ ಮಾಡಿದಲ್ಲಿ ಹೆಚ್ಚು ಅಂಕ ಗಳಿಸುವುದು ಸುಲಭದ ಮಾತಾಗಿದೆ ಎಂದು ಹೇಳಿದರು.
ಬಿ.ಸಿ.ಎನ್ ವಿದ್ಯಾಸಂಸ್ಥೆಯ ನಿರ್ದೇಶಕ ಲೋಹಿತ ನೆಲವಿಗಿ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಅವಕಾಶ ಸೃಷ್ಟಿಯಾಗುತ್ತವೆ. ಸಿಕ್ಕಿರುವ ಸಮಯ ಸದುಪಯೋಗ ಪಡಿಸಿಕೊಂಡು ಪರಿಶ್ರಮಪಟ್ಟು ಆಸಕ್ತಿಯಿಂದ ಅಧ್ಯಯನ ಮಾಡಿ ಉನ್ನತ ಸಾಧನೆಗೆ ಸಜ್ಜಾಗಬೇಕು. ಅದಕ್ಕೆ ನಮ್ಮ ಸಂಸ್ಥೆ ನಿಮಗೆ ಸಹಕಾರಿಯಾಗಿರುತ್ತದೆ ಎಂದು ಹೇಳಿದರು.
ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿ.ಎಸ್.ಐ ನಾಗರಾಜ ಗಡದ ಮಾತನಾಡಿ, ಸಾಧನೆ ಎನ್ನುವುದು ಸಾಧಕನ ಸ್ವತ್ತು. ನಿಮ್ಮ ಆರ್ಥಿಕ ಹಿನ್ನೆಲೆ ಅದೇನೆ ಇದ್ದರೂ ಅದೆಷ್ಟೇ ಕಡು ಬಡವರಿದ್ದರೂ ನಿಮ್ಮ ಪ್ರತಿಭೆ ಪರಿಶ್ರಮದಿಂದ ಸಮಾಜ ತಿರುಗಿ ನೋಡುವ ಸಾಧನೆ ಮಾಡಬಹುದು ಎಂದರು.
ಪ್ರಾಚಾರ್ಯ ಎನ್.ಸಿ.ಕೆ ಪಾಟೀಲ ಮಾತನಾಡಿ, ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಎಂದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಪ್ರೌಢ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ, ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷ ಎಲ್.ಎಸ್. ಅರಳಿಹಳ್ಳಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಎಚ್.ಎಂ. ಗುತ್ತಲ, ಸಂಗಮೇಶ ಅಂಗಡಿ, ಸಂಪನ್ಮೂಲ ವ್ಯಕ್ತಿ ಅರವಿಂದ ದೇಶಪಾಂಡೆ, ಎಂ.ಎಸ್. ಮಳಿಮಠ ಇದ್ದರು.
ಸಂಪನ್ಮೂಲ ಶಿಕ್ಷಕ ಎಸ್.ಪಿ. ಹಲಸೂರ, ವಿನಾಯಕ ಘೋರ್ಪಡೆ, ಫಕಿರೇಶ ಚಕಾರದ, ಮೇರಿ ಅಂಥೋನಿ, ಎ.ಎ. ನದಾಫ, ನಾಗರಾಜ ಮಜ್ಜಿಗುಡ್ಡದ ಇದ್ದರು.
ಲಕ್ಷ್ಮೇಶ್ವರ ಭಾಗದ 40 ಪ್ರೌಢಶಾಲೆಗಳ 135ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ವಡವಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಿ.ಆರ್.ಪಿ ಸತೀಶ ಬೋಮಲೆ ಸ್ವಾಗತಿಸಿದರು, ಉಮೇಶ ನೇಕಾರ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಬಂಡಿವಾಡ ವಂದಿಸಿದರು. ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಹಾಗೂ ವಡವಿ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕ ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.