ಶಿವಮೊಗ್ಗ: ಜಿಲ್ಲಾ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ಗುಸುಗುಸು ಶುರುವಾಗಿದೆ. ಯಾವುದೇ ಕಾರಣಕ್ಕೂ ಜಿಲ್ಲಾಸ್ಪತ್ರೆ ಸ್ಥಳಾಂತರ ಮಾಡದಂತೆ ಮಾಜಿ ಶಾಸಕ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಜನರ ಆರೋಗ್ಯ ಕಾಪಾಡುವಲ್ಲಿ ಮೆಗ್ಗಾನ್ ಆಸ್ಪತ್ರೆ ಪ್ರಮುಖ ಪಾತ್ರ ವಹಿಸಿದೆ. ಜಿಲ್ಲಾಸ್ಪತ್ರೆ ಬದಲಾವಣೆ ಬಗ್ಗೆ ಆಗಾಗ ಚರ್ಚೆ ನಡೆಯುತ್ತಿತ್ತು. ಈಗ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಈಗಾಗಲೇ ೬ ಎಕರೆ ಜಾಗವನ್ನು ಹುಡುಕಲು ಶುರುವಾಗಿದೆ. ಯಾವ ತಾಲೂಕಿಗೆ ಸ್ಥಳಾಂತರವಾಗುತ್ತದೆ ಎಂಬುದು ಗೊತ್ತಿಲ್ಲ ಎಂದರು.ಜಿಲ್ಲಾ ಆಸ್ಪತ್ರೆ ಎಲ್ಲಿದಿಯೋ ಅಲ್ಲೇ ಮುಂದುವರಿಯಬೇಕಿದೆ. ಯಾವ ತಾಲೂಕಿಗೂ ಹೋಗುವುದು ಬೇಡ. ಬೇರೆ ಕಡೆ ಆರು ಎಕರೆ ಗುರುತಿಸಿ ಆಸ್ಪತ್ರೆ ಮಾಡುವುದು ಬೇಡ. ಈಗಿರುವ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ನಗರ ಪಾಲಿಕೆಯಿಂದ ಕೋಟ್ಯಂತರ ರು. ಖರ್ಚುಮಾಡಿ, ಕಾಂಫ್ಲೆಕ್ಸ್ಗಳನ್ನು ಮಾಡಿದ್ದರೂ ಬಾಡಿಗೆ ನೀಡಿಲ್ಲ. ಗಾರ್ಡನ್ ಏರಿಯಾದಲ್ಲಿನ ಕಟ್ಟಡ, ಶಿವಪ್ಪನಾಯಕ ವೃತ್ತದಲ್ಲಿನ ಕಟ್ಟಡ ವೆಂಕಟೇಶ ನಗರದಲ್ಲಿನ ಕಟ್ಟಡ ಇನ್ನು ಬಾಡಿಗೆ ನೀಡಿಲ್ಲ. ಇದ್ದ ಕಟ್ಟಡಗಳನ್ನು ಒಡೆದು ಹಾಕಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಗತಿ ಆಗಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ, ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಸಂಗಯ್ಯ, ಸಂತೋಷ್, ಉಮಾಶಂಕರ ಉಪಾಧ್ಯಾ, ರಘು, ಸುನಿಲ್ ಗೌಡ, ಗೋಪಿ ಮೊದಲಿಯಾರ್, ದಯಾನಂದ್, ನಿಹಾಲ್ ಇದ್ದರು.