ನೇಮಕ, ವರ್ಗಕ್ಕೆ ಯಾರಿಗೂ ಹಣ ಕೊಡ್ಬೇಡಿ: ಸಿಎಂ

KannadaprabhaNewsNetwork |  
Published : Feb 22, 2026, 02:00 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ವರ್ಗಾವಣೆಗಾಗಿ ಯಾರ ಬಳಿಯೂ ಹೋಗಬೇಡಿ, ಯಾರಿಗೂ ಹಣ ಕೊಟ್ಟು ಕಳೆದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹಂತ ಹಂತವಾಗಿ ನೇಮಕಾತಿ ಮಾಡಲಾಗುವುದು. ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಭಷ್ಟಾಚಾರ ತಡೆಯುವುದು ನಮ್ಮ ಸರ್ಕಾರದ ಆಶಯ. ಹಾಗಾಗಿ ನೇಮಕಾತಿ, ವರ್ಗಾವಣೆಗಾಗಿ ಯಾರ ಬಳಿಯೂ ಹೋಗಬೇಡಿ, ಯಾರಿಗೂ ಹಣ ಕೊಟ್ಟು ಕಳೆದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶನಿವಾರ ನಗರದ ಅಂಬೇಡ್ಕರ್‌ ಭರವನದಲ್ಲಿ ಆಯೋಜಿದ್ದ ‘ಅಭಯ ಹಸ್ತ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ವೃಂದಗಳ ನೇಮಕಾತಿ ಆದೇಶಗಳ ವಿತರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಾನು 40 ವರ್ಷಗಳಿಗೂ ಹೆಚ್ಚು ಕಾಲ ಶಾಸಕ, ಮಂತ್ರಿ, ವಿಪಕ್ಷ ನಾಯಕ ಹಾಗೂ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಈ ಮೊದಲು ವರ್ಗಾವಣೆಯಲ್ಲಿ ಅಷ್ಟೊಂದು ಹಣ ಇರಲಿಲ್ಲ. ಈಗ ಹೆಚ್ಚಾಗುತ್ತಿದೆ. ನಮ್ಮಲ್ಲಿ ವರ್ಗಾವಣೆ ಏಜೆಂಟರು ಶುರುವಾಗಿದ್ದಾರೆ. ಅವರು ನಮಗೆ ಯಾರು ಹತ್ತಿರ ಇದ್ದಾರೆ ಅವರನ್ನೇ ಹುಡುಕುತ್ತಾರೆ. ದಯಮಾಡಿ ಯಾರಿಗೂ ನೇಮಕಾತಿ, ವರ್ಗಾವಣೆಗಾಗಿ ಹಣ ಕೊಡಬೇಡಿ. ಹೋದರೆ ಆ ಏಜೆಂಟರುಗಳಿಗೂ ಕೊಡಬೇಕು, ಅಧಿಕಾರಿಗಳಿಗೂ ಹಣ ಕೊಡಬೇಕು. ಮುಂದೆ ಯಾರೂ ಹಣ ಕೊಡಬಾರದು, ಯಾರೂ ಹಣವನ್ನು ತೆಗೆದುಕೊಳ್ಳಲೂ ಬಾರದು. ಇದಕ್ಕಾಗಿಯೇ ನಾವು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡುತ್ತಿದ್ದೇವೆ. ಆರೋಗ್ಯ ಇಲಾಖೆಯಲ್ಲಿ 5700 ಹುದ್ದೆಗಳನ್ನು ಕೌನ್ಸೆಲಿಂಗ್‌ ಮೂಲಕ ಪಾರದರ್ಶಕವಾಗಿ ವರ್ಗಾವಣೆ ಮಾಡಲಾಗಿದೆ. ನೇಮಕಾತಿಯನ್ನೂ ಕೌನ್ಸೆಲಿಂಗ್‌ ಮೂಲಕ ನಡೆಸಲಾಗುತ್ತಿದೆ ಎಂದರು.

ಶಿಕ್ಷಣ, ಆರೋಗ್ಯ, ಪೊಲೀಸ್‌ ಹುದ್ದೆ ಭರ್ತಿಗೆ ಆದ್ಯತೆ:

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟಾರೆ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳ ಖಾಲಿ ಇವೆ. ಸಮಾಜದ ಸ್ವಾಸ್ತ್ಯ ಕಾಪಾಡಬೇಕೆಂದರೆ ಅಗತ್ಯ ಸೇವೆಗಳ ಇಲಾಖೆಗಳಾದ ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್‌ ಇಲಾಖೆಗಳಲ್ಲಿನ ಹುದ್ದೆಗಳು ಹೆಚ್ಚು ಕಾಲ ಹಾಗೂ ಹೆಚ್ಚು ಸಂಖ್ಯೆಯಲ್ಲಿ ಖಾಲಿ ಇರಬಾರದು. ಹಾಗಾಗಿ ಈ ಮೂರು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ವಿಶೇಷ ಆದ್ಯತೆ ನೀಡಿ ಭರ್ತಿ ಮಾಡಲು ತೀರ್ಮಾನಿಸಲಾಗಿದೆ. ಉಳಿದ ಇಲಾಖೆಗಳ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದರು.

ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿಗಳಿಗೆ ಒಂದು ಪ್ರತ್ಯೇಕ ‘ನೇಮಕಾತಿ ಮಂಡಳಿ'''''''' ರಚನೆಗೆ ಯೋಜಿಸಿದ್ದು, ನಿವೃತ್ತರಾದ ತಕ್ಷಣ ನೇಮಕಾತಿ ಪ್ರಕ್ರಿಯೆ ನಡೆದರೆ ಮಾನವ ಸಂಪನ್ಮೂಲ ಕೊರತೆ ತಡೆಯಲು ಸಹಕಾರಿ. ಸಿಎಂಗೆ ಈ ಕುರಿತು ವಿನಂತಿ ಮಾಡಲಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕಲ್ಯಾಣ ಕರ್ನಾಟಕ ವೃಂದ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ
ಸಂಸ್ಕೃತಿಯ ಪ್ರತೀಕ ಶಾರದ ವಿದ್ಯಾಸಂಸ್ಥೆ