
ಶಿವಮೊಗ್ಗ: ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜಗತ್ತಿಗೇ ನಾನೇ ದೊಡ್ಡಣ್ಣ ಎಂದು ಹೇಳುತ್ತಾ ನಾನೊಬ್ಬ ವ್ಯಾಪಾರಿ ಎನ್ನುತ್ತಾ ದೇಶ ದೇಶಗಳ ನಡುವೆ ಎತ್ತಿಕಟ್ಟಿ ತನ್ನ ವ್ಯಾಪಾರಿ ಜಾಣ್ಮೆಯನ್ನು ಮೆರೆಸುತ್ತಿದ್ದು, ಜಗತ್ತಿಗಷ್ಟೇ ಅಲ್ಲ ನಮ್ಮ ಭಾರತ ದೇಶಕ್ಕೂ ಕಂಟಕವಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಹೈನುಗಾರಿಕೆಯಲ್ಲಿ ವಿಶ್ವದಲ್ಲೇ ಭಾರತ ನಂಬರ್ ಒನ್ ಸ್ಥಾನದಲ್ಲಿದ್ದು, ನಮ್ಮ ಇಡೀ ಹೈನು ಉದ್ಯಮವನ್ನು ನಾಶಮಾಡುವ ಪ್ರಯತ್ನವನ್ನು ಟ್ರಂಪ್ ಮಾಡುತ್ತಿದ್ದಾರೆ. ಹೈನು ಉತ್ಪನ್ನಗಳು ಭಾರತಕ್ಕೆ 11 ವರ್ಷಕ್ಕಾಗುವಷ್ಟು ಅಮೇರಿಕಾದಲ್ಲಿ ಉತ್ಪತ್ತಿಯಾಗುತ್ತಿದ್ದು, ಅದನ್ನು ಸುಂಕರಹಿತವಾಗಿ ಭಾರತದೊಳಗೆ ಪ್ರವೇಶಿಸಿ, ಇಲ್ಲಿ ಮಾರುಕಟ್ಟೆ ಕಲ್ಪಿಸುವ ಪ್ರಯತ್ನವನ್ನು ಟ್ರಂಪ್ ಮಾಡುತ್ತಿದ್ದಾರೆ. ಹಾಗೇನಾದರೂ ಆದಲ್ಲಿ ಭಾರತೀಯ ರೈತರು ನೇಣುಹಾಕಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಯಾವುದೇ ಕಾರಣಕ್ಕೂ ಕೃಷಿ ಮತ್ತು ಆರೋಗ್ಯ ಎರಡೂ ವಿಷಯಗಳಲ್ಲಿ ಅಮೆರಿಕಾ ಇಲ್ಲಿಗೆ ಕಾಲಿಡಬಾರದು ಎಂದರು.
ಅದೇ ರೀತಿ ಅಲ್ಲಿ ನಿಷೇಧ ಮಾಡಿದ ಕುಲಾಂತರಿ ಆಹಾರ ಪದಾರ್ಥಗಳನ್ನೂ ಭಾರತದ ಮಾರುಕಟ್ಟೆಯಲ್ಲಿ ಮಾರುವ ಪ್ರಯತ್ನ ಮಾಡಲಾಗುತ್ತಿದ್ದು, ಸುಂಕಮುಕ್ತ ಪ್ರವೇಶಕ್ಕೆ ಸಿದ್ಧತೆ ಮಾಡುತ್ತಿದೆ. ಇಲ್ಲಿಯ ಮಾರುಕಟ್ಟೆಯನ್ನು ಭದ್ರವಾಗಿ ಆಕ್ರಮಣ ಮಾಡುವ ತಂತ್ರಗಾರಿಕೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ವಿದೇಶಗಳಿಂದ ಅಲ್ಲಿ ನಿಷೇಧಿಸಲ್ಪಟ್ಟ ಆಹಾರ ಉತ್ಪನ್ನಗಳನ್ನು ಇಲ್ಲಿ ಮಾರುಕಟ್ಟೆ ಪ್ರವೇಶ ಮಾಡದಂತೆ ತಡೆಹಿಡಿಯಬೇಕು. ಡೊನಾಲ್ಡ್ಟ್ರಂಪ್ ತಂತ್ರಕ್ಕೆ ನಮ್ಮ ದೇಶದ ರೈತರನ್ನು ಮತ್ತು ಉದ್ಯಮಿಗಳನ್ನು ಬಲಿಕೊಡಬೇಡಿ ಎಂದು ಆಗ್ರಹಿಸಿದರು.ಕೆಎಸ್ಆರ್ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಿ:ಕೆಎಸ್ಆರ್ಟಿಸಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಒಪ್ಪಿ ಜಾರಿಗೊಳಿಸಬೇಕು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಪ್ರಕಾರ ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಿ, ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಅವರಿಗೆ ಸೌಲಭ್ಯ ನೀಡಬೇಕು. ಯಾವುದೇ ಕಾರಣಕ್ಕೂ ನೌಕರರ ಮೇಲೆ ಎಸ್ಮಾ ಜಾರಿಗೊಳಿಸಬಾರದು, ಕೊಟ್ಟ ಮಾತಿಗೆ ಸರಕಾರ ಬದ್ಧವಾಗಿರಬೇಕು ಎಂದು ಒತ್ತಾಯಿಸಿದರು.
ಎಚ್.ಎಸ್.ರುದ್ರಪ್ಪ ನೆನಪಿನ ದಿನ
ಆಗಸ್ಟ್ 19ರಂದು ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯದ ಉದ್ದಗಲಕ್ಕೂ ರೈತರ ಸಂಘಟನೆಗಳನ್ನು ಸಂಘಟಿಸುವಲ್ಲಿ ರೈತರ ಹಿತರಕ್ಷಣೆಗೆ ನಿರಂತರವಾಗಿ ಶ್ರಮಿಸಿದ್ದ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ರುದ್ರಪ್ಪ ಅವರ ನೆನಪಿನ ಕಾರ್ಯಕ್ರಮ ಆಯೊಜಿಸಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.ಅಂದು ನಗರದ ಪ್ರವಾಸಿ ಮಂದಿರದಿಂದ ರುದ್ರಪ್ಪನವರ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ಆಗಮಿಸಿ ಅಲ್ಲಿ ನೆನಪಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.