ತಾಳಿಕೋಟೆಯ ಕೆಳ ಸೇತುವೆಯು ಜಲಾವೃತವಾಗಿದ್ದು, ಅಪಾಯ ಲೆಕ್ಕಿಸದೇ ಜನರು, ವಾಹನಗಳ ಓಡಾಟ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ತಾಳಿಕೋಟೆಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ಮಳೆಯಿಂದ ಡೋಣಿ ನದಿಯಲ್ಲಿ ಪ್ರವಾಹ ಹೆಚ್ಚುತ್ತಾ ಸಾಗಿದ್ದು, ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿ ರಸ್ತೆ ಸಂಪರ್ಕಿತ ತಾಳಿಕೋಟೆಯ ಕೆಳಮಟ್ಟದ ಸೇತುವೆಯು ಪ್ರವಾಹಕ್ಕೆ ಸಂಪೂರ್ಣ ಜಲಾವೃತಗೊಂಡಿದೆ.
ನಿತ್ಯ ಸಾವಿರಾರು ವಾಹನಗಳ ಓಡಾಟವಿರುವ ಈ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ವಾನಗಳು ಮತ್ತು ಕಾರು, ಜೀಪು ಅಲ್ಲದೇ ಇನ್ನಿತರ ಸಣ್ಣ ಪುಟ್ಟ ವಾಹನಗಳು ಹೆಚ್ಚಿಗೆ ಸಂಚರಿಸುತ್ತವೆ. ರಾಜ್ಯ ಹೆದ್ದಾರಿಗೆ ೧೯೯೦ರಲ್ಲಿಯೇ ಡೋಣಿ ನದಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸಲಾಗಿದ್ದು, ಸೇತುವೆಯು ಕಳೆದ ೨ ವರ್ಷಗಳ ಹಿಂದೆ ಕುಸಿಯುವ ಹಂತ ತಲುಪಿದ್ದರಿಂದ ವಾಹನ ಓಡಾಟ ಸ್ಥಗಿತಗೊಳಿಸಿ ಕೆಳಮಟ್ಟದ ಸೇತುವೆಯ ಮೇಲೆ ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಈ ಸೇತುವೆಯ ಮೇಲೆ ಡೋಣಿ ನದಿಯ ಪ್ರವಾಹದದಿಂದ ಜಲಾವೃತಗೊಂಡಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಪ್ರವಾಹದಲ್ಲಿಯೇ ವಾಹನಗಳ ಓಡಾಟ:
ಡೋಣಿ ನದಿಯ ಪ್ರವಾಹದಿಂದ ಕೆಳಮಟ್ಟದ ಸೇತುವೆ ಜಲಾವೃತಗೊಂಡಿದ್ದರು ಕೆಲವು ವಾಹನ ಸವಾರರು ಬಂಡ ಧೈರ್ಯ ಮಾಡಿ ಪ್ರವಾಹದಲ್ಲಿಯೇ ಚಲಿಸುತ್ತಿರುವದು ಕಂಡುಬಂದಿದೆ. ಸೇತುವೆ ಸಂಪರ್ಕ ಕಡಿತಗೊಂಡರು ಮೂಕಿಹಾಳ, ಹಡಗಿನಾಳ ಮಾರ್ಗದಿಂದ ತಾಳಿಕೋಟೆ ಪಟ್ಟಣ ಸಂಪರ್ಕಕ್ಕೆ ೧೦ಕಿ.ಮೀ ದೂರದ ಸಂಪರ್ಕವಿದ್ದರು ಆ ಮಾರ್ಗಕ್ಕೆ ತೆರಳುತ್ತಿಲ್ಲ.
ಮೇಲಸೇತುವೆ ದುರಸ್ಥಿಗೊಳಿಸಿ:
ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿಯ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೇಲ್ಸೇತುವೆ ಕುಸಿಯುವ ಹಂತಕ್ಕೆ ತಲುಪಿ ೨ ವರ್ಷ ಕಳೆದಿದೆ. ಸೇತುವೆಯ ಮೇಲೆ ಸಂಚಾರ ಬಂದ್ ಮಾಡಲಾಗಿದೆ. ಕೂಡಲೇ ಮೇಲ್ಸೇತುವೆ ನಿರ್ಮಾಣ ಕಾರ್ಯವನ್ನು ಶೀಘ್ರ ಕೈಗೊಳ್ಳಬೇಕು ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ. ಕ್ಕೆ ಪೂನರ್ ನಿರ್ಮಾಣ ಕಾರ್ಯ ಸೀಘ್ರವೇ ಕೈಗೊಳ್ಳಬೇಕು ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕೆಂದು ಪ್ರಜ್ಞಾವಂತ ನಾಗರಿಕರ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಮಳೆ ಪ್ರಾರಂಭಗೊಂಡಿದ್ದರಿಂದ ಜಾನಕಿ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಪಟ್ಟಣದ ವಿಜಯಪುರ ವೃತ್ತದಿಂದ ಆಶ್ರಯ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಹರಿಯುವ ಹಳ್ಳಕ್ಕೆ ನಿರ್ಮಿಸಲಾದ ಸೇತುವೆಯು ಮುಳುಗಿದ್ದು, ಸಂಪರ್ಕ ಕಡಿತಗೊಂಡಿದೆ. ಇದರಿಂದ ಅನ್ಯಮಾರ್ಗದ ಮೂಲಕ ಬಡಾವಣೆಯ ಜನರು ಮನೆಗಳಿಗೆ ತೆರಳುತ್ತಿದ್ದಾರೆ. ದೇವರ ಹಿಪ್ಪರಗಿಗೆ ತೆರಳುವ ಮುಖ್ಯ ರಸ್ತೆಯಲ್ಲಿ ಬಳಿಯ ಮನೆಗಳಿಗೂ ನೀರು ಆವರಿಸಿಕೊಂಡಿದೆ.
ಸ್ಥಳಕ್ಕೆ ಎಸ್ಪಿ ಭೇಟಿ ಪರಿಶೀಲನೆ:
ಡೋಣಿ ನದಿಯಲ್ಲಿ ಪ್ರವಾಹ ಹೆಚ್ಚುತ್ತಾ ಸಾಗಿದ್ದರಿಂದ ಜಲಾವೃತಗೊಂಡ ಕೆಳಮಟ್ಟದ ಸೇತುವೆ ಹಾಗೂ ಪರಿಸ್ಥಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರಲ್ಲದೇ ನೀರಿನ ಪ್ರಮಾಣ ಏರುತ್ತಿರುವದರಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಹಡಗಿನಾಳ ಮೂಲಕ ವಾಹನಗಳ ಸಂಚರಿಸಲು ಸೂಛನೆ ನೀಡಿದರು. ಈ ಸಮಯದಲ್ಲಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.