ಕನ್ನಡಪ್ರಭ ವಾರ್ತೆ ಪುತ್ತೂರು
ಸೈನಿಕರಿಗೆ ದೇಶಭಕ್ತಿ ಮತ್ತು ದೇಶ ಸೇವೆ ಮಾಡಬೇಕು ಎಂಬ ಮನಸ್ಸು ಬಂದಾಗ ಅವರು ಯಾವುದೇ ಕಾರ್ಯಕ್ಕೂ ಸಿದ್ಧರಿರುತ್ತಾರೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅದೆಷ್ಟೋ ವೀರ ಸೈನಿಕರು ತಮ್ಮ ಪ್ರಾಣವನ್ನು ರಾಷ್ಟ್ರಕ್ಕಾಗಿ ಮುಡಿಪಿಡಲು ತಾವಾಗಿಯೇ ಮುಂದೆ ಬಂದಿದ್ದಾರೆ. ನಾವೆಲ್ಲರೂ ದೇಶಕ್ಕಾಗಿ ಚಿಂತನೆ ಮಾಡುವುದರೊಂದಿಗೆ ದೇಶ ಸೇವೆಗೆ ಅವಕಾಶ ಸಿಕ್ಕರೆ, ಯಾವುದೇ ಕಾರಣಕ್ಕೂ ಅದನ್ನು ಬಿಡಬಾರದು ಎಂದು ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಎಚ್. ಹೇಳಿದರು.ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಎನ್.ಸಿ.ಸಿ ಘಟಕದ ಸಹಯೋಗದಲ್ಲಿ ಶುಕ್ರವಾರ ನಡೆದ ಕಾರ್ಗಿಲ್ ವಿಜಯೋತ್ಸವದ ಬೆಳ್ಳಿನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ. ಎಂ ಕೃಷ್ಣಭಟ್, ನಮ್ಮ ದೇಶವನ್ನು ರಕ್ಷಣೆ ಮಾಡುವ ಸೈನಿಕ, ಉಳುಮೆ ಮಾಡುವ ರೈತ, ಜೀವಕ್ಕೆ ರಕ್ಷಣೆ ಒದಗಿಸುವ ವೈದ್ಯ ಮತ್ತು ವಿಜ್ಞಾನಿಗಳು ನಮ್ಮೆಲ್ಲರಿಗೂ ಮಾದರಿ. ನಾವೆಲ್ಲರೂ ರಾಷ್ಟ್ರಾಭಿಮಾನದಿಂದ ಬದುಕೋಣ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಭಾರತೀಯ ಭೂ ಸೇನೆಯ ನಿವೃತ್ತ ಯೋಧ ವಿದೀಪ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ . ವಿಷ್ಣು ಗಣಪತಿ ಭಟ್, ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ನಾಯ್ಕ್.ಬಿ, ಐಕ್ಯೂಎಸಿ ಘಟಕದ ಸಂಯೋಜಕ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಿವಪ್ರಸಾದ್ ಕೆ. ಎಸ್,ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆ. ಭಾಮಿ. ಅತುಲ್ ಶೆಣೈ ಉಪಸ್ಥಿತರಿದ್ದರು.ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ ಎನ್ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಡಾ.ಎಚ್.ಜಿ. ಶ್ರೀಧರ್ ವಂದಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ್ ಎಂ.ಕೆ ನಿರ್ವಹಿಸಿದರು.