ಲಕ್ಷ್ಮೇಶ್ವರ: ಪಟ್ಟಣದ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಹಾಕದೆ ಕಸ ತೆಗೆದುಕೊಂಡು ಹೋಗುವ ಕಸದ ಗಾಡಿಗೆ ಹಾಕುವ ಮೂಲಕ ಪಟ್ಟಣದ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಹೇಳಿದರು.
ಗುರುವಾರ ಪಟ್ಟಣದಲ್ಲಿ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವ ಕಸದ ಡಬ್ಬಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದ ಪ್ರತಿಯೊಂದು ರಸ್ತೆಯ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು, ಹಸಿ ಕಸ, ಒಣ ಕಸ ಬೇರ್ಪಡಿಸುವ ಸ್ಟೀಲ್ ಡಸ್ಟಬಿನ್ಗಳಿಗೆ ಹಾಕುವ ಮೂಲಕ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು. ಕಸವನ್ನು ರಸ್ತೆ, ಗಟಾರಗಳಲ್ಲಿ ಚೆಲ್ಲದೆ ಡಸ್ಟ್ ಬಿನ್ಗಳನ್ನು ಬಳಸಬೇಕು ಎಂದು ಹೇಳಿದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಅಂದಾಜು ₹6 ಲಕ್ಷ ವೆಚ್ಚದಲ್ಲಿ ಸುಮಾರು 62 ಸ್ಟಿಲ್ ಡಸ್ಟ್ ಬಿನ್ಗಳನ್ನು ಸಾರ್ವಜನಿಕರು ಹೆಚ್ಚು ಕಸ ಹಾಕುವ ಸ್ಥಳದಲ್ಲಿ, ದೇವಸ್ಥಾನ, ಮುಖ್ಯ ಬಜಾರ್ ರಸ್ತೆ, ಸರ್ಕಾರಿ ಆಸ್ಪತ್ರೆ , ಬಸ್ಸ್ಟ್ಯಾಂಡ್ ಸೇರಿದಂತೆ ಹೆಚ್ಚು ಕಸ ಉತ್ಪಾದನೆಯಾಗುವ ಜಾಗದಲ್ಲಿ ಇಡಲಾಗುವುದು. ಸಾರ್ವಜನಿಕರು ಕಸವನ್ನು ಹಸಿ ಕಸ, ಒಣ ಕಸ ಬೇರ್ಪಡಿಸಿ ಡಸ್ಟ್ ಬಿನ್ಗಳಿಗೆ ಹಾಕಿ, ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಈ ವೇಳೆ ಕಸ ತುಂಬುವ ಹಳೆಯ ಟ್ರ್ಯಾಕ್ಟರ್ ಟ್ರೇಲರ್ ರಿಪೇರಿಗೊಳಿಸಿ ಬಣ್ಣ ಹಚ್ಚಿ ಊರಿನ ಸ್ವಚ್ಛತೆಗೆ ನೀಡಿದರು.
ಪುರಸಭೆ ಸದಸ್ಯ ರಾಜೀವ ಕುಂಬಿ, ಬಸವರಾಜ ಓದುನವರ, ಪ್ರವೀಣ ಬಾಳಿಕಾಯಿ, ರಮೇಶ ಗಡದವರ, ಕಿರಣ ನವಲೆ, ನೀಲಪ್ಪ ಪೂಜಾರ, ಪ್ರಕಾಶ ಕೊಂಚಿಗೇರಿಮಠ, ಸಿದ್ದು ದುರಗಣ್ಣವರ, ಪುರಸಭೆ ಸಿಬ್ಬಂದಿ ಹನುಮಂತಪ್ಪ ನಂದೆಣ್ಣವರ, ಮಂಜು ಮುದಗಲ್ಲ, ನೇತ್ರಾ ಹೊಸಮನಿ, ಬಸವಣ್ಣೆಪ್ಪ ನಂದೆಣ್ಣವರ, ಉಮಾ ಬೆಳವಿಗಿ, ಸಿದ್ದಪ್ಪ ಬಾಲೆಹೊಸೂರ, ಸಿದ್ದು ಹಿರೇಮಠ ಇದ್ದರು.