ಉರಿಲಿಂಗ ಶ್ರೀ । ಜಿಲ್ಲಾಡಳಿತ ಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ
ಶಿಕ್ಷಣ ಪ್ರತಿಯೊಬ್ಬರ ಹಕ್ಕು ಎಂದು ಸಾರಿದವರು ಡಾ.ಬಿ.ಆರ್. ಅಂಬೇಡ್ಕರ್. ಜ ೨೬ ರಿಂದ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥ ಚಾಮರಾಜನಗರ ಜಿಲ್ಲೆಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಸಂವಿಧಾನ ವಿಚಾರಗಳನ್ನು ಸಾರ್ವಜನಿಕರಿಗೆ ಮನ ಮುಟ್ಟಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ. ಚಾಮರಾಜನಗರ ಜಿಲ್ಲಾ ಘಟಕ ವತಿಯಿಂದ ನಡೆದ ಡಾ. ಬಿ.ಅರ್.ಅಂಬೇಡ್ಕರ್ ರವರ ೧೩೩ ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬೋಧಿವೃಕ್ಷಕ್ಕೆ ನೀರೆರೆಯುವ ಮೂಲಕ ಅವರು ಉದ್ಘಾಟಿಸಿದರು. ಅಧಿಕಾರ ಬಂದ ಮೇಲೆ ಅಧಿಕಾರ ಕೊಟ್ಟವರನ್ನು ಮರೆತು ಬಿಡುವ ಕಾಲ ಇದಾಗಿದೆ. ಬಾಬಾ ಸಾಹೇಬರು ಸಂವಿಧಾನದ ಅಡಿಯಲ್ಲಿ ನಿಮಗೆ ನ್ಯಾಯವನ್ನು ಕೊಟ್ಟಿದ್ದಾರೆ, ಅವರನ್ನು ಜಯಂತಿ ಹಾಗೂ ಭಾವಚಿತ್ರಗಳಲ್ಲಿ ಮಾತ್ರ ಬಿಂಬಿಸುತ್ತಿದ್ದೀರಿ. ಅವರ ತತ್ವಗಳನ್ನು ಪಾಲಿಸಿ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದರೆ ಅವರ ಕೊಡುಗೆಗಳಿಗೆ ಬೆಲೆ ಬಂದಂತಾಗುತ್ತದೆ ಎಂದು ಹೇಳಿದರು.ಪ್ರತಿಯೊಬ್ಬರಿಗೂ ಒಂದೆ ನ್ಯಾಯ ಎಂದು ಸಾರಿದವರು ಡಾ. ಅಂಬೇಡ್ಕರ್, ಅವರ ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನೆದುರಿಸಿ ಬಂದರೂ ನಮಗೆ ಸಂತೋಷದ ಜೀವನ ನೀಡಿದ ಮಹಾ ಚೇತನ ಬಾಬಾ ಸಾಹೇಬರು, ಅವರನ್ನು ಪ್ರತಿಯೊಬ್ಬರೂ ನೆನೆಯಲೇ ಬೇಕು ಎಂದು ತಿಳಿಸಿದರು.
ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಚುನಾವಣೆಯಲ್ಲಿ ೧೮ ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕನ್ನು ತಂದುಕೊಟ್ಟವರು. ಎಲ್ಲರಿಗೂ ಒಂದೆ ಕಾನೂನು ಎಂದು ಸಂವಿಧಾನದಲ್ಲಿ ತಿಳಿಸಿದ್ದಾರೆ. ಜಾತಿ ಪದ್ಧತಿಯನ್ನು ಹೋಗಲಾಡಿಸಲು ಹೋರಾಟಗಳನ್ನು ನಡೆಸಿದರು. ಅದರೂ ಇನ್ನು ಕೆಲವು ಕಡೆ ಜಾತಿ ಪದ್ದತಿ ತಾಂಡವಾಡುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ಪುಟ್ಟಸ್ವಾಮಿ, ಪ್ರಕಾಶ್, ಗೌರವಾಧ್ಯಕ್ಷ ದೇವರಾಜು, ಖಜಾಂಚಿ ರಾಜು, ಲೆಕ್ಕ ಪರಿಶೋಧಕ ಮಲ್ಲಿಕಾರ್ಜುನ, ಉಪಾಧ್ಯಕ್ಷ ಶಿವಮೂರ್ತಿ, ಸಂಘಟನಾ ಕಾರ್ಯದಶಿ ರವಿ, ಶಿವಮಲ್ಲಯ್ಯ, ಸಂಘಟಕರು ಮಹದೇವಸ್ವಾಮಿ, ರೇವಣ್ಣ, ಕಾಳಸ್ವಾಮಿ, ಮಹೇಶ್.ಜಿ, ಮಹದೇವಯ್ಯ, ನಟರಾಜು, ಸದಸ್ಯರು ಹಾಜರಿದ್ದರು.
---------------------
ಚಾಮರಾಜನಗರದ ಜಿಲ್ಲಾಡಳಿತ ಭವನದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ. ಚಾಮರಾಜನಗರ ಜಿಲ್ಲಾ ಘಟಕ ವತಿಯಿಂದ ನಡೆದ ಬಾಬಾ ಸಾಹೇಬ್ ಡಾ. ಬಿ.ಅರ್.ಅಂಬೇಡ್ಕರ್ ರವರ ೧೩೩ ನೇ ಜನ್ಮದಿನಾಚರಣೆ. ಕಾರ್ಯಕ್ರಮದಲ್ಲಿ ಬೋಧಿವೃಕ್ಷಕ್ಕೆ ನೀರಾಕುವ ಮೂಲಕ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು.
25ಸಿಎಚ್ಎನ್14